Bengaluru Karaga: ಕರ್ಪೂರ ಸೇವೆ ವೇಳೆ ಅನಾಹುತ, ಆಟೋ, ಬೈಕ್‌ಗೆ ಹತ್ತಿಕೊಂಡ ಬೆಂಕಿ!

By Santosh NaikFirst Published Apr 6, 2023, 2:40 PM IST
Highlights

ಐತಿಹಾಸಿಕ ಬೆಂಗಳೂರು ಕರಗ ಸೇವೆಯಲ್ಲಿ ಅನಾಹುತ ಸಂಭವಿಸಿದೆ. ದ್ರೌಪದಿ ದೇವಿಗೆ ಕರ್ಪೂರ ಸೇವೆಯ ಸಮಯದಲ್ಲಿ ಅಕ್ಕಪಕ್ಕದಲ್ಲಿದ್ದ ವಾಹನಗಳಿಗೆ ಬೆಂಕಿ ಹತ್ತಿಕೊಂಡಿದೆ. ಘಟನೆಯಲ್ಲಿ 10 ಬೈಕ್‌ ಹಾಗೂ ಒಂದು ಆಟೋಗೆ ಬೆಂಕಿ ತಗುಲಿದೆ.
 

ಬೆಂಗಳೂರು (ಏ.6): ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಉದ್ಯಾನನಗರಿ ಸಂಪೂರ್ಣವಾಗಿ ಸಜ್ಜಾಗಿದೆ. ಇದರ ನಡುವೆಯೇ ಗುರುವಾರ ಕರಗ ನಡೆಯುವ ಸ್ಥಳದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ದ್ರೌಪದಿ ದೇವಿಗೆ ಕರ್ಪೂರ ಸೇವೆ ನೀಡುವ ಸಮಯದಲ್ಲಿ ಅಕ್ಕಪಕ್ಕದಲ್ಲಿದ್ದ ವಾಹನಗಳಿಗೆ ಬೆಂಕಿ ಹತ್ತಿಕೊಂಡಿದೆ. ಆಟೋ ಹಾಗೂ ಬೈಕ್‌ಗಳಿಗೆ ಬೆಂಕಿ ತಗುಲಿದ ಕಾರಣ, ವಾಹನಗಳು ಹಾನಿಗೆ ಈಡಾಗಿದೆ. ಕರ್ಪೂರದ ಬೆಂಕಿಯಿಂದ ದ್ವಿಚಕ್ರ ವಾಹನಗಳಿಗೆ ಬೆಂಕಿ ತಗುಲಿ ಹಾನಿಯಾಗಿದೆ. ಈ ವೇಳೆ ತಕ್ಷಣವೇ ಎಚ್ಚೆತ್ತುಕೊಂಡ ಸ್ಥಳೀಯರು ಬೆಂಕಿ ನಂದಿಸಿದ್ದಾರೆ. ಬೆಂಕಿಯಿಂದ 10 ಬೈಕ್ ಹಾಗೂ ಒಂದು ಆಟೋ ಬಹುತೇಕವಾಗಿ ಸುಟ್ಟುಹೋಗಿದೆ. ದ್ರೌಪದಿ ದೇವಿಗೆ ಕರ್ಪೂರ ಸೇವೆ ಮಾಡುವ ಸಮಯದಲ್ಲಿ ಈ ಘಟನೆ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ದೇವರಿಗೆ ಹರಕೆ ಕಟ್ಟಿಕೊಂಡಿದ್ದ ಭಕ್ತರಿಂದ ಕರ್ಪೂರ ಸೇವೆ ನೀಡಲಾಗುತ್ತದೆ. ಈ ವೇಳೆ ನೂರಾರು ಕೆಜಿಗಳಷ್ಟು ಕರ್ಪೂರವನ್ನು ಬಳಕೆ ಮಾಡಲಾಗುತ್ತದೆ. ಎನ್ ಆರ್ ಜಂಕ್ಷನ್ ನಿಂದ ದೇವಾಲಯದ ವರೆಗೆ ಭಕ್ತರು ಕರ್ಪೂರ ಹಚ್ಚುವ ಮೂಲಕ ಸೇವೆ ಸಲ್ಲಿಸಿದ್ದರು.

ಸುಮಾರು ಏಳು ನೂರು ಮೀಟರ್ ನಷ್ಟು ಉದ್ದವಾಗಿ ಕರ್ಪೂರವನ್ನು ಹಚ್ಚುವ ಮೂಲಕ ಸೇವೆ ಕಾರ್ಯಕ್ರಮ ನಡೆಯುತ್ತಿತ್ತು. ಐವತ್ತು ಕೆಜಿಯ ಎರಡು ಕರ್ಪೂರ ಗಟ್ಟಿಗಳನ್ನು ಕೂಡ ಹಚ್ಚಲಾಗಿತ್ತು. ಕೆಳಗೆ ಐಸ್ ಬಾಕ್ಸ್ ಇಟ್ಟು ಅದರ ಮೇಲೆ ಎರಡು ಕರ್ಪೂರದ ಗಟ್ಟಿಗಳನ್ನಿಟ್ಟು ಸೇವೆ ನೀಡಲಾಗಿದೆ. ಅಪ್ಪು, ಓಂ ಹಾಗೂ ಆರ್‌ಸಿಬಿ ಹೆಸರಲ್ಲಿ ಭಕ್ತರು ಕರ್ಪೂರ ಹಚ್ಚಿದ್ದಾರೆ.

Latest Videos

Bengaluru: ವಿಜೃಂಭಣೆಯ ಐತಿಹಾಸಿಕ ಧರ್ಮರಾಯ ಹಸಿ ಕರಗ ಮಹೋತ್ಸವಕ್ಕೆ ಸಕಲ ಸಿದ್ಧತೆ

ಕರಗ ಉತ್ಸವ ಹಿನ್ನಲೆ, ಮದ್ಯ ನಿಷೇಧ: ಕರಗ ಉತ್ಸವ ಹಿನ್ನೆಲೆಯಲ್ಲಿ ಕೇಂದ್ರ ವಿಭಾಗದ ನಾಲ್ಕು ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ 12 ರಿಂದ ಶುಕ್ರವಾರ ಬೆಳಗ್ಗೆ 10 ಗಂಟೆವರೆಗೆ ಮದ್ಯ ಮಾರಾಟ ನಿಷೇಧಿಸಿ ನಗರ ಪೊಲೀಸ್‌ ಆಯುಕ್ತ ಸಿ.ಎಚ್‌.ಪ್ರತಾಪ್‌ ರೆಡ್ಡಿ ಆದೇಶ ನೀಡಿದ್ದಾರೆ. ಶ್ರೀ ಧರ್ಮರಾಯಸ್ವಾಮಿ ಕರಗ ಉತ್ಸವ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಎನ್ನುವಂತೆ ಮದ್ಯ ಮಾರಾಟ ನಿರ್ಬಂಧಿಸಲಾಗಿದೆ. ಹಲಸೂರು ಗೇಟ್‌, ಎಸ್‌.ಜೆ.ಪಾರ್ಕ್, ಎಸ್‌.ಆರ್‌.ನಗರ ಹಾಗೂ ವಿಲ್ಸನ್‌ ಗಾರ್ಡನ್‌ ಠಾಣಾ ವ್ಯಾಪ್ತಿಯ ಬಾರ್‌ಗಳು, ವೈನ್ಸ್‌ ಷಾಪ್‌ಗಳು ಹಾಗೂ ಪಬ್‌ಗಳು ಸೇರಿದಂತೆ ಎಲ್ಲ ರೀತಿಯ ಮದ್ಯ ಮಾರಾಟ ಮಾಡುವ ಅಂಗಡಿಗಳು ಏ.6 ರಿಂದ ಮಧ್ಯಾಹ್ನ 12 ಗಂಟೆಯಿಂದ ಏ.7 ಗಂಟೆವರೆಗೆ 10 ಗಂಟೆಗೆವರೆಗೆ ವಹಿವಾಟು ನಿರ್ಬಂಧಿಸಲಾಗಿದೆ ಎಂದು ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

Bengaluru: ಇಂದು ಮಧ್ಯರಾತ್ರಿ ಐತಿಹಾಸಿಕ ಅದ್ಧೂರಿ ಕರಗ ಶಕ್ತ್ಯೋತ್ಸವ

ಕರಗದ ಹಿನ್ನೆಲೆಯಲ್ಲಿ ದೇವಾಲಯದ ಒಳಗೆ, ಹೊರಗೆ ಹಾಗೂ ಕರಗಕ್ಕೆ ಮಲ್ಲಿಗೆ ಹೂವಿನ ಅಲಂಕಾರ ಮಾಡಲು 150 ಮಂದಿ ಪರಿಣಿತರನ್ನು ತಮಿಳುನಾಡಿನಿಂದ ಕರೆಸಲಾಗಿದೆ. ಹೂವಿನ ಅಲಂಕಾರದ ವೈಭೋಗ ನೋಡುವುದೇ ಕಣ್ಣಿಗೆ ಹಬ್ಬ.  ಅದೇ ರೀತಿ ವಿದ್ಯುತ್‌ ದೀಪಾಲಂಕಾರ ಗಮನಸೆಳೆಯಲಿದ್ದು, ಮೈಸೂರು ಅರಮನೆಯಲ್ಲಿ ಲೈಟಿಂಗ್‌ ವಿನ್ಯಾಸ ಮಾಡುವವರನ್ನು ಕರೆಸಲಾಗಿದೆ ಎಂದು ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದ ಅಧ್ಯಕ್ಷ ಕೆ.ಸತೀಶ್‌ ಮಾಹಿತಿ ನೀಡಿದ್ದಾರೆ.

click me!