
ಬೆಂಗಳೂರು (ನ.15): ರಾಜ್ಯದಲ್ಲಿ ನವೆಂಬರ ತಿಂಗಳು ಬಂತೆಂದರೆ ಕನ್ನಡ ನಾಡು, ನುಡಿಯ ಬಗ್ಗೆ ತುಸು ಹೆಚ್ಚಾಗಿಯೇ ಅಭಿಮಾನ ಮುಡುತ್ತದೆ. ಕಾರಣ ಕರ್ನಾಟಕ ರಾಜ್ಯ ಉದಯವಾದ ನವೆಂಬರ್ 1 ಅನ್ನು ಕನ್ನಡ ರಾಜ್ಯೋತ್ಸವವಾಗಿ ಆಚರಿಸುತ್ತಿದ್ದ ನಾವು ಇದೀಗ ಇಡೀ ನವೆಂಬರ್ ತಿಂಗಳನ್ನು ಕನ್ನಡದ ತಿಂಗಳಾಗಿ ಆಚರಣೆ ಮಾಡುತ್ತಿದ್ದೇವೆ. ಆದರೆ, ಇಲ್ಲೊಬ್ಬ ಕನ್ನಡದ ದಂಪತಿ ತಮಗೆ ಹುಟ್ಟಿದ ಹೆಣ್ಣು ಮಗುವಿಗೆ ಭುವನೇಶ್ವರಿ ಎಂದು ಹೆಸರಿಟ್ಟು 2000 ಜನರಿಗೆ ಊಟ ಹಾಕಿದ್ದಾರೆ.
ಹೌದು, ಹೆಣ್ಣು ಮಗು ಹುಟ್ಟಿದರೆ ಮೂಗು ಮುರಿದು ಹೋಗುವವರೇ ಹೆಚ್ಚಾಗಿರುವಾಗ ಇಲ್ಲೊಬ್ಬ ದಂಪತಿ ತಮಗೆ ಮಗಳು ಹುಟ್ಟಿದ್ದಕ್ಕೆ ಇಡೀ ಊರಿಗೆ ಸಿಹಿ ಹಂಚಿದ್ದಾರೆ. ಇನ್ನು ಕನ್ನಡ ನಾಡು, ನುಡಿಯ ಬಗ್ಗೆ ಅಭಿಮಾನ ಇಟ್ಟುಕೊಂಡ ಈ ದಂಪತಿ ತಮ್ಮ ಮಗುವಿಗೆ ಕನ್ನಡ ತಾಯಿ ಭುವನೇಶ್ವರಿ ದೇವಿ ಎಂದು ಹೆಸರಿಡಲು ತೀರ್ಮಾನಿಸಿದ್ದಾರೆ. ಇದೇ ನವೆಂಬರ್ ತಿಂಗಳಲ್ಲಿ ಮಗಳ ನಾಮಕರಣ ಕಾರ್ಯಕ್ರಮವನ್ನು ಹಮ್ಮಿಕೊಂಡು ಅದ್ಧೂರಿಯಾಗಿ ನೆರವೇರುಸಲು ಮುಂದಾಗಿದ್ದಾರೆ. ಆದರೆ, ಈ ಕಾರ್ಯಕ್ರಮ ಕನ್ನಡ ಭಾಷೆಯನ್ನು ಹಾಗೂ ಕನ್ನಡದ ಸಂಸ್ಕೃತಿಯನ್ನು ಸಾರುವುದಕ್ಕೂ ವೇದಿಕೆಯನ್ನು ಬಳಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: 'ಪುಷ್ಪ 2' ಟ್ರೇಲರ್ ಬಿಡುಗಡೆಗೂ ಮುನ್ನ ರಶ್ಮಿಕಾ ಭಾವನಾತ್ಮಕ ಪೋಸ್ಟ್; ಡಾಲಿ ಧನಂಜಯ ಮಿಸ್ಸಿಂಗ್!
ಬೆಳಗಾವಿ ಜಿಲ್ಲೆಯ ಅನಿಲ ದೊಡ್ಡಮನಿ ಎನ್ನುವವರೇ ತಮ್ಮ ಮಗಳಿಗೆ ಭುವನೇಶ್ವರಿ ಎಂದು ಹೆಸರಿಟ್ಟು, ಗ್ರಾಮದ 2000 ಜನರಿಗೆ ಊಟ ಹಾಕಿಸಿದ ಕನ್ನಡ ಪ್ರೇಮಿಯಾಗಿದ್ದಾರೆ. ಇನ್ನು ಮಗಳ ನಾಮಕರಣಕ್ಕೆ ಅದ್ಧೂರಿ ವೇದಿಕೆ ನಿರ್ಮಿಸಿದ ಅದರ ಮುಂಭಾಗದ ಆವರಣದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಮಹರ್ಷಿ ವಾಲ್ಮೀಕಿ ಮೂರ್ತಿಗಳನ್ನು ಇಟ್ಟಿದ್ದಾರೆ. ಜೊತೆಗೆ, ವೇದಿಕೆಯಲ್ಲಿ ದೊಡ್ಡದಾಗಿ ಕಾಣಿಸುವಂತೆ ಕನ್ನಡದ ಮಾತೆ ಭುವನೇಶ್ವರಿ ದೇವಿಯ ಮೂರ್ತಿಯನ್ನು ಇಟ್ಟು ಪೂಜಿಸಿದ್ದಾರೆ. ನಂತರ, ತಮ್ಮ ಮಗಳಿಗೆ ಭುವನೇಶ್ವರಿ ಎಂದು ನಾಮಕರಣ ಮಾಡಿ, ಇಬ್ಬರೂ ವೇದಿಕೆ ಮೇಲೆ ನಿಂತು ಕನ್ನಡದ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಇಡೀ ಗ್ರಾಮದಲ್ಲಿ ಅಂದು ಹಬ್ಬದ ವಾತಾವರಣ ಏರ್ಪಟ್ಟಿತ್ತು. ಇನ್ನು ಇಡೀ ಗ್ರಾಮಸ್ಥರಿಗೆ ಊಟವನ್ನು ಹಾಕಿಸುವ ಮೂಲಕ ತಮಗೆ ಹೆಣ್ಣು ಮಗು ಜನಿಸಿರುವುದನ್ನು ಸಂಭ್ರಮಿಸಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೆಳಗಾವಿ ರಾಯಣ್ಣ ಎನ್ನುವ ಫೇಸ್ಬುಕ್ ಖಾತೆಯಿಂದ ಇದನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳಾಗಿದೆ. ಸಾವಿರಾರು ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋ ನೂರಾರು ಜನರು ಅದನ್ನು ಹಂಚಿಕೊಂಡಿದ್ದಾರೆ. ನೆನಪಿರಲಿ ಹೆಣ್ಣು ಮಗಳೆಂದರೆ ಟೆನ್ಸನ್ ಅಲ್ಲ, 10 ಗಂಡು ಮಕ್ಕಳಿಗೆ ಸಮ ಎಂದು ಬರೆದುಕೊಂಡಿದ್ದಾರೆ. ಇನ್ನು ಕನ್ನಡಿಗ ದೇವರಾಜ್ ಎನ್ನುವವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, 16 ಸಾವಿರಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ