
ಬೆಂಗಳೂರು (ಜ.07): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ಗಂಭೀರವಾದ ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ವೊಬ್ಬ ಪತ್ನಿಯಿಂದ ಹಲ್ಲೆಗೊಳಗಾಗಿದ್ದಾನೆ. ಇದರಿಂದ ಆತಂಕಕ್ಕೆ ಒಳಗಾದ ಆತ, ಹೇಗಾದರೂ ಮಾಡಿ ನನಗೆ ರಕ್ಷಣೆ ಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಸೈಯದ್ ಅಸ್ಗರ್ ಪೊಲೀಸರ ಮೊರೆ ಹೋಗಿರುವ ರೌಡಿಶೀಟರ್. ಎರಡನೇ ಪತ್ನಿಯನ್ನು ಬಿಟ್ಟು ತನ್ನೊಂದಿಗೆ ಸಂಸಾರ ಮಾಡಬೇಕು ಎಂದು ಮೊದಲ ಪತ್ನಿ ರೌಡಿಶೀಟರ್ ಪತಿ ಮೇಲೆ ಖಾರದ ಪುಡಿ ಎರಚಿ ಹಲ್ಲೆ ನಡೆಸಿದ್ದು, ಈ ಸಂಬಂಧ ಜೆ.ಜೆ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಊರಲ್ಲಿ ಹೇಳಿಕೊಳ್ಳೋದಕ್ಕೆ ದೊಡ್ಡ ರೌಡಿ ಆಗಿದ್ದರೂ, ಹೆಂಡತೀಯ ಕೈಗೆ ಸಿಕ್ಕಿ ಮೂಳೆ ಮಾಂಸಗಳೆಲ್ಲಾ ಪುಡಿಪುಡಿ ಆಗುವಂತಾಗಿದೆ. ಇಬ್ಬರೂ ಹೆಂಡಿರ ಕೈಯಲ್ಲಿ ಸಿಲುಕಿ ನರಕ ಅನುಭವಿಸುತ್ತಿದ್ದಾಗಿ ಕಣ್ಣೀರಿಡುತ್ತಾ ಗೋಳಾಡಿದ್ದಾನೆ.
ಸೈಯದ್ ಅಸ್ಗರ್ಗೆ ಮೊದಲ ಪತ್ನಿ ಮತ್ತು ಮಕ್ಕಳು ಇದ್ದಾರೆ. ಆದರೂ ಈತ ಬನಶಂಕರಿ ನಿವಾಸಿ ನಗ್ಮಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದಾರೆ. ಇತ್ತೀಚೆಗೆ ಮೊದಲ ಪತ್ನಿ ಜತೆ ಜಗಳ ಮಾಡಿಕೊಂಡಿದ್ದ ಸೈಯದ್ ಅಸ್ಗರ್, ಆಕೆಯಿಂದ ದೂರವಾಗಿದ್ದ.ಇದರಿಂದ ಕೋಪಗೊಂಡ ಆಕೆ ಕೆಲ ದಿನಗಳ ಹಿಂದೆ ಸೈಯದ್ ಅಸ್ಗರ್ ಮೇಲೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಪರಿಣಾಮ ತಲೆ ಹಾಗೂ ಕಣ್ಣಿನ ಭಾಗದಲ್ಲಿ ಗಾಯಗೊಂಡಿದ್ದ ಸೈಯದ್ ಅಸ್ಗರ್ಗೆ 2ನೇ ಪತ್ನಿ ನಗ್ಮಾ ಚಿಕಿತ್ಸೆ ಕೊಡಿಸಿ ತಾನೇ ಖುದ್ದು ಜೆ.ಜೆ.ನಗರ ಠಾಣೆಗೆ ಕರೆತಂದು ಮೊದಲ ಪತ್ನಿ ವಿರುದ್ಧ ದೂರು ಕೊಡಿಸಿದ್ದಾಳೆ. ಪೊಲೀಸರು ದೂರು ಸ್ವೀಕರಿಸಿ ತನಿಖೆ ಕೈಗೊಂಡಿದ್ದಾರೆ.
ವಿಚಾರಣೆ ವೇಳೆ ರೌಡಿಶೀಟರ್ ಮತ್ತು ಆತನ 2ನೇ ಪತ್ನಿಯ ಹೈಡ್ರಾಮಾ ಬಯಲಾಗಿದೆ. ಸಣ್ಣ ಗಾಯಕ್ಕೆ ದೊಡ್ಡ ಬ್ಯಾಡೆಂಜ್ ಕಟ್ಟಿಕೊಂಡು ಬಂದು ಠಾಣೆ ಮುಂದೆ ನಾಟಕವಾಡಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಇಬ್ಬರಿಗೂ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಇನ್ನು ಹಲ್ಲೆ ನಡೆಸಿದ ಸೈಯದ್ ಅಸ್ಗರ್ ಮೊದಲ ಪತ್ನಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೈಯದ್ ಅಸ್ಗರ್ನ ಮೊದಲ ಪತ್ನಿ ಮೊದಲು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದು, ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯುತ್ತಿರು ಎಂದು ಎಚ್ಚರಿಕೆ ನೀಡಿದ್ದಾಳೆ. ಮಾರಕಾಸ್ತ್ರ ತೋರಿಸಿ ವಿಡಿಯೋ ಮಾಡಿದ್ದ ಬೆನ್ನಲ್ಲೇ ಪತಿಯ ಮೇಲೆ ಆಕೆ ದಾಳಿ ಮಾಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.
ಪಾದರಾಯನಪುರ ವಾಸವಾಗಿರುವ ಮೊದಲನೇ ಪತ್ನಿ ಸೈಯದ್ ರಿಜ್ವಾನ, ಅತ್ತೆ ಸುಲ್ತಾನ ಮತ್ತು ಸಂಬಂಧಿ ಅಫು ಜ.3 ರಂದು ತನ್ನನ್ನು ಮನೆಗೆ ಬರುವಂತೆ ಕರೆದಿದ್ದು, ಅದರಂತೆ ನಾನು ರಾತ್ರಿ 10.30 ರ ಸುಮಾರಿಗೆ ಮನೆಗೆ ಹೋಗಿದ್ದು, ಈ ವೇಳೆ ಮೂವರು ಸೇರಿಕೊಂಡು ಏಕಾಏಕಿ ಜಗಳ ತೆಗೆದು ನೀನು ಎರಡನೇ ಹೆಂಡತಿಯನ್ನು ನಗ್ಮಾನನ್ನು ಬಿಟ್ಟು ನಮ್ಮೊಂದಿಗೆ ಇರಬೇಕು ಇಲ್ಲದಿದ್ದರೆ ನಿನ್ನ ಸುಮ್ಮನೆ ಬಿಡುವುದಿಲ್ಲವೆಂದು ಹೇಳಿ ಕೊಲೆ ಮಾಡುವ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ನಿಂದಿಸಿದ್ದರು. ಬಳಿಕ ಸೈಯದ್ ರಿಜ್ವಾನ ಚಾಕುವಿನಿಂದ ಎಡಕಣ್ಣಿನ ಕೆಳಭಾಗಕ್ಕೆ ಮುಖಕ್ಕೆ ಚುಚ್ಚಿ ರಕ್ತಗಾಯಗೊಳಿಸಿದ್ದಳು ಎಂದು ಸೈಯದ್ ಅಸ್ಗರ್ ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ