
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಆ.16): ಕೂಲಿ ಮಾಡಿ ಗಳಿಸಿದ ಹಣದಲ್ಲಿ 10 ಸಾವಿರ ರುಪಾಯಿಯನ್ನು ಇಸ್ರೇಲ್ ವಿರುದ್ಧದ ಹೋರಾಟಕ್ಕಾಗಿ ಪ್ಯಾಲೆಸ್ತೀನ್ ಸೇನೆ ಪರವಾಗಿ ಬಂಧಿತ ಶಂಕಿತ ಉಗ್ರ ಅಸಾಫೂಲ್ ಮಲ್ಲಿಕ್ ದೇಣಿಗೆ ನೀಡಿದ್ದ ಸಂಗತಿ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಾಕಿಸ್ತಾನದ ನಿಷೇಧಿತ ಉಗ್ರರ ಜತೆಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಶಂಕಿತ ಉಗ್ರ ಮಲ್ಲಿಕ್ನನ್ನು ಶುಕ್ರವಾರ ಬೆಂಗಳೂರಲ್ಲಿ ಬಂಧಿಸಲಾಗಿತ್ತು. ಜಿಗಣಿಯ ಕೈಗಾರಿಕಾ ಪ್ರದೇಶದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿದ್ದ ಈತನಿಗೆ ಮಾಸಿಕ 20,000 ಪಗಾರ ಸಿಗುತ್ತಿತ್ತು. ಇದರಲ್ಲೇ 10 ಸಾವಿರ ಉಳಿಸಿ ಪ್ಯಾಲೆಸ್ತೀನ್ ಪರ ಆರ್ಥಿಕ ನೆರವು ಕೊಟ್ಟಿದ್ದ. ಆ ಹಣವನ್ನು ಬಾಂಗ್ಲಾದ ಕರೆನ್ಸಿ ‘ಟಾಕಾ’ಗೆ ಬದಲಾಯಿಸಿ ಅಫ್ಘಾನಿಸ್ತಾನದಲ್ಲಿರುವ ಶಂಕಿತ ಉಗ್ರನ ಮೂಲಕ ದೇಣಿಗೆಯಾಗಿ ನೀಡಿದ್ದ. ವಿಚಾರಣೆ ವೇಳೆ ಈ ಸಂಗತಿ ಮಲ್ಲಿಕ್ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ಹೇಳಿವೆ.
ಪ್ಯಾಲಿಸ್ತೀನ್ನಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ಹೋರಾಟಕ್ಕೆ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ)ದ ಉಗ್ರ ಸಂಘಟನೆ ಸೇರಲು ನಿಶ್ಚಯಿಸಿದ್ದೆ ಎಂದು ಮಲ್ಲಿಕ್ ಹೇಳಿಕೆ ಕೊಟ್ಟಿರುವುದಾಗಿ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ. ಆದರೆ, ಬಡ ಪೋಷಕರ ಮಖ ನೋಡಿ ತನ್ನ ನಿರ್ಧಾರ ಬದಲಿಸಿದ್ದ ಎಂದು ತಿಳಿದು ಬಂದಿದೆ.
ಫೇಸ್ಬುಕ್, ಇನ್ಸ್ಟಾಗ್ರಾಂ ಹಾಗೂ ವಾಟ್ಸ್ಆ್ಯಪ್ನಲ್ಲಿ ಸಕ್ರಿಯನಾಗಿದ್ದ ಈತನಿಗೆ ಅಫ್ಘಾನಿಸ್ತಾನದಲ್ಲಿರುವ ಟಿಟಿಪಿ ನೇಮಕಾತಿ ವಿಭಾಗದ ಸಂಘಟಕ, ಬಾಂಗ್ಲಾ ಮೂಲದ ಶಂಕಿತ ಉಗ್ರನ ಸಂಪರ್ಕ ಸಿಕ್ಕಿದೆ. ಅಫ್ಘಾನಿಸ್ತಾನಕ್ಕೆ ತೆರಳಲು ಉದ್ದೇಶದಿಂದ ಈತ ಪಾಸ್ಪೋರ್ಟ್ಗೂ ಅರ್ಜಿ ಸಲ್ಲಿಸಿದ್ದು, ಅದು ತಿರಸ್ಕೃತಗೊಂಡಿತ್ತು. ಈ ವೇಳೆ ಆತ ಐಬಿ ಕಣ್ಣಿಗೆ ಬಿದ್ದಿದ್ದು, ಈತನ ಮೇಲೆ ಕಣ್ಣಿಟ್ಟಿದ್ದ ಐಬಿ ರಾಜ್ಯ ಪೊಲೀಸರಿಗೆ ಮಾಹಿತಿ ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ