
ಬಳ್ಳಾರಿ (ಅ.23): ಎಸ್ಸಿ, ಎಸ್ಟಿಸಮುದಾಯದ ಮೀಸಲಾತಿ ಹೆಚ್ಚಿಸುವ ನಿರ್ಧಾರವನ್ನು ಕೈಗೊಂಡಿರುವ ರಾಜ್ಯ ಬಿಜೆಪಿ ಸರ್ಕಾರ ಅದರ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದು, ನ.20ರಂದು ಎಸ್ಟಿ ಮೋರ್ಚಾದ ರಾಜ್ಯ ಮಟ್ಟದ ಸಮಾವೇಶವನ್ನು ಬಳ್ಳಾರಿಯಲ್ಲಿ ಅದ್ಧೂರಿಯಾಗಿ ನಡೆಸಲು ನಿರ್ಧರಿಸಿದೆ. ಇಲ್ಲಿನ ಕೆಆರ್ಎಸ್ ಫಂಕ್ಷನ್ ಹಾಲ್ನಲ್ಲಿ ಶನಿವಾರ ಜರುಗಿದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಸಚಿವ ಬಿ.ಶ್ರೀರಾಮುಲು, ವಿಜಯನಗರ ಜಿಲ್ಲಾ ಸಚಿವ ಬಿ.ಆನಂದಸಿಂಗ್ ಸೇರಿದಂತೆ ಪಕ್ಷದ ಮುಖಂಡರು ಸಮಾವೇಶವನ್ನು ನಗರದಲ್ಲಿ ಅದ್ಧೂರಿಯಾಗಿ ನಡೆಸುವ ನಿರ್ಣಯ ಕೈಗೊಂಡರು.
ಈ ಹಿಂದಿನ ಸರ್ಕಾರಗಳು ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಲಿಲ್ಲ. ಸಚಿವ ಬಿ.ಶ್ರೀರಾಮುಲು ಅವರ ನಿರಂತರ ಪರಿಶ್ರಮದಿಂದ ಇದು ಸಾಧ್ಯವಾಗಿದೆ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಕಾರಣವಾಗಿದ್ದು ಈ ಹಿಂದಿನ ಕಾಂಗ್ರೆಸ್ ಸರ್ಕಾರ ಏನೂ ಕೆಲಸ ಮಾಡಲಿಲ್ಲ ಎಂದು ಸಭೆಯಲ್ಲಿ ಭಾಗವಹಿಸಿದ್ದ ಸಚಿವ ಆನಂದಸಿಂಗ್ ಹೇಳಿದರು. ಕಲ್ಯಾಣ ಕರ್ನಾಟಕದಲ್ಲಿ ಎಸ್ಟಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದು ಹೀಗಾಗಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಗಿದೆ. ಸಮಾವೇಶದಿಂದ ರಾಜಕೀಯವಾಗಿ ಪಕ್ಷಕ್ಕೆ ಲಾಭವಾಗಲಿದೆ. ಮುಖ್ಯಮಂತ್ರಿ ಸೇರಿದಂತೆ ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಮುಂದೆ ರಾಜಕೀಯದಲ್ಲಿ ಇರ್ತೇನೋ, ಇಲ್ವೋ..?: ಸಚಿವ ಶ್ರೀರಾಮುಲು
ಎಸ್ಸಿ/ಎಸ್ಟಿ ಸಮಾಜದ ಅಭ್ಯುದಯಕ್ಕೆ ಸರ್ಕಾರ ಬದ್ಧ: ಎಸ್ಸಿ, ಎಸ್ಟಿ ಸಮಾಜದ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ರಾಜ್ಯ ಸರ್ಕಾರ ತಡವಾಗಿ ತೀರ್ಮಾನ ತೆಗೆದುಕೊಂಡರೂ ಐತಿಹಾಸಿಕ ನಿರ್ಣಯವನ್ನೇ ತೆಗೆದುಕೊಂಡಿದೆ. ಈ ಮೂಲಕ ಕೆಳ ಸಮುದಾಯದ ಏಳ್ಗೆಗೆ ಕಂಕಣ ಬದ್ಧವಾಗಿದೆ ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು. ಬೆಂಗಳೂರು ಪ್ರೀಡಂ ಪಾರ್ಕಿನಲ್ಲಿ ಧರಣಿ ನಿರತ ವಾಲ್ಮೀಕಿ ಪ್ರಸನ್ನಾನಂದ ಸ್ವಾಮಿ ಅವರನ್ನು ಭೇಟಿ ಮಾಡಿ ಮಾತನಾಡಿದರು. ಮಹರ್ಷಿ ಶ್ರೀವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಪ್ರಸನ್ನಾನಂದ ಸ್ವಾಮಿ ಅವರ ಸುದೀರ್ಘದ ಹೋರಾಟಕ್ಕೆ ಫಲ ಸಿಕ್ಕಿದೆ.
ಆದರೆ, ಹೋರಾಟ ಕೈಬಿಡುವಂತೆ ಕೆಲವರು ಮನವಿ ಮಾಡಿದರೆ, ಇನ್ನು ಕೆಲವರು ಹೋರಾಟ ಕೈಬಿಟ್ಟರೆ ಮೀಸಲಾತಿ ಹೆಚ್ಚಳವಾಗುವುದು ಅನುಮಾನ ಎಂಬ ಹೇಳಿದರು. ಆದರೆ ಮೀಸಲಾತಿ ಎಂಬುದು ಎಸ್ಸಿ, ಎಸ್ಟಿ ಸಮುದಾಯಗಳ ಸಂವಿಧಾನ ಬದ್ಧ ಹಕ್ಕು. ಅವರ ನ್ಯಾಯಯುತ ಬೇಡಿಕೆಯನ್ನು ಸರ್ಕಾರ ಈಡೇರಿಸಿದೆ. ಇದು ಜಾರಿಯಾಗುವ ವಿಚಾರದಲ್ಲಿ ಯಾರಿಗೂ ಅನುಮಾನ ಬೇಡ. ಯಾವುದೇ ಮಹತ್ತರ ಕಾರ್ಯವಾಗಬೇಕಾದರೆ ಸಮಯ ಬೇಕಾಗುತ್ತದೆ. ಈ ವಿಚಾರದಲ್ಲಿ ಅಷ್ಟೆವಿಳಂಬವಾದರೂ ಒಳ್ಳೆಯ ನಿರ್ಧಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಸರ್ಕಾರ ತೆಗೆದುಕೊಂಡಿದೆ.
ಸಿದ್ದರಾಮಯ್ಯ ಜೋಕರ್, ಪೆದ್ದ, ಶಕುನಿ ಇದ್ದಂತೆ: ಸಚಿವ ಶ್ರೀರಾಮುಲು
ಜನರ ಬದುಕಿನ ಜೊತೆ ರಾಜಕೀಯ ಮಾಡಬಾರದು. ರಾಜಕೀಯ ಭವಿಷ್ಯದ ಬಗ್ಗೆ ಕಿಂಚತ್ತು ಯೋಚನೆ ಮಾಡದೇ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವುದು ಐತಿಹಾಸಿಕ ನಿರ್ಣಯ ಎಂದು ಬಣ್ಣಿಸಿದರು. ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾ ಸಭಾದ ಅಧ್ಯಕ್ಷ ಸಿರಿಗೇರಿ ತಿಪ್ಪೇಸ್ವಾಮಿ, ನಿವೃತ್ತ ಜಿಲ್ಲಾಧಿಕಾರಿ ಬಿ.ಶಿವಪ್ಪ, ನಿವೃತ್ತ ಜೈಲು ಅಧಿಕಾರಿ ಹತ್ತಿಕೋಟಿ ವೀರೇಂದ್ರ ಸಿಂಹ, ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಮೃತ್ಯುಂಜಯ, ಮಾಜಿ ನಗರಸಭೆ ಸದಸ್ಯ ಗುಂಡಗುಂಟಿ ಮಲ್ಲಿಕಾರ್ಜುನ, ವಾಲ್ಮೀಕಿ ಗುರುಪೀಠದ ಧರ್ಮದರ್ಶಿ, ಬಿ.ಎಸ್.ಜಂಬಯ್ಯ ನಾಯಕ, ಮಾರ್ಕಂಡೇಯ, ಪರಶಿವ, ಕಮಟಿ ಜಗದೀಶ್, ಕಿಚಿಡಿ ದುರ್ಗಪ್ಪ, ಕಟಿಗಿ ವಿಜಯ ಕುಮಾರ್ ಇನ್ನಿತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ