
ಬೆಂಗಳೂರು (ಅ.22): ಅಧಿಕಾರಕ್ಕೆ ಬಂದು ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿ ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಸಿಕ್ಕ ಸಿಕ್ಕ ಕಡೆ ಮೀಸಲಿಟ್ಟ ಅನುದಾನಕ್ಕೆ ಕತ್ತರಿ ಹಾಕುವ ಕೆಲಸ ಮಾಡುತ್ತಿದೆ. ಇದೀಗ ಪೌರಕಾರ್ಮಿಕರ ಸಮಸವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿ ರೂ.ಗೂ ಕತ್ತರಿ ಹಾಕಿ ಬಿಬಿಎಂಪಿ ಪೌರಕಾರ್ಮಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಮವಸ್ತ್ರಕ್ಕೆ ಮೀಸಲಿಟ್ಟಿದ್ದ 15 ಕೋಟಿ ರೂ. ಅನುದಾನ ಕಡಿತ ಮಾಡಿರುವುದಕ್ಕೆ ಬಿಬಿಎಂಪಿ ಪೌರಕಾರ್ಮಿಕರ ಸಂಘ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದೆ.
ಬಿಬಿಎಂಪಿ ಪೌರಕಾರ್ಮಿಕರಿಗೆ ಸಮಸವಸ್ತ್ರ, ವೃತ್ತಿ ಉಪಕರಣಗಳ ಖರೀದಿ ಹಾಗೂ ಇತರೆ ಖರ್ಚು ವೆಚ್ಚಕ್ಕೆಂದು 15 ಕೋಟಿ ರೂಪಾಯಿ ಮೀಸಲಿಡಲಾಗಿತ್ತು. ಈ ಅನುದಾನದಲ್ಲೇ ಪೌರಕಾರ್ಮಿಕರಿಗೆ ಸಮಸವಸ್ತ್ರವನ್ನೆಲ್ಲಾ ಪಾಲಿಕೆ ಇದುವರೆಗೆ ಸರಿದೂಗಿಸಿಕೊಂಡಿತ್ತು. ಅಲ್ಲದೆ ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿಗೂ ಇದೇ ಹಣವನ್ನು ಬಳಸಿಕೊಳ್ಳಲಾಗುತ್ತದೆ. ಹೀಗಿರುವಾಗ ಏಕಾಏಕಿ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ವಾಪಾಸ್ ಪಡೆದಿದೆ. ರಾಜ್ಯ ಸರ್ಕಾರದ ಈ ನಡೆಗೆ ಬಿಬಿಎಂಪಿ ಪೌರ ಕಾರ್ಮಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ವರ್ಷಗಳಿಂದ ಖಾಯಂ ನೇಮಕಾತಿಗೆ ಹೋರಾಡುತ್ತಿರುವ ಪೌರಕಾರ್ಮಿಕರು. ಭರವಸೆ ಕೊಟ್ಟು ಕಾಯಂಗೊಳಿಸದೇ ಯಾಮಾರಿಸುತ್ತಲೆ ಬಂದಿರುವ ಸರ್ಕಾರ. ನಮ್ಮ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಸಮವಸ್ತ್ರ ಹಾಗೂ ಇತರೆ ಉಪಕರಣಗಳ ಖರೀದಿಗೆ ಮೀಸಲಿಟ್ಟಿರುವ ಹಣವನ್ನು ವಾಪಾಸ್ ಕೊಡಬೇಕು. 15 ಕೋಟಿಯಲ್ಲಿ ಒಟ್ಟು 18,500 ಪೌರ ಕಾರ್ಮಿಕರಿಗೆ ಅನುಕೂಲ ಒದಗಿಸಲಾಗುತ್ತಿತ್ತು.ಈ ವರ್ಷದಿಂದ ಅದೂ ಕೂಡ ಕಾರ್ಮಿಕರ ಕೈ ತಪ್ಪಲಿದೆ. ಅನುದಾನ ವಾಪಸ್ ನೀಡದಿದ್ದರೆ ಸರ್ಕಾರದ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದಿರುವ ಬಿಬಿಎಂಪಿ ನೌಕರರು.
ವಿವಿಧ ಬೇಡಿಕೆಗಾಗಿ ಆಗ್ರಹಿಸಿ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಕೆಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಸಿದ್ಧರಾದ ಬಿಬಿಎಂಪಿ ನೌಕರರು. ಪ್ರತಿಭಟನೆ ನಡೆಸುವ ಕುರಿತಾಗಿ ಪೂರ್ವಭಾವಿ ಸಭೆ ಕರೆದಿರುವ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘ. ಇದೇ ಅ.26ರಂದು ಸಭೆ ನಡೆಸಿ ಪ್ರತಿಭಟನಾ ಸ್ವರೂಪ ಮತ್ತು ದಿನಾಂಕ ನಿಗದಿಪಡಿಸಲಿರುವ ಬಿಬಿಎಂಪಿ ನೌಕರರು.
ಬೆಂಗಳೂರು: 29 ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಬಿಬಿಎಂಪಿ ಪ್ರಸ್ತಾವನೆ
ಬಿಬಿಎಂಪಿ ನೌಕರರ ಆರೋಪವೇನು?
ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳ ವೃಂದಕ್ಕೆ ಮುಂಬಡ್ತಿನೀಡಿದ್ದು ಸ್ಥಳ ನಿಯೋಜನೆ ಮಾಡಿಲ್ಲ. ಇದರಿಂದ ಕೆಳ ಹಂತದ ನೌಕರರಿಗೆ ಮುಂಬಡ್ತಿಯಿಂದ ಸರ್ಕಾರ ವಂಚಿಸಿದಂತಾಗಿದೆ. ಅಲ್ಲದೇ ಪಾಲಿಕೆಯಲ್ಲಿ ಸರಿಯಾದ ಸಮಯಕ್ಕೆ ನೇಮಕಾತಿ ನಡೆಯುತ್ತಿಲ್ಲ. 6414ಖಾಲಿ ಹುದ್ದೆಗಳಿದ್ದು ಇದರಿಂದ ನೌಕರರು ಒತ್ತಡದಲ್ಲಿ ಕಾರ್ಯನಿರ್ಬಹಿಸುವಂತಾಗಿದೆ. ಪೌರಕಾರ್ಮಿಕರ ಸಮವಸ್ತ್ರಕ್ಕೆ ಮೀಸಲಿಟ್ಟ 15ಕೋಟಿ ರೂ. ಅನುದಾನಕ್ಕೆ ಕತ್ತರಿಹಾಕಿರುವುದಕ್ಕೆ ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಸಿದ್ಧರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ