
ಬೆಂಗಳೂರು (ಡಿ.31): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಈಗಾಗಲೇ ಪೊಲೀಸರು ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ, ಕೋರಮಂಗಲ ಸೇರಿ ವಿವಿಧ ರಸ್ತೆಗಳನ್ನು ನಿಗದಿ ಮಾಡಿದ್ದು, ಅಲ್ಲಿ ವಾಹನ ಸಂಚಾರವನ್ನು ನಿಷೇಧಿಸಿದ್ದಾರೆ. ಇನ್ನು ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ಕುಟುಂಬಗಳು ಬಂದಲ್ಲಿ ಅವರಿಗೆ ಹೋಗಲು ಅನುಕೂಲ ಆಗುವಂತೆ ಪ್ರತ್ಯೇಕ ಲೈನ್ ವ್ಯವಸ್ಥೆ ಮಾಡಿದ್ದಾರೆ.
ಬೆಂಗಳೂರು ನಗರ ಪೊಲೀಸರು ಹೊಸ ವರ್ಷಾಚರಣೆ ಹಿನ್ನಲೆಯಲ್ಲಿ ಭಾರಿ ಬಿಗಿ ಭದ್ರತೆಯನ್ನು ಕೈಗೊಂಡಿದ್ದಾರೆ. ಎಲ್ಲೆಡೆ ಮಹಿಳೆ, ಮಕ್ಕಳು ಹಾಗೂ ಕುಟುಂಬಗಳಿಗೆ ಸುರಕ್ಷತೆಯನ್ನು ನೀಡುವ ನಿಟ್ಟಿನಲ್ಲಿ ವ್ಯವಸ್ಥೆಯನ್ನು ಮಾಡಿದ್ದಾರೆ. ಎಲ್ಲೆಡೆ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿದ್ದಾರೆ. ಇನ್ನು ಮಹಿಳೆಯರು ಮಕ್ಕಳು ಮತ್ತು ಕುಟುಂಬಸ್ಥರಿಗೆ ಒತ್ತು ನೀಡಿರುವ ಪೊಲೀಸರು ಬ್ರಿಗೇಡ್ ರಸ್ತೆಯಲ್ಲಿ ಮಹಿಳೆಯರ ಓಡಾಟಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಾರೆ. ಬ್ಯಾರಿಕೇಡ್ ಹಾಕಿ ಪ್ರತ್ಯೇಕ ಲೈನ್ ವ್ಯವಸ್ಥೆ ಮಾಡಿದ್ದಾರೆ. ಮಹಿಳೆಯರು ಮಕ್ಕಳು ಬಂದಾಗ ಬ್ಯಾರಿಕೇಡ್ ಒಳಗೆ ಹೋಗಲು ಅವಕಾಶ ನೀಡಿದ್ದಾರೆ. ಈ ಮೂಲಕ ಪುಂಡರ ಕೀಟಲೆ ತಪ್ಪಿಸಲು ಪೊಲೀಸರ ಪ್ಲಾನ್ ಮಾಡಿದ್ದಾರೆ.
ವರ್ಷಾಚರಣೆ: ಬೆಂಗ್ಳೂರಲ್ಲಿ ಮಧ್ಯರಾತ್ರಿ 1.30ರವರೆಗೂ ಮೆಟ್ರೋ ರೈಲು
ಮಹಿಳೆ, ಮಕ್ಕಳಸುರಕ್ಷತಾ ತಾಣ: ನೂತನ ವರ್ಷ ಸ್ವಾಗತಿಸುವ ಸಂಭ್ರಮದ ವೇಳೆ ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ನಗರದ ಪ್ರಮುಖ ಸುಮಾರು 60 ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆಗೆ ಮಹಿಳಾ ಪೊಲೀಸ್ ಅಧಿಕಾರಿಗಳ ಸಾರಥ್ಯದಲ್ಲಿ ಸುರಕ್ಷತಾ ಸ್ಥಳಗಳು (ಹ್ಯೂಮೆನ್ ಸೆಫ್ಟಿ ಐಲ್ಯಾಂಡ್) ಹಾಗೂ ಮಕ್ಕಳ ಸುರಕ್ಷತೆಗೆ ಪೊಲೀಸ್ ಕಿಯೋಸ್ಕ್ಗಳನ್ನು ತೆರೆಯಲಾಗುತ್ತದೆ. ಮಕ್ಕಳು ನಾಪತ್ತೆ ಅಥವಾ ತುರ್ತು ಸೇವೆಗಳಿಗೆ ಈ ತಾಣಗಳು ಸ್ಪಂದಿಸುತ್ತವೆ. ಬ್ರಿಗೇಡ್-ಎಂ.ಜಿ.ರಸ್ತೆಗಳ ವ್ಯಾಪ್ತಿಯಲ್ಲಿ 4 ಡಿಸಿಪಿಗಳು, 10 ಎಸಿಪಿಗಳು, 30 ಇನ್ಸ್ಪೆಕ್ಟರ್ಗಳು ಸೇರಿದಂತೆ ಒಟ್ಟು 3 ಸಾವಿರ ಪೊಲೀಸರು ಭದ್ರತೆಗೆ ನಿಯೋಜಿತರಾಗಿದ್ದಾರೆ. ಇವರಲ್ಲದೆ 250 ಸಿಸಿಟಿವಿ ಕ್ಯಾಮೆರಾಗಳು ಹಾಗೂ 16 ವೀಕ್ಷಣಾ ಗೋಪುರಗಳ ಮೂಲಕ ಕೂಡಾ ಖಾಕಿ ಹದ್ದಿನ ಕಣ್ಣಿಡಲಿದೆ. ಹಾಗೆಯೇ 18 ಮಹಿಳಾ ಸುರಕ್ಷತಾ ತಾಣ ತೆರೆಯಲಾಗಿದೆ.
ನೂತನ ವರ್ಷ ಸ್ವಾಗತಿಸುವ ಸಂಭ್ರಮದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಂ.ಜಿ ರಸ್ತೆ ಸೇರಿದಂತೆ ರಾಜಧಾನಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಹೊಸ ವರ್ಷಾಚರಣೆಗೆ ಡಿ.31ರ ರಾತ್ರಿ 1 ಗಂಟೆವರೆಗೆ ಕಾಲಾವಕಾಶ ನೀಡಿರುವ ಪೊಲೀಸರು, ರಾತ್ರಿ ಮದ್ಯ ಸೇವಿಸಿ ವಾಹನ ಚಲಾಯಿಸಿದರೆ ಬಿಸಿ ಮುಟ್ಟಿಸಲು ಚೆಕ್ ಪೋಸ್ಟ್ಗಳು ಹಾಗೂ ಠಾಣಾ ಮಟ್ಟದಲ್ಲಿ ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದ ಸರ್ಕಾರ: ನಂದಿಬೆಟ್ಟ, ದೇವರಾಯನದುರ್ಗಕ್ಕೆ ಪ್ರವೇಶ ನಿಷೇಧ
ನಗರದಲ್ಲಿ ಹೊಸ ವರ್ಷಾಚರಣೆಯ ಕೇಂದ್ರ ಬಿಂದು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಬಂದೋಬಸ್ತ್ ಬಗ್ಗೆ ಶನಿವಾರ ರಾತ್ರಿ ಪೊಲೀಸ್ ಆಯುಕ್ತ ಬಿ.ದಯಾನಂದ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ನಗರ ವ್ಯಾಪ್ತಿ ಇಬ್ಬರು ಹೆಚ್ಚುವರಿ ಆಯುಕ್ತರು, ಜಂಟಿ ಆಯುಕ್ತ, 15 ಡಿಸಿಪಿ, 45 ಎಸಿಪಿ, 160 ಇನ್ಸ್ಪೆಕ್ಟರ್, 600 ಪಿಎಸ್ಐ, 600 ಎಎಸ್ಐ, 1800 ಎಚ್ಸಿ, 5200 ಕಾನ್ಸ್ಟೇಬಲ್ಗಳು ಸೇರಿ ಒಟ್ಟು 8500 ಪೊಲೀಸರು ನಿಯೋಜಿತರಾಗಿದ್ದಾರೆ. ಇವರಲ್ಲದೆ ನಗರ ಸಶಸ್ತ್ರ ಹಾಗೂ ರಾಜ್ಯ ಸಶಸ್ತ್ರ ಮೀಸಲು ಪಡೆಗಳು ಹಾಗೂ ಸಂಚಾರ ವಿಭಾಗದ ಪೊಲೀಸರು ಸಹ ಪಾಲ್ಗೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ