
ಬೆಂಗಳೂರು (ಮಾ.7): ಯೋಗ ಮಾಡುವ ಸ್ಥಳಕ್ಕೆ ನಾಯಿಯನ್ನು ಕರೆತಂದು ಮಲ-ಮೂತ್ರ ವಿಸರ್ಜನೆ ಮಾಡಿಸಿದ ವಿಚಾರಕ್ಕೆ ಅಪಾರ್ಟ್ಮೆಂಟ್ ನಿವಾಸಿ ಹಾಗೂ ಹಿರಿಯ ನಾಗರಿಕರ ನಡುವೆ ಗಲಾಟೆಯಾಗಿ ಕೈಕೈ ಮಿಲಾಯಿಸಿಕೊಂಡಿದ್ದು, ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಶಶಿಬಾಲಾ (59) ಎಂಬುವರು ನೀಡಿದ ದೂರಿನ ಮೇರೆಗೆ ತರುಣ್ ಅರೋರಾ ಎಂಬಾತನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೂರುದಾರ ಶಶಿಬಾಲಾ ಅವರು ಪತಿ ಓಂಪ್ರಕಾಶ್ ಬಾಜಪೈ ಅವರ ಜತೆ ವರ್ತೂರಿನಲ್ಲಿರುವ ಖಾಸಗಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದಾರೆ. ಇವರ ಇಬ್ಬರು ಪುತ್ರಿಯರು ವಿದೇಶದಲ್ಲಿದ್ದಾರೆ. ಓಂಪ್ರಕಾಶ್ ದಂಪತಿ ನಿತ್ಯ ಅಪಾರ್ಟ್ಮೆಂಟ್ ಆವರಣದಲ್ಲಿರುವ ಪ್ರತ್ಯೇಕವಾದ ಸ್ಥಳದಲ್ಲಿ ಯೋಗ ಮಾಡುತ್ತಾರೆ. ಆದರೆ, ಆರೋಪಿ ತರುಣ್ ಅರೋರಾ, ಈ ಸ್ಥಳಕ್ಕೆ ತನ್ನ ಶ್ವಾನವನ್ನು ಕರೆದುಕೊಂಡು ಬಂದು ಅಶುದ್ಧ ಮಾಡಿಸುತ್ತಿದ್ದ.
ನಾಯಿಗಳ ಓಡಾಟಕ್ಕೆ ಪ್ರತ್ಯೇಕ ಸ್ಥಳವಿರುವಾಗ ಇಲ್ಲಿಗೆ ಏಕೆ ಕರೆತರುತ್ತಿರಾ ಎಂದು ಓಂಪ್ರಕಾಶ್ ಈ ಹಿಂದೆ ಪ್ರಶ್ನಿಸಿದ್ದರು. ಮಾ.3ರಂದು ಮತ್ತೆ ಅದೇ ರೀತಿ ನಾಯಿ ಕರೆತಂದು ಗಲೀಜು ಮಾಡಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ಓಂಪ್ರಕಾಶ್ ಅವರ ಕೊರಳ ಪಟ್ಟಿ ಹಿಡಿದು ಹಲ್ಲೆ ಮಾಡಿದ್ದಾನೆ. ಅದನ್ನು ತಡೆಯಲು ಹೋದಾಗ ಶಶಿಬಾಲಾ ಅವರನ್ನು ತಳ್ಳಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಆರೋಪಿ ತಮಗೆ ಪ್ರಾಣ ಬೆದರಿಕೆ ಹಾಕಿದ್ದಾನೆ. ಹೀಗಾಗಿ ತಮ್ಮ ಮೇಲೆ ಹಲ್ಲೆ ನಡೆಸಿದ ತರುಣ್ ಅರೋರಾ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಶಶಿಬಾಲಾ ದೂರಿನಲ್ಲಿ ಕೋರಿದ್ದಾರೆ. ಈ ಸಂಬಂಧ ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ