
ಬೆಂಗಳೂರು (ಡಿ.17): ನಮ್ಮ ದೇಶದ ಐಟಿ ಹಬ್ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಯ ಕರಾಳ ಮುಖವನ್ನು ಹಾಸ್ಯದ ಮೂಲಕ ಅನಾವರಣಗೊಳಿಸಿದೆ. ವೈಟ್ಫೀಲ್ಡ್ನಿಂದ ಎಂ.ಜಿ. ರಸ್ತೆಯವರೆಗೆ ಇಬ್ಬರು ಸ್ನೇಹಿತರು ನಡೆಸಿದ ಈ 'ಸಂಚಾರ ಸಮರ' ಈಗ ಇಡೀ ನಗರದ ಗಮನ ಸೆಳೆದಿದೆ.
ಸವಾಲಿನ ಹಿನ್ನೆಲೆ
ಇಬ್ಬರು ಯುವಕರು ವೈಟ್ಫೀಲ್ಡ್ನಿಂದ ಎಂ.ಜಿ. ರಸ್ತೆಯ 'ಕಾರ್ನರ್ ಹೌಸ್' ತಲುಪಲು ಪಣತೊಟ್ಟರು. ಒಬ್ಬರು ಆಧುನಿಕ ಸಾರಿಗೆಯ ಸಂಕೇತವಾದ ನಮ್ಮ ಮೆಟ್ರೋ ಆರಿಸಿಕೊಂಡರೆ, ಮತ್ತೊಬ್ಬರು ಟ್ರಾಫಿಕ್ ನಡುವೆ ನುಸುಳಬಲ್ಲ ಇ-ಸ್ಕೂಟರ್ ಏರಿದರು. ಬೆಂಗಳೂರಿನ 1.2 ಕೋಟಿ ವಾಹನಗಳ ನಡುವೆ ಯಾರು ಮೊದಲು ಗುರಿ ತಲುಪುತ್ತಾರೆ ಎಂಬುದು ಈ ರೇಸ್ನ ಕುತೂಹಲವಾಗಿತ್ತು.
ಮೆಟ್ರೋ ರೈಲು ಟ್ರಾಫಿಕ್ ಮುಕ್ತವಾಗಿ ಸಾಗಿದರೂ, ಪ್ರಯಾಣಿಕರ ದಟ್ಟಣೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಬಾಗಿಲಿನ ಒಳಗೆ ಕಾಲು ಇಡಲೂ ಜಾಗವಿಲ್ಲದಷ್ಟು ತುಂಬಿದ್ದ ಕೋಚ್ಗಳಲ್ಲಿ ಮೆಟ್ರೋ ಸವಾರ ಪ್ರಯಾಣಿಸಬೇಕಾಯಿತು. ಇನ್ನುಳಿದಂತೆ ನಿಲ್ದಾಣಕ್ಕೆ ಹೋಗುವುದು ಮತ್ತು ಅಲ್ಲಿಂದ ಗುರಿ ತಲುಪುವ ಅಂತರ (First and Last Mile connectivity) ಕೂಡ ಪ್ರಯಾಣದ ಸಮಯವನ್ನು ಹೆಚ್ಚಿಸಿತು.
ಇತ್ತ ಎಲೆಕ್ಟ್ರಿಕ್ ಸ್ಕೂಟರ್ ಏರಿದ ಸವಾರ, ನಗರದ ಟ್ರಾಫಿಕ್ ಸಿಗ್ನಲ್ಗಳು ಮತ್ತು ಗುಂಡಿಗಳನ್ನು ದಾಟುತ್ತಾ ಸಾಗಿದನು. 35 ನಿಮಿಷಗಳ ಕಾಲ ಟ್ರಾಫಿಕ್ ನಡುವೆ ಎಲ್ಲೆಂದರಲ್ಲಿ ಬುರ್ರೆಂದು ನುಗ್ಗಿಸಿಕೊಂಡು ಸವಾರಿ ಮಾಡಿದರೂ ತಾನಿರುವ ಸ್ಥಳಕ್ಕೆ ಹೋಗುವುದಕ್ಕೆ ತುಂಬಾ ಪ್ರಯಾಸಪಟ್ಟನು. ಇನ್ನು ಇದೇ ವೇಳೆಗೆ ಅನಿರೀಕ್ಷಿತ ಮಳೆ ಆತನ ವೇಗಕ್ಕೆ ಕಡಿವಾಣವನ್ನು ಹಾಕಿತು. ಬೆಂಗಳೂರಿನ ಲೆಕ್ಕಾಚಾರಕ್ಕೆ ಸಿಗದ ಹವಾಮಾನ ಮತ್ತು ಟ್ರಾಫಿಕ್ ಜಾಮ್ ಸ್ಕೂಟರ್ ಸವಾರನಿಗೆ ಸವಾಲೊಡ್ಡಿದವು.
ಮಳೆ ಮತ್ತು ಸಂಚಾರ ದಟ್ಟಣೆಯ ಹೊರತಾಗಿಯೂ, ಮೆಟ್ರೋ ಸವಾರ ಅಂತಿಮವಾಗಿ ಎಂ.ಜಿ. ರಸ್ತೆಯನ್ನು ಮೊದಲು ತಲುಪುವಲ್ಲಿ ಯಶಸ್ವಿಯಾದರು. ಸ್ಕೂಟರ್ ಸವಾರ ಬಂದಾಗ ಆತ ಈಗಾಗಲೇ ಅಲ್ಲಿ ಐಸ್ಕ್ರೀಂ ಸವಿಯುತ್ತಾ ಕುಳಿತಿದ್ದನು! ಮೆಟ್ರೋ ಪ್ರಯಾಣ ಕಿಕ್ಕಿರಿದಿದ್ದರೂ, ಸಮಯ ಉಳಿಸುವಲ್ಲಿ ಅದುವೇ ಶ್ರೇಷ್ಠ ಎಂಬುದನ್ನು ಈ ರೇಸ್ ಸಾಬೀತುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ