
ಬೆಂಗಳೂರು (ಏ.4) ನಗರದಲ್ಲಿ ಬೇಸಿಗೆಯ ತಾಪ ಏರುತ್ತಿದ್ದಂತೆ ನಗರದ ವಿವಿಧ ಪ್ರದೇಶಗಳಲ್ಲಿ ಹಾವುಗಳು ಮನೆಯಂಗಳ, ಉದ್ಯಾನಗಳು, ಪಾರ್ಕಿಂಗ್ ಸ್ಥಳಗಳ ಬಳಿ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿವೆ.
ಇದರಿಂದ ಆತಂಕಗೊಳ್ಳುವ ಸಾರ್ವಜನಿಕರು ಹಾವುಗಳ ರಕ್ಷಣೆ ಕೋರಿ ಜಿಬಿಎ ಸಹಾಯವಾಣಿಗೆ ಕರೆ ಮಾಡಿದರೆ ಅಧಿಕೃತ ಹಾವು ರಕ್ಷಕರ ಸಂಖ್ಯೆ ಕಡಿಮೆ ಇರುವ ಕಾರಣ ಸಕಾಲದಲ್ಲಿ ಹಾವುಗಳು ರಕ್ಷಣೆಯಾಗದೆ ಆತಂಕ ಹೆಚ್ಚಾಗುತ್ತಿದೆ.
ಪ್ರತಿನಿತ್ಯ ಹಾವುಗಳ ಕುರಿತು ಸರಾಸರಿ 150 ಕರೆಗಳು ಬರುತ್ತಿವೆ. ಆದರೆ, ಅಧಿಕೃತವಾಗಿ ಹಾವು ಹಿಡಿದು ರಕ್ಷಣೆ ಮಾಡುವವರು ಏಳು ಜನರಿದ್ದಾರೆ. ಸಿಬ್ಬಂದಿ ಕೊರತೆಯಿಂದ ಹಾವುಗಳ ರಕ್ಷಣೆಯಾಗಿ ಸಮಸ್ಯೆಯಾಗಿ ಪರಿಣಮಿಸಿದೆ.
ಪಶ್ಚಿಮ ಮತ್ತು ದಕ್ಷಿಣ ಪಾಲಿಕೆಗೆ ತಲಾ ಇಬ್ಬರು ಹಾವು ರಕ್ಷಕರಿದ್ದರೆ, ಉಳಿದ ಮೂರು ಪಾಲಿಕೆಗಳಿಗೆ ತಲಾ ಒಬ್ಬರೇ ರಕ್ಷಕರಿದ್ದಾರೆ. ಮೇ ಮತ್ತು ಜೂನ್ ತಿಂಗಳಲ್ಲಿ ಹಾವುಗಳು ಮೊಟ್ಟೆ ಇಟ್ಟು ಮರಿ ಮಾಡುವ ಸಮಯವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಕರೆಗಳ ಸಂಖ್ಯೆ 200 ದಾಟುವ ಸಾಧ್ಯತೆಯಿದೆ ಎಂದು ವೈಲ್ಡ್ಲೈಫ್ ವಾರ್ಡನ್ವೊಬ್ಬರು ತಿಳಿಸಿದ್ದಾರೆ.
ಹಾವು ಹಿಡಿಯುವವರಿಗೆ ಜಿಬಿಎನಿಂದ ಯಾವುದೇ ವಾಹನ ಸೌಲಭ್ಯ ಅಥವಾ ಸುರಕ್ಷಾ ಉಪಕರಣಗಳನ್ನು ಒದಗಿಸಿಲ್ಲ. ರಕ್ಷಕರು ತಮ್ಮದೇ ಆದ ಬೈಕ್ ಹಾಗೂ ಸ್ವಂತ ಖರ್ಚಿನಲ್ಲಿ ಖರೀದಿಸಿದ ಸಲಕರಣಿಗಳು, ಚೀಲಗಳನ್ನು ಬಳಸುತ್ತಿದ್ದಾರೆ. 18,000 ರು. ಗೌರವಧನ ನೀಡಲಾಗುತ್ತಿದೆ. ಅದು ಕೂಡ ನಾಲ್ಕೈದು ತಿಂಗಳಿಗೊಮ್ಮೆ ಪಾವತಿಯಾಗುತ್ತದೆ. ಸಕಾಲಕ್ಕೆ ಸ್ಪಂದಿಸಲು ನಮಗೆ ಕನಿಷ್ಠ ಒಂದು ವ್ಯಾನ್ ಹಾಗೂ ಹೆಚ್ಚಿನ ಸಿಬ್ಬಂದಿಯ ಅಗತ್ಯವಿದೆ ಎಂದು ಹಾವು ರಕ್ಷಕರು ಅಳಲು ತೋಡಿಕೊಂಡಿದ್ದಾರೆ.
ನಗರದಲ್ಲಿ ನಾಗರಹಾವು, ಕೊಳಕು ಮಂಡಲ ಮತ್ತು ನೀರು ಹಾವುಗಳು ಹೆಚ್ಚಾಗಿ ಕಂಡು ಬರುತ್ತಿವೆ. ತಣ್ಣನೆ ವಾತಾವರಣಕ್ಕಾಗಿ ಮನೆಯಗಳ, ಉದ್ಯಾನ ಹಾಗೂ ಪಾರ್ಕಿಂಗ್ ಪ್ರದೇಶಗಳಿಗೆ ನುಗ್ಗುತ್ತಿವೆ. ಹಾವು ಕಂಡಾಗ ಸಾರ್ವಜನಿಕರು ಅವುಗಳನ್ನು ತಾವೇ ಹಿಡಿಯಲು ಸಾಹಸ ಮಾಡಬೇಡಿ ಅಥವಾ ಭಯದಿಂದ ಅವುಗಳನ್ನು ಕೊಲ್ಲಬೇಡಿ. ಪಾಲಿಕೆ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಹಾವು ರಕ್ಷಕರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ