
ವಿಧಾನಸೌಧ (ಜ.30): ಸಿನಿಮಾಗಳ ಸ್ಕ್ರೀನಿಂಗ್ ಆಗಬೇಕು ಎಂಬುದನ್ನು ನಾವು ಒಪ್ಪಬೇಕಾಗುತ್ತದೆ. ಪ್ಯಾಲೆಸ್ಟೈನ್ ಸಿನಿಮಾ ಪ್ರದರ್ಶನದಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಬದಲಾಗಿ ಅಲ್ಲಿನ ಜನರ ಕಷ್ಟಗಳು ಮತ್ತು ಜೀವನದ ಸ್ಥಿತಿಗತಿಗಳು ಜಗತ್ತಿಗೆ ತಿಳಿಯುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೈನ್ ಸಿನಿಮಾಗಳ ಪ್ರದರ್ಶನ ವಿಚಾರವಾಗಿ ಪ್ರಕಾಶ್ ರಾಜ್ ಹೇಳಿಕೆ ಬೆಂಬಲಿಸಿದರು.
ಇದೇ ವೇಳೆ ಈ ಹಿಂದೆ ಸದನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ಯಾಲೆಸ್ಟೈನ್ ಪರವಾಗಿ ಮಾತನಾಡಿದ್ದನ್ನು ಸಚಿವ ಸಂತೋಷ್ ಲಾಡ್ ನೆನಪಿಸಿದರು. 'ಅಂದು ವಾಜಪೇಯಿ ಸಾಹೇಬರೇ ಪ್ಯಾಲೆಸ್ಟೈನ್ ಪರ ನಿಲುವು ವ್ಯಕ್ತಪಡಿಸಿದ್ದರು. ಹೀಗಿರುವಾಗ ಚಿತ್ರಗಳ ಪ್ರದರ್ಶನಕ್ಕೆ ತಡೆಯೊಡ್ಡುವುದು ಸರಿಯಲ್ಲ' ಎಂದರು.
ಪ್ಯಾಲೆಸ್ಟೈನ್ ಸಿನಿಮಾಗಳ ನಿರ್ಬಂಧದ ವಿರುದ್ಧ ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ವ್ಯಕ್ತಪಡಿಸಿದ ಆಕ್ರೋಶಕ್ಕೆ ಸಚಿವರು ಬೆಂಬಲ ಸೂಚಿಸಿದರು. 'ಪ್ರಕಾಶ್ ರಾಜ್ ಅವರು ಹೇಳಿರುವುದು ಸರಿಯಿದೆ. ಸಾಹಿತ್ಯ ಮತ್ತು ಸಿನಿಮಾ ಕಾರ್ಯಕ್ರಮಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಮಾನವೀಯ ಸಂಬಂಧಗಳ ದೃಷ್ಟಿಯಿಂದ ಇಂತಹ ಸಿನಿಮಾಗಳ ಪ್ರದರ್ಶನ ಅಗತ್ಯ' ಎಂದು ಲಾಡ್ ಹೇಳಿದರು.
ಇನ್ನು ಗುತ್ತಿಗೆದಾರರ ಬಾಕಿ ಬಿಲ್ ಆರೋಪದ ಕುರಿತು ಸ್ಪಷ್ಟನೆ ನೀಡಿದ ಸಚಿವರು, ನಮ್ಮ ಇಲಾಖೆಯಿಂದ ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಪೆಂಡಿಂಗ್ ಎನ್ನುವಂತಹದ್ದು ಏನೂ ಇಲ್ಲ. ಆದರೂ ಗುತ್ತಿಗೆದಾರರು ಆರೋಪ ಮಾಡುತ್ತಿರುವುದರಿಂದ ನಾನು ಮತ್ತೊಮ್ಮೆ ಇಲಾಖೆಯ ಕಡತಗಳನ್ನು ಪರಿಶೀಲಿಸುತ್ತೇನೆ' ಎಂದು ಅವರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ