
ಬೆಂಗಳೂರು(ಡಿ.12): ಬೆಂಗಳೂರು ನಗರ ಪೊಲೀಸರು (BCP) ಕೇವಲ ಕಾನೂನು ಸುವ್ಯವಸ್ಥೆ ಪಾಲನೆಗೆ ಮಾತ್ರ ಸೀಮಿತವಾಗಿಲ್ಲ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಸಕ್ರಿಯವಾಗಿರುವ ಬೆಂಗಳೂರು ಪೊಲೀಸರು, ನಾಗರಿಕರ ಉತ್ತಮ ಕಾರ್ಯಗಳನ್ನು ಗುರುತಿಸಿ, ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಮೂಲಕ ಮಾನವೀಯ ಗುಣಗಳಿಗೆ ಮಹತ್ವ ನೀಡುತ್ತಿದ್ದಾರೆ. ಅಂತಹ ಸಕಾರಾತ್ಮಕ ಘಟನೆಯೊಂದು ಈಗ ಮತ್ತೊಮ್ಮೆ ನಡೆದಿದೆ.
ನಗರದ ಆಟೋ ಚಾಲಕರೊಬ್ಬರು ತಮ್ಮ ಆಟೋದ ಹಿಂಬದಿಯಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸುವ ಸಣ್ಣ, ಆದರೆ ಅತ್ಯಂತ ಅರ್ಥಪೂರ್ಣವಾದ ಬರಹವನ್ನು ಅಳವಡಿಸಿದ್ದಾರೆ. ಆ ಫಲಕದಲ್ಲಿ ಹೀಗೆ ಬರೆಯಲಾಗಿದೆ:
'ನಾನೊಬ್ಬ ತಂದೆ, ಅಣ್ಣ.. ನಿಮ್ಮ ಸುರಕ್ಷತೆ ನನಗೂ ಮುಖ್ಯ.. ಆರಾಮವಾಗಿ ಕುಳಿತುಕೊಳ್ಳಿ'
ಈ ಸರಳ ಮತ್ತು ಆತ್ಮವಿಶ್ವಾಸ ಮೂಡಿಸುವ ಸಂದೇಶವು ಬೆಂಗಳೂರು ಪೊಲೀಸರ ಗಮನ ಸೆಳೆದಿದೆ.
ಬೆಂಗಳೂರು ಸಿಟಿ ಪೊಲೀಸರು ಈ ಆಟೋ ಚಾಲಕನ ಈ ಮಾನವೀಯ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ತಕ್ಷಣವೇ ಅವರು ಈ ಬರಹವಿರುವ ಆಟೋದ ವಿಡಿಯೋವನ್ನು ತಮ್ಮ ಅಧಿಕೃತ ಎಕ್ಸ್ ಖಾತೆ ಮತ್ತು ಫೇಸ್ಬುಕ್ ಪೇಜ್ಗಳಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್ನಲ್ಲಿ 'ಒಂದು ಸಣ್ಣ ಸಂದೇಶ.. ಒಂದು ದೊಡ್ಡ ಸೂಚಕ' ಎಂದು ಶೀರ್ಷಿಕೆ ನೀಡಿರುವ ಪೊಲೀಸರು, ಈ ಆಟೋ ಚಾಲಕನನ್ನು ತಲುಪಲು ನಾಗರಿಕರ ಸಹಾಯವನ್ನೂ ಕೋರಿದ್ದಾರೆ.
'ಬೆಂಗಳೂರಿಗರೇ, ದಯವಿಟ್ಟು ಈ ಆಟೋ ಚಾಲಕನನ್ನು ತಲುಪಲು ನಮಗೆ ಸಹಕರಿಸಿ. ಆತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಕೂಡಲೇ ನಮ್ಮನ್ನು ಸಂಪರ್ಕಿಸಿ' ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಸದ್ಯ ಆಟೋ ಚಾಲಕನ ಈ ಬರಹ ಮತ್ತು ಬೆಂಗಳೂರು ಪೊಲೀಸರ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದ್ದು, ಆಟೋ ಚಾಲಕನ ಕಾರ್ಯಕ್ಕೆ ಮತ್ತು ಅದನ್ನು ಗುರುತಿಸಿದ ಪೊಲೀಸರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ರೀತಿಯ ಪಾಸಿಟಿವ್ ಪೊಲೀಸಿಂಗ್ನಿಂದ ನಾಗರಿಕರು ಬೆಂಗಳೂರು ಪೊಲೀಸರ ಬಗ್ಗೆ ಮತ್ತಷ್ಟು ಹೆಮ್ಮೆ ಪಡುವಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ