
ಬಾಳೆಹೊನ್ನೂರು (ನ.21): ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಕಡ್ಲೆಮಕ್ಕಿಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಯನ್ನು ಶಾಲೆಯಿಂದ ಹೊರಹಾಕಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಕಾಲೇಜಿನ ಪ್ರಾಚಾರ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ.
ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಶಿವಕುಮಾರ್, ಅಯ್ಯಪ್ಪಸ್ವಾಮಿ ವ್ರತಾಚರಣೆಯ ಮಾಲಾಧಾರಣೆ ಮಾಡಿ ಗುರುವಾರ ಕಾಲೇಜಿಗೆ ಆಗಮಿಸಿದ್ದ. ಪ್ರಾಚಾರ್ಯ ಕೃಷ್ಣಮೂರ್ತಿಯವರು, ‘ನೀನು ಕಾಲೇಜಿಗೆ ಬರುವುದಾದರೆ ಶಾಲು ತೆಗೆದು ತರಗತಿಗೆ ಬಾ. ನಿಮ್ಮಂತಹ ವಿದ್ಯಾರ್ಥಿಗಳೇ ಕಾಲೇಜಿನಲ್ಲಿ ಜಾತಿ, ಧರ್ಮ ಎಂದು ಹುಟ್ಟು ಹಾಕುವುದು ಎಂದು ಗದರಿಸಿದರು. ಅಲ್ಲದೆ, ಹೀಗೆಯೇ ಬಂದರೆ, ನಿನ್ನನ್ನು ಕಾಲೇಜಿನಿಂದ ಡಿಬಾರ್ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿ, ಕಾಲೇಜಿನ ಕಂಪೌಂಡ್ ಒಳಗೆ ಸಹ ನಿಲ್ಲಲು ಅವಕಾಶ ನೀಡದೆ ಹೊರಹಾಕಿದ್ದಾರೆ’ ಎಂದು ವಿದ್ಯಾರ್ಥಿ ಶಿವಕುಮಾರ್ ಆರೋಪಿಸಿದ್ದಾರೆ.
ಪ್ರಾಚಾರ್ಯ ಕೃಷ್ಣಮೂರ್ತಿ ಪ್ರತಿಕ್ರಿಯಿಸಿ, ‘ಕಾಲೇಜಿನಲ್ಲಿ ಸಮವಸ್ತ್ರದ ಸಂಹಿತೆಯಿದೆ. ಈ ಹಿಂದೆ ಹಿಜಾಬ್ ಮತ್ತು ಕೇಸರಿ ಶಾಲಿನ ಕುರಿತು ಗೊಂದಲ ನಡೆದಿತ್ತು, ಅದಕ್ಕಾಗಿ ನಾನು ಕಾಲೇಜು ವೇಳೆಯಲ್ಲಿ ವಿದ್ಯಾರ್ಥಿಯ ಹೆಗಲ ಮೇಲಿದ್ದ ಕಪ್ಪು ಶಾಲನ್ನು ಮಾತ್ರ ತೆಗೆದು, ಬ್ಯಾಗಿನೊಳಗೆ ಇಡುವಂತೆ ಸೂಚಿಸಿದ್ದೆ. ವಿದ್ಯಾರ್ಥಿಯನ್ನು ತರಗತಿಯಿಂದ ಹೊರ ಹಾಕಿಲ್ಲ ಹಾಗೂ ಅಯ್ಯಪ್ಪಸ್ವಾಮಿ ಮಾಲೆಯನ್ನು ತೆಗೆಯಲು ಸಹ ಹೇಳಿಲ್ಲ. ಆತನ ಆರೋಪ ಸುಳ್ಳು’ ಎಂದಿದ್ದಾರೆ.
‘ವಿಷಯ ತಿಳಿದು, ನನ್ನ ಪರಿಚಯಸ್ಥರು ಕಾಲೇಜು ಆಡಳಿತ ಮಂಡಳಿಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ, ಕಾಲೇಜಿಗೆ ಪೊಲೀಸರು ಬಂದು ಪ್ರಾಚಾರ್ಯರನ್ನು ವಿಚಾರಿಸಿದಾಗ, ಶಾಲನ್ನು ತೆಗೆಯಲು ನಾನು ಹೇಳಿಲ್ಲ. ಸೊಂಟಕ್ಕೆ ಕಟ್ಟಿಕೊಳ್ಳಲು ಹೇಳಿದ್ದೇನೆ ಅಷ್ಟೇ ಎಂದು ವರಸೆ ಬದಲಿಸಿದ್ದಾರೆ. ಬಳಿಕ, ನನ್ನನ್ನು ತರಗತಿಗೆ ಸೇರಿಸಿದ್ದಾರೆ’ ಎಂದು ವಿದ್ಯಾರ್ಥಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ