
ಬೆಂಗಳೂರು (ಜೂ.09) ಬೆಸ್ಕಾಂ ವ್ಯಾಪ್ತಿಯಲ್ಲಿ ಸಾಫ್ಟ್ವೇರ್ ಅಳವಡಿಕೆ ಹಿನ್ನಲೆಯಲ್ಲಿ ಆನ್ಲೈನ್ ಸೇವೆಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ.ಸಮಗ್ರ ವಿದ್ಯುತ್ ಅಭಿವೃದ್ದಿ ಯೋಜನೆಯ (ಐಪಿಡಿಎಸ್) ಹಂತ-2 ರ ಅಡಿಯಲ್ಲಿ ಸಾಪ್ಟ್ವೇರ್ ಅಪ್ಡೇಟ್ ಕಾರ್ಯಗಳು ನಡೆಯುತ್ತಿದೆ. ಪರಿಣಾಮ ಬೆಸ್ಕಾಂ ವ್ಯಾಪ್ತಿಯ 20 ಪಟ್ಟಣಗಳಲ್ಲಿ ಆನ್ ಲೈನ್ ಸೇವೆ ಅಲಭ್ಯವಾಗುತ್ತಿದೆ. ಈ ಕುರಿತು ಬೆಸ್ಕಾಂ ಮಹತ್ವದ ಪ್ರಕಟಣೆ ಹೊರಡಿಸಿದೆ.
ಬೆಸ್ಕಾಂ ಸಾಫ್ಟ್ವೇರ್ ಅಪ್ಡೇಟ್ ಕಾರಣದಿಂದ ಜೂನ್ 10ರಿಂದ ಜೂನ್ 30ರವರೆಗೆ ಬೆಸ್ಕಾಂನ ಆನ್ ಲೈನ್ ಸೇವೆಗಳು ಅಲಭ್ಯ ವಾಗುತ್ತಿದೆ. ಒಟ್ಟು 21 ದಿನ 20 ಪಟ್ಟಣಗಳಲ್ಲಿ ಬೆಸ್ಕಾಂ ಆನ್ಲೈನ್ ಸೇವೆ ಬಳಸಲು ಸಾಧ್ಯವಾಗುವುದಿಲ್ಲ. ಇದೀಗ ಬಹುತೇಕರು ಬೆಸ್ಕಾಂ ಕೆಲಸ ಕಾರ್ಯಗಳನ್ನು ಆನ್ಲೈನ್ ಮುಖಾಂತರವೇ ಮಾಡಿ ಮುಗಿಸುತ್ತಿದ್ದಾರೆ. ಆದರೆ ಮುಂದಿನ 21 ದಿನ ಸಮಸ್ಯೆಯಾಗಲಿದೆ. ಕೇಂದ್ರಕ್ಕೆ ತೆರಳಿ ಕೆಲಸ ಕಾರ್ಯಗಳನ್ನು ಮಾಡಬೇಕಾಗಿದೆ.
21 ದಿನಗಳ ಕಾಲ ಆನ್ ಲೈನ್ ಸೇವೆಗಳಾದ ಹೊಸ ಸಂಪರ್ಕ, ಹೆಸರು ವರ್ಗಾವಣೆ, ಲೋಡ್ ಹೆಚ್ಚಳ, ಬಿಲ್ ಪಾವತಿ, ಸೇರಿದಂತೆ ಆನ್ಲೈನ್ ಸೇವೆಗಳು ಸ್ಥಗಿತಗೊಳ್ಳಲಿದೆ. ಗ್ರಾಹಕರು ಗೂಗಲ್ ಪೇ, ಫೋನ್ ಪೇ ಮೂಲಕ ಬಿಲ್ ಪಾವತಿ ಮಾಡಲು ಅವಕಾಶವಿರುತ್ತದೆ ಎಂದು ಬೆಸ್ಕಾಂ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಬಾಗೇಪಲ್ಲಿ, ದೇವನಹಳ್ಳಿ, ಗುಡಿಬಂಡೆ, ಮಾಗಡಿ, ಮಾಲೂರು, ನೆಲಮಂಗಲ, ಶ್ರೀನಿವಾಸಪುರ, ವಿಜಯಪುರ, ಚನ್ನಗಿರಿ, ಚಿಕ್ಕನಾಯಕನಹಳ್ಳಿ, ಗುಬ್ಬಿ, ಹೊಳಲ್ಕೆರೆ, ಹೊನ್ನಾಳಿ, ಹೊಸದುರ್ಗ, ಜಗಳೂರು, ಕೊರಟಗೆರೆ, ಮಧುಗಿರಿ, ಮೊಳಕಾಲ್ಮೂರು, ಪಾವಗಡ ಹಾಗೂ ತುರುವೇಕೆರೆಯಲ್ಲಿ ಆನ್ಲೈನ್ ಸೇವೆ ಅಲಭ್ಯವಾಗುತ್ತಿದೆ.
ಸೂಚಿಸಿದ 20 ಪಟ್ಟಣದ ಗ್ರಾಹಕರು ಹತ್ತಿರದ ಬೆಸ್ಕಾಂ ಕೇಂದ್ರಕ್ಕೆ ತೆರಳಿ ತಮ್ಮ ಕೆಲಸ ಕಾರ್ಯಗಳನ್ನು ಪೂರೈಸಿಕೊಳ್ಳಲು ಬೆಸ್ಕಾಂ ಮನವಿ ಮಾಡಿದೆ. ಇದೇ ವೇಳೆ ಹೆಚ್ಚಿನ ಗ್ರಾಹಕರು ಬೆಸ್ಕಾಂ ಕೇಂದ್ರಗಳಿಗೆ ಭೇಟಿ ನೀಡುವ ಕಾರಣ ಜನಸಂದಣಿ ಹೆಚ್ಚಾಗಬಹುದು, ಸೇವೆಯಲ್ಲಿ ವಿಳಂಬವಾಗಬಹುದು. ಹೀಗಾಗಿ ಗ್ರಾಹಕರು ಸಹಕರಿಸಬೇಕಾಗಿ ವಿನಂತಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ