ಬೆಂಗಳೂರಿನ ಕೈಗಾರಿಕೆಗಳಿಗೆ ಕಾವೇರಿ ನೀರಿನ ಬದಲು, ಕೆರೆಗಳ ನೀರು ಪೂರೈಕೆ; ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್

By Sathish Kumar KHFirst Published Mar 10, 2024, 7:43 PM IST
Highlights

ಬೆಂಗಳೂರಿನ ಎಲ್ಲ ಕೈಗಾರಿಕೆಗಳು ಹಾಗೂ ಕಾರ್ಖಾನೆಗಳಿಗೆ ಕೆರೆಗಳಿಂದ ನೀರು ಪೂರೈಕೆ ಮಾಡಲಾಗುವುದು ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು. 

ಬೆಂಗಳೂರು (ಮಾ.10): ರಾಜ್ಯ ರಾಜಧಾನಿ ಬೆಂಗಳೂರು ವ್ಯಾಪ್ತಿಯಲ್ಲಿರುವ ಎಲ್ಲ ಕಾರ್ಖಾನೆ ಮತ್ತು ಕೈಗಾರಿಕೆಗಳಿಗೆ ಕೆರೆಗಳ ಬಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ)ದಿಂದ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು. ಕಾವೇರಿ ನೀರನ್ನು ನೀರಿಲ್ಲದ ಪ್ರದೇಶಗಳಿಗೆ ಸರಬರಾಜು ಮಾಡಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್‌ಬಿ) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.

ಬೆಂಗಳೂರಿನ ನೀರಿನ ಸಮಸ್ಯೆ‌ಯನ್ನು ನಿವಾರಣೆಗೆ ಸ್ವತಃ ಫಿಲ್ಡ್‌ಗಿಳಿದು ಅಗರಂ ಕೆರೆ ವೀಕ್ಷಣೆ ಮಾಡಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದ ಕಾರ್ಖಾನೆ ಮತ್ತು ಕೈಗಾರಿಕೆಗಳಿಗೆ ಎಸ್‌ಟಿಪಿಯಿಂದ ಸಂಸ್ಕರಿಸಿ ಶುದ್ಧೀಕರಿಸಿದ ನೀರನ್ನು ಸರಬರಾಜು ಮಾಡಲಾಗುವುದು. ಎಲ್ಲ ಮಾದರಿಯ ಕೈಗಾರಿಕೆಗಳಿಗೆ ಸಂಪೂರ್ಣವಾಗಿ ಕುಡಿಯುವ ನೀರು ಪೂರೈಕೆಯಲ್ಲಿನ ಅರ್ಧದಷ್ಟು ನೀರನ್ನು ನೀರಿಲ್ಲದ ಸಮಸ್ಯೆ ಅನುಭವಿಸುತ್ತಿರುವ ಪ್ರದೇಶಗಳಿಗೆ ಪೂರೈಸಲು ಚಿಂತನೆ ನಡೆಸಲಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ‌ವಿನೂತನ‌ ಚಿಂತನೆ ಮಾಡಲಾಗಿದೆ. ಇದರಿಂದ‌ ನಗರದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ ಎಂದು ಹೇಳಿದರು.

ಬೆಂಗಳೂರಲ್ಲಿ ಬೋರ್‌ವೆಲ್ ಕೊರೆಸಲು ಜಲಮಂಡಳಿ ಅನುಮತಿ ಕಡ್ಡಾಯ; ಅರ್ಜಿ ಸಲ್ಲಿಕೆಗೆ ಮಾ.15ರವರೆಗೆ ಅವಕಾಶ

ನಂತರ, ದೇವನಹಳ್ಳಿಯಲ್ಲಿ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್ ವತಿಯಿಂದ ಅಳವಡಿಸಿರುವ ಫಿಲ್ಟರ್ ಕೊಳವೆಬಾವಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಅಳವಡಿಸುವ ಸಂಬಂಧ ತಜ್ಞರುಗಳು ಹಾಗೂ ಅಧಿಕಾರಿಗಳ ತಂಡದೊಂದಿಗೆ  ಅವರು ಅಗರಂ ಕೆರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಗರಂ ಕೆರೆ ಬಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನೀರು ಶುದ್ಧೀಕರಿಸಿ ಪೂರೈಕೆ ಮಾಡಲಾಗುತ್ತಿರುವುದನ್ನು ಪರಿಶೀಲಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬೆಂಗಳೂರಿಗೆ ಬೇಕಿರೋದು 8 ಟಿಎಂಸಿ, ಕೆಆರ್‌ಎಸ್ ಡ್ಯಾಂನಲ್ಲಿ 34 ಟಿಎಂಸಿ ನೀರಿದೆ: ರಾಮ್ ಪ್ರಸಾತ್ ಮನೋಹರ್

ನಾರಾಯಣಪುರ ಜಿಎಲ್‍ಆರ್‌ಗೆ ಭೇಟಿ ನೀಡಿ ಪ್ರಸ್ತುತ ಬೇಸಿಗೆ ನೀರಿನ ಬಿಕ್ಕಟ್ಟನ್ನು ಎದುರಿಸಲು ಬೆಂಗಳೂರು ಪೂರ್ವ ವಲಯದ ವಿವಿಧ ಸ್ಥಳಗಳಲ್ಲಿ ಅಳವಡಿಸಲಾಗಿರುವ ಸಿಂಟ್ಯಾಕ್ಸ್ ನೀರಿನ ಟ್ಯಾಂಕ್‍ಗಳಿಗೆ ನೀರು ಒದಗಿಸಲು ಖಾಸಗಿ ಟ್ಯಾಂಕರ್‌ಗಳಿಗೆ ಕಾವೇರಿ ನೀರು ತುಂಬಲು ರಚಿಸಲಾದ ಫಿಲ್ಲಿಂಗ್ ಪಾಯಿಂಟ್‍ಗಳನ್ನು ಪರಿಶೀಲಿಸಿದರು. ಈ ಘಟಕದಿಂದ ಎ.ನಾರಾಯಣಪುರ ವಾರ್ಡ್, ಕೆ.ಆರ್.ಪುರಂ ವಾರ್ಡ್,ವಿಜ್ಞಾನ ನಗರ ವಾರ್ಡ್,ಎಚ್‍ಎಎಲ್ ವಾರ್ಡ್‍ಗೆ ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿರುವುದನ್ನು ಪರಿಶೀಲಿಸಿದರು. ಎ.ನಾರಾಯಣಪುರದ ಕೃಷ್ಣನಗರದ ಸ್ಲಂಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಅಹವಾಲುಗಳನ್ನು ಆಲಿಸಿದರು.

click me!