
ಕಲಬುರಗಿ (ಜ.19): ರಾಮಮಂದಿರ ನಿರ್ಮಾಣಕ್ಕಾಗಿ ನಾನು 2 ಕೋಟಿ ರೂಪಾಯಿ ಸಂಗ್ರಹಿಸಿ ಕೊಟ್ಟಿರುವೆ ಆದರೆ ನನಗೇ ಅಯೋದ್ಯೆಗೆ ಆಹ್ವಾನ ನೀಡಿಲ್ಲ. ನಾನು ರಾಮಮಂದಿರ ಉದ್ಘಾಟನೆಗೆ ಹೋಗಲ್ಲ ಎಂದು ಎಂಎಲ್ಸಿ ಜಗದೀಶ್ ಶೆಟ್ಟರ್ ಬಿಜೆಪಿ ವಿರುದ್ಧ ಕಿಡಿಕಾರಿದರು.
ಇಂದು ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಮಮಂದಿರ ವಿಚಾರವಾಗಿ ಯಾರೂ ರಾಜಕೀಯ ಮಾಡಬಾರದು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದು ಸಂತೋಷವಾಗಿದೆ. ಆದರೆ ಜನೆವರಿ 22 ರಂದು ನಡೆಯುವ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನನಗೆ ಆಗಿರುವ ಅಪಮಾನವನ್ನ ಇನ್ನೂ ಮರೆತಿಲ್ಲ: ಬಿಜೆಪಿ ಸೇರ್ಪಡೆ ವದಂತಿ ಕುರಿತು ಶೆಟ್ಟರ್ ಸ್ಪಷ್ಟನೆ!
ನಾನು ರಾಮಭಕ್ತ:
ರಾಮಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹಿಸಲು ಹೇಳಿದಾಗ ನಾನು ಎರಡು ಕೋಟಿ ರೂಪಾಯಿಯಷ್ಟು ಹಣವನ್ನು ಸಂಗ್ರಹಿಸಿ ಕೊಟ್ಟಿದ್ದೇನೆ. ಆದರೂ ನನಗೆ ಆಹ್ವಾನ ನೀಡಿಲ್ಲ. ಹೀಗಾಗಿ ಬಿಜೆಪಿ ಕಾರ್ಯಕ್ರಮ ಮುಗಿದನಂತರವೇ ನಾನು ರಾಮನ ದರ್ಶನ ಪಡೆಯುತ್ತೇನೆ ಎಂದರು ಮುಂದುವರಿದು, ರಾಮ ಮಂದಿರ ಅನ್ನುವುದು ಧಾರ್ಮಿಕತೆ, ಧರ್ಮದ ಸಂಕೇತ, ಧರ್ಮ ಜಾಗೃತಿ ಮಾಡಲು, ದೇಶವನ್ನು ಒಂದು ಮಾಡಲು ಇರುವಂಥದ್ದು, ಹೀಗಾಗಿ ರಾಮ ಮಂದಿರದ ವಿಚಾರದಲ್ಲಿ ರಾಜಕಾರಣ ಮಾಡಬಾರದು. ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಬರಬಾರದು. ಆಹ್ವಾನ ಬಂದಿರುವವರು ಅಯೋಧ್ಯೆಗೆ ಹೋಗುವುದು ಬಿಡುವುದು ಅವರವರ ಇಷ್ಟ. ಆದರೆ ನನಗೆ ವೈಯಕ್ತಿಕವಾಗಿ ಆಹ್ವಾನ ಬಂದಿಲ್ಲ ಎಂದರು.
ಬಿಜೆಪಿಯಿಂದ ಕ್ರಿಮಿನಲ್ ಆರೋಪಿಗಳಿಗೆ ರಕ್ಷಣೆ ಕೊಟ್ಟು ಬೆಳೆಸುವ ಪ್ರಯತ್ನ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ಹಿಂದು ವಿರೋಧಿ ಅಲ್ಲ:
ಕಾಂಗ್ರೆಸ್ ಹಿಂದೂ ವಿರೋಧಿ ಅಲ್ಲ, ಹಿಂದೂ ವಿರೋಧಿ ಇದ್ದರೆ ರಾಜ್ಯದಲ್ಲಿ 135 ಸ್ಥಾನ ಹೇಗೆ ಬರುತ್ತಿತ್ತು? ಎಂದು ಪ್ರಶ್ನಿಸಿದರು. ಇದೇ ವೇಳೆ ಮತ್ತೆ ಬಿಜೆಪಿ ಮರಳುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಶೆಟ್ಟರ್, ಬಿಜೆಪಿಯಿಂದ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ನಾನು ವಾಪಸ್ ಬಿಜೆಪಿಗೆ ಹೋಗುವ ಪ್ರಶ್ನೆಯೆ ಇಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ