ಇನ್ಮುಂದೆ ಸೀಮೆ ಎಣ್ಣೆಯಂತೆ ಮುಕ್ತ ಮಾರುಕಟ್ಟೆಯಲ್ಲಿ ಬಯೋಡೀಸೆಲ್ ಮಾರಾಟ!

Kannadaprabha News, Ravi Janekal |   | Kannada Prabha
Published : Sep 12, 2025, 08:42 AM IST
Biodiesel

ಸಾರಾಂಶ

ಕರ್ನಾಟಕದಲ್ಲಿ ಬಯೋಡೀಸೆಲ್ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೈಸ್ಪೀಡ್ ಡೀಸೆಲ್ ಜೊತೆಗೆ ಬಯೋಡೀಸೆಲ್ ಮಿಶ್ರಣ ಮಾಡಿ ಮಾರಾಟ ಮಾಡಲು ಈ ಕ್ರಮದಿಂದ ಅವಕಾಶ ದೊರೆಯಲಿದೆ.

ಬೆಂಗಳೂರು (ಸೆ.12): ಕರ್ನಾಟಕದಲ್ಲೂ ರಾಜಸ್ಥಾನ ಮಾದರಿಯಲ್ಲಿ ಬಯೋಡೀಸೆಲ್ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡುವ 2022ರ ‘ಹೈಸ್ಪೀಡ್ ಡೀಸೆಲ್‌ನೊಂದಿಗೆ ಬಯೋಡೀಸೆಲ್ (ಬಿ-100) ಮಿಶ್ರಣ ಮಾಡುವ (ಪರವಾನಗಿ) ಕರಡು ಅಧಿಸೂಚನೆಗೆ ಸಂಪುಟ ಅನುಮೋದನೆ ನೀಡಿದೆ.

ತನ್ಮೂಲಕ ಈ ಹಿಂದೆ ಸೀಮೆಎಣ್ಣೆಯಂತೆ ನಿರ್ದಿಷ್ಟ ಮುಕ್ತ ಮಾರಾಟ ಮಳಿಗೆಗಳಲ್ಲಿ ಬಯೋಡೀಸೆಲ್‌ ಕೂಡ ದೊರೆಯಲಿದೆ. ಪ್ರಸ್ತುತ ಇರುವ ನಿಯಮಗಳ ಪ್ರಕಾರ ಹೈಸ್ಪೀಡ್‌ ಡೀಸೆಲ್‌ ಜತೆಗೆ ಶೇ.7 ರಷ್ಟು ಬಯೋಡೀಸೆಲ್‌ ಮಿಶ್ರಣ ಮಾಡಲು ಅನುಮತಿ ಇದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಉಪಯೋಗಿಸಲ್ಪಟ್ಟ ಅಡುಗೆ ಎಣ್ಣೆ ಸೇರಿ ವಿವಿಧ ಉಪ ಉತ್ಪನ್ನಗಳಿಂದ ಬಯೋಡೀಸೆಲ್ ಉತ್ಪಾದನೆ ಮಾಡುವ ಘಟಕಗಳು ತಮ್ಮ ವೈಯಕ್ತಿಕ ಹಾಗೂ ಹೋಟೆಲ್‌ಗಳ ಉಪಯೋಗಕ್ಕೆ ನೀಡುತ್ತಿದ್ದು, ಮುಕ್ತ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಇದರಿಂದ ಮಾರಾಟ ಮಳಿಗೆಗಳಲ್ಲಿ ಬಯೋಡೀಸೆಲ್ ಮಿಶ್ರಿತ ಡೀಸೆಲ್ ಮಾರಾಟ ಮಾಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಉತ್ಪಾದನೆ, ದಾಸ್ತಾನು ಮತ್ತು ಮಾರಾಟಕ್ಕೆ ಪರವಾನಗಿ ನೀಡಲು ನಿರ್ಧರಿಸಿದೆ.

ಸರ್ಕಾರದ ಈ ಕ್ರಮದಿಂದ ಬಯೋಡೀಸೆಲ್ ಹೆಸರಿನಲ್ಲಿ ಇತರ ರಾಸಾಯನಿಕ ಮಾರಾಟ ತಡೆಯಲಿಕ್ಕೂ ಸಾಧ್ಯವಾಗುತ್ತದೆ ಎಂದು ವಿವರಣೆ ನೀಡಿದರು.

ಕೆಲವು ಮೋಟಾರು ವಾಹನಗಳ ತಯಾರಿಕಾ ಕಂಪನಿಗಳು ಎಥೆನಾಲ್‌ ಅಥವಾ ಬಯೋಡಿಸೆಲ್‌ ಬಳಕೆಯಿಂದ ಎಂಜಿನ್‌ ಸಾಮರ್ಥ್ಯ ಕುಸಿದರೆ ತಾವು ಜವಾಬ್ದಾರರಲ್ಲ ಎಂದು ಹೇಳಿವೆಯಲ್ಲಾ ಎಂಬ ಪ್ರಶ್ನೆಗೆ, ‘ಆ ಬಗ್ಗೆ ನನಗೆ ಮಾಹಿತಿ ಇಲ್ಲ. ಬಯೋಡೀಸೆಲ್ ಮಾರಾಟ ಪರವಾನಗಿ ಕರಡಿಗೆ ಅಧಿಕೃತ ಆದೇಶ ಮಾಡುವುದಕ್ಕಷ್ಟೇ ಇಂದಿನ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದರು.

ಯಾರು ನೋಡಲ್‌ ಏಜೆನ್ಸಿ?:

ಪ್ರಸ್ತುತ ಬಳಕೆ ಮಾಡಿದ ಅಡುಗೆ ಎಣ್ಣೆಯಿಂದ ಗಣನೀಯ ಪ್ರಮಾಣದಲ್ಲಿ ಬಯೋಡೀಸೆಲ್ ಉತ್ಪಾದನೆ ಮಾಡಲಾಗುತ್ತಿದ್ದು, ಇನ್ನಿತರ ಮೂಲಗಳಿಂದ (ಜತ್ರೋಪ ಗಿಡ ಮತ್ತು ಹೊಂಗೆಬೀಜ) ಸ್ವಲ್ಪ ಪ್ರಮಾಣದಲ್ಲಿ ಉತ್ಪಾದನೆ ಮಾಡಲಾಗುತ್ತಿದೆ. ಅದನ್ನು ಮುಕ್ತ ಮಾರುಕಟ್ಟೆ ಮಳಿಗೆಗಳಲ್ಲಿ ಮಾರಾಟಕ್ಕೆ ಪರವಾನಗಿ ನೀಡಲಾಗುವುದು. ಈ ಪರವಾನಗಿ ಸೇರಿ ಒಟ್ಟಾರೆ ನಿರ್ವಹಣೆಗೆ ನೋಡಲ್ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಬಯೋಡೀಸೆಲ್ ಇಂಧನ ಮಂಡಳಿ ಕೆಲಸ ಮಾಡಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌