
ಬೆಂಗಳೂರು (ಡಿ.29): ರಾಷ್ಟ್ರೀಕೃತ ಬ್ಯಾಂಕ್ ಅಂದಮೇಲೆ ಅಲ್ಲಿ ನಮ್ಮ ಹಣ ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಎಲ್ಲರಲ್ಲೂ ಇರುತ್ತದೆ. ಆದರೆ, ಅದೇ ಬ್ಯಾಂಕಿನ ಹಿರಿಯ ಅಧಿಕಾರಿಯೊಬ್ಬರು ಗ್ರಾಹಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಬರೋಬ್ಬರಿ 3 ಕೋಟಿ ರೂ. ವಂಚಿಸಿರುವ ಆಘಾತಕಾರಿ ಘಟನೆ ಬೆಂಗಳೂರಿನ ಮಲ್ಲೇಶ್ವರದಲ್ಲಿ ಬೆಳಕಿಗೆ ಬಂದಿದೆ.
ಮಲ್ಲೇಶ್ವರದ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ರಘು ಎಂಬಾತನೇ ಈ ಬೃಹತ್ ವಂಚನೆಯ ಕಿಂಗ್ಪಿನ್. ಈತ ಸುಮಾರು 21 ಮಂದಿ ಗ್ರಾಹಕರ ಹೆಸರಿನಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಸಾಲವನ್ನು ಪಡೆದು ಇದೀಗ ಎಸ್ಕೇಪ್ ಆಗಿದ್ದಾನೆ.
ಮ್ಯಾನೇಜರ್ ರಘು ಗ್ರಾಹಕರನ್ನು ಬಹಳ ಚಾಣಾಕ್ಷತನದಿಂದ ಸಂಪರ್ಕಿಸುತ್ತಿದ್ದ. 'ನನ್ನ ಮನೆಯಲ್ಲಿ ತುಂಬಾ ಕಷ್ಟವಿದೆ, ಫ್ಯಾಮಿಲಿ ಸಮಸ್ಯೆಯಾಗಿದೆ. ದಯವಿಟ್ಟು ನಿಮ್ಮ ಹೆಸರಿನಲ್ಲಿ ಸಾಲ ಪಡೆಯಲು ಸಹಕರಿಸಿ' ಎಂದು ಗೋಗರೆಯುತ್ತಿದ್ದನು. 'ನನ್ನ ಬಳಿ ಚಿನ್ನವಿದೆ, ಅದನ್ನು ಅಡವಿಟ್ಟು ಸಾಲ ಪಡೆಯುತ್ತೇನೆ. ಆದರೆ ನನ್ನದೇ ಬ್ಯಾಂಕ್ ಆಗಿರುವುದರಿಂದ ನನ್ನ ಹೆಸರಲ್ಲಿ ಪಡೆಯಲು ತಾಂತ್ರಿಕ ತೊಂದರೆಯಿದೆ, ಹೀಗಾಗಿ ನಿಮ್ಮ ಹೆಸರಲ್ಲಿ ಲೋನ್ ಮಾಡಿಕೊಡಿ' ಎಂದು ನಂಬಿಸುತ್ತಿದ್ದನು.
ಬ್ಯಾಂಕ್ ಮ್ಯಾನೇಜರ್ ಎಂಬ ಗೌರವದಿಂದ ಹಾಗೂ ಆತನ ನಟನೆಯನ್ನು ನಂಬಿದ ಗ್ರಾಹಕರು ಸಹಿಗಳನ್ನು ಹಾಕಿಕೊಟ್ಟಿದ್ದಾರೆ. ಆದರೆ, ರಘು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು, ಯಾವುದೇ ಚಿನ್ನವನ್ನು ಇಡದೆಯೇ ಕೇವಲ ಗ್ರಾಹಕರ ಸಹಿಗಳನ್ನು ಬಳಸಿ ಹಣವನ್ನು ಗುಳುಂ ಮಾಡಿದ್ದಾನೆ.
ದಿನ ಕಳೆದಂತೆ ಸಾಲದ ಕಂತು ಪಾವತಿಯಾಗದಿದ್ದಾಗ ಮತ್ತು ಬ್ಯಾಂಕ್ ಆಡಿಟ್ ಸಂದರ್ಭದಲ್ಲಿ ಮ್ಯಾನೇಜರ್ ಮಾಡಿರುವ ಈ ನಕಲಿ ವ್ಯವಹಾರಗಳು ಬಯಲಿಗೆ ಬಂದಿವೆ. ತಾನು ಸಿಕ್ಕಿಬೀಳುವುದು ಖಚಿತವಾಗುತ್ತಿದ್ದಂತೆ ಮ್ಯಾನೇಜರ್ ರಘು ನಾಪತ್ತೆಯಾಗಿದ್ದಾನೆ. ವಂಚನೆಗೆ ಒಳಗಾದ ಗ್ರಾಹಕರು ಇದೀಗ ಕಂಗಾಲಾಗಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿ ಮ್ಯಾನೇಜರ್ ಪತ್ತೆಗೆ ಬಲೆ ಬೀಸಿದ್ದಾರೆ. ಬ್ಯಾಂಕ್ ಅಧಿಕಾರಿಗಳೇ ಈ ರೀತಿ ವಂಚನೆಗೆ ಇಳಿದರೆ ಗ್ರಾಹಕರು ಯಾರನ್ನು ನಂಬಬೇಕು ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ