ಬೆಂಗಳೂರು: ವಂಚಕರಿಗೆ ಸ್ನೇಹಿತನ ಖಾತೆ ಮಾರಾಟ, ವಿದ್ಯಾರ್ಥಿಯ ಬ್ಯಾಂಕ್ ಖಾತೆಯಿಂದ ₹7 ಕೋಟಿ ವರ್ಗಾಹಿಸಿ ಮೋಸ! ಕೋಟಿಗಟ್ಟಲೇ ಹಣ ಎಲ್ಲಿಂದ?

Published : Feb 24, 2026, 03:51 PM IST
Engineering Student

ಸಾರಾಂಶ

ಬೆಂಗಳೂರಿನಲ್ಲಿ, ಸ್ನೇಹಿತನ ಬ್ಯಾಂಕ್ ಖಾತೆಯನ್ನು ಸೈಬರ್ ವಂಚಕರಿಗೆ ಮಾರಾಟ ಮಾಡಿ ₹7 ಕೋಟಿ ಅಕ್ರಮ ಹಣ ವರ್ಗಾವಣೆಗೆ ಸಹಕರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಸೈಬರ್ ಪೊಲೀಸರು ಬಂಧಿಸಿದ್ದಾರೆ. ಟೆಲಿಗ್ರಾಂ ಮೂಲಕ ವಂಚಕರ ಜಾಲಕ್ಕೆ ಖಾತೆಯ ವಿವರಗಳನ್ನು ನೀಡಿ ಕಮಿಷನ್ ಪಡೆದಿರುವುದು ತಿಳಿದುಬಂದಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸೈಬರ್ ವಂಚನೆ ಪ್ರಕರಣವೊಂದು ಭಾರೀ ಆತಂಕ ಮೂಡಿಸಿದೆ. ಅಕ್ರಮವಾಗಿ ಸೈಬರ್ ವಂಚಕರಿಗೆ ತನ್ನ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಮಾರಾಟ ಮಾಡಿ, ಸುಮಾರು ₹7 ಕೋಟಿ ಹಣ ವರ್ಗಾವಣೆಗೆ ನೇರವಾಗಿ ಸಹಕರಿಸಿದ್ದ ಆರೋಪದ ಮೇಲೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೊಬ್ಬನನ್ನು ಉತ್ತರ ವಿಭಾಗದ ಸೈಬರ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ಮೂಲದ ಇ. ಆಯುಷ್ ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಸಮೀಪದ ಪ್ರತಿಷ್ಠಿತ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ಈ ವಂಚನೆಗೆ ಬಲಿಯಾಗಿದ್ದು, ಆತನ ಬ್ಯಾಂಕ್ ಖಾತೆಯಲ್ಲಿ ಏಕಾಏಕಿ ಕೋಟಿಗಟ್ಟಲೆ ಹಣ ವಹಿವಾಟು ನಡೆದಿರುವುದು ಬೆಳಕಿಗೆ ಬಂದ ನಂತರ ಪ್ರಕರಣ ಬಯಲಾಗಿತ್ತು.

ಬ್ಯಾಂಕ್ ವಿಚಾರಣೆಯಲ್ಲಿ ಬೆಳಕಿಗೆ ಬಂದ ವಂಚನೆ

ಸಂತ್ರಸ್ತ ವಿದ್ಯಾರ್ಥಿಯ ಬ್ಯಾಂಕ್ ಖಾತೆಯಲ್ಲಿ ಅಸಹಜ ಪ್ರಮಾಣದ ಹಣ ವಹಿವಾಟು ನಡೆದಿರುವುದನ್ನು ಗಮನಿಸಿದ ಬ್ಯಾಂಕ್ ಅಧಿಕಾರಿಗಳು, ಖಾತೆದಾರನನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಖಾತೆ ದುರುಪಯೋಗವಾಗಿರುವುದು ತಿಳಿದುಬಂದಿದ್ದು, ಕೂಡಲೇ ಸಂತ್ರಸ್ತನಿಗೆ ಮಾಹಿತಿ ನೀಡಿದ್ದಾರೆ. ತನ್ನ ಖಾತೆಯಲ್ಲಿ ಸುಮಾರು ₹7 ಕೋಟಿ ಮೊತ್ತದ ಹಣ ವರ್ಗಾವಣೆ ನಡೆದಿರುವುದನ್ನು ತಿಳಿದು ವಿದ್ಯಾರ್ಥಿ ತೀವ್ರ ಆಘಾತಕ್ಕೆ ಒಳಗಾಗಿದ್ದಾನೆ.

ನಂತರ ನಡೆದ ಆಂತರಿಕ ವಿಚಾರಣೆಯಲ್ಲಿ, ಈ ಹಣ ವರ್ಗಾವಣೆ ಸೈಬರ್ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದೆ ಎಂಬುದು ಗೊತ್ತಾಗಿದೆ. ತಕ್ಷಣವೇ ಸಂತ್ರಸ್ತ ವಿದ್ಯಾರ್ಥಿ ಸೈಬರ್ ಕ್ರೈಂ ಠಾಣೆಗೆ ದೂರು ಸಲ್ಲಿಸಿದ್ದಾನೆ. ಈ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರೋಪಿಯಾದ ಆಯುಷ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೇಗೆ ನಡೆದಿತ್ತು ವಂಚನೆ?

ತನಿಖೆಯಲ್ಲಿ ತಿಳಿದುಬಂದಂತೆ, ಸುಮಾರು ಒಂದು ವರ್ಷದ ಹಿಂದೆ ಸಂತ್ರಸ್ತ ವಿದ್ಯಾರ್ಥಿಗೆ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಓದುತ್ತಿದ್ದ ಆಯುಷ್ ಪರಿಚಯವಾಗಿದ್ದ. ಕಾಲಕ್ರಮೇಣ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಈ ಸ್ನೇಹವನ್ನು ದುರುಪಯೋಗ ಮಾಡಿಕೊಂಡ ಆರೋಪಿಯು, “ನನ್ನ ಬ್ಯಾಂಕ್ ಖಾತೆಯಲ್ಲಿ ಹಣ ಕಡಿಮೆ ಇರುವ ಕಾರಣ ಖಾತೆ ಸ್ಥಗಿತಗೊಂಡಿದೆ. ಕೆಲವು ದಿನಗಳ ಕಾಲ ಹಣಕಾಸು ವಹಿವಾಟಿಗೆ ನಿನ್ನ ಬ್ಯಾಂಕ್ ಖಾತೆಯನ್ನು ಬಳಸಿಕೊಳ್ಳುತ್ತೇನೆ” ಎಂದು ಸಂತ್ರಸ್ತನನ್ನು ನಂಬಿಸಿದ್ದಾನೆ.

ಈ ಮಾತು ನಂಬಿದ ಸಂತ್ರಸ್ತ ವಿದ್ಯಾರ್ಥಿ, ಕಳೆದ ನವೆಂಬರ್‌ನಲ್ಲಿ ತನ್ನ Karnataka Bank ಖಾತೆಯ ಪಾಸ್‌ಬುಕ್, ಎಟಿಎಂ ಕಾರ್ಡ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ವಿವರಗಳನ್ನು ಆರೋಪಿಗೆ ನೀಡಿದ್ದಾನೆ. ಅಲ್ಲದೆ, ಆ ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಏರ್‌ಟೆಲ್ ಸಿಮ್ ಕಾರ್ಡ್‌ನನ್ನೂ ಸಹ ಗೆಳೆಯನಿಗೆ ಒಪ್ಪಿಸಿದ್ದಾನೆ. ಈ ವಿಶ್ವಾಸವನ್ನೇ ಅಸ್ತ್ರವನ್ನಾಗಿಸಿಕೊಂಡ ಆರೋಪಿಯು, ಆ ಬ್ಯಾಂಕ್ ಖಾತೆಯನ್ನು ಸೈಬರ್ ವಂಚನೆ ಹಣ ವರ್ಗಾವಣೆಗೆ ಬಳಸಿಕೊಂಡಿದ್ದಾನೆ.

ಟೆಲಿಗ್ರಾಂನಲ್ಲಿ ಖಾತೆ ಮಾರಾಟ – ಕಮಿಷನ್ ದಂಧೆ

ಪೊಲೀಸ್ ತನಿಖೆಯಲ್ಲಿ ಮತ್ತೊಂದು ಗಂಭೀರ ಅಂಶ ಬೆಳಕಿಗೆ ಬಂದಿದೆ. ಆರೋಪಿಯು ಟೆಲಿಗ್ರಾಂ ಆ್ಯಪ್ ಮೂಲಕ ಕಾರ್ಯನಿರ್ವಹಿಸುವ ಸೈಬರ್ ವಂಚಕರ ಜಾಲಕ್ಕೆ ತನ್ನ ಸ್ನೇಹಿತನ ಬ್ಯಾಂಕ್ ಖಾತೆಯನ್ನು ಮಾರಾಟ ಮಾಡಿರುವುದು ಪತ್ತೆಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಬ್ಯಾಂಕ್ ಖಾತೆ ಬಾಡಿಗೆಗೆ’ ಎಂಬ ಜಾಹೀರಾತು ನೀಡಿ ಸೈಬರ್ ಅಪರಾಧಿಗಳು ಖಾತೆಗಳನ್ನು ಹುಡುಕುತ್ತಾರೆ. ಹಣದಾಸೆಗೆ ಬಿದ್ದ ಆಯುಷ್, ಸ್ನೇಹಿತನ ಖಾತೆಯನ್ನು ಈ ಜಾಲಕ್ಕೆ ಒಪ್ಪಿಸಿ ಪ್ರತಿಯಾಗಿ ಕಮಿಷನ್ ಪಡೆದಿದ್ದಾನೆ.

ಆತನಿಗೆ ಎಷ್ಟು ಹಣ ಕಮಿಷನ್ ರೂಪದಲ್ಲಿ ಸಂದಾಯವಾಗಿದೆ ಎಂಬುದರ ಬಗ್ಗೆ ಪೊಲೀಸರು ಇನ್ನೂ ಮಾಹಿತಿ ಸಂಗ್ರಹಿಸುತ್ತಿದ್ದು, ಈ ಹಿಂದೆ ನಡೆದ ಸೈಬರ್ ವಂಚನೆ ಪ್ರಕರಣಗಳ ಜೊತೆಗೆ ಈ ಖಾತೆಯ ಸಂಪರ್ಕವಿದೆಯೇ ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 ಈ ಪ್ರಕರಣದ ಮೂಲಕ ಸಾರ್ವಜನಿಕರಿಗೆ ಮಹತ್ವದ ಎಚ್ಚರಿಕೆ. ಯಾರೇ ಆಗಿರಲಿ, ಸ್ನೇಹಿತನಾದರೂ, ಸಂಬಂಧಿಕನಾದರೂ ಬ್ಯಾಂಕ್ ಖಾತೆ ವಿವರಗಳು, ಎಟಿಎಂ ಕಾರ್ಡ್, ಓಟಿಪಿ, ಸಿಮ್ ಕಾರ್ಡ್ ಹಂಚಿಕೊಳ್ಳುವುದು ಗಂಭೀರ ಅಪರಾಧಕ್ಕೆ ದಾರಿ ಮಾಡಿಕೊಡಬಹುದು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಟಾಂಜನದ ಒಳಗಿರೋ ದರ್ಶನ್ ಸ್ಥಿತಿಗೆ ದೇವರೇ ಗತಿ; ಟಿವಿ ಕೊಟ್ಟಿದ್ದಕ್ಕೆ ಥ್ಯಾಕ್ಸ್ ಎಂದ ನಟನಿಗೆ ನ್ಯಾಯಾಧೀಶರ ಕೌಂಟರ್ ಏನು?
ನಟನ ಪತ್ನಿ ದೀಪಿಕಾ ಇಲ್ಲಿಯವರು, ಕನ್ನಡದ ಬಗ್ಗೆ ತಿಳಿದು ಮಾತನಾಡಬೇಕು 'ಕಾಂತಾರ' ವಿವಾದಕ್ಕೆ ರಿಲೀಫ್ ಕೊಟ್ಟ ಹೈಕೋರ್ಟ್