
ಬೆಂಗಳೂರು (ಮೇ.3): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ್ದ ಕೋಟ್ಯಂತರ ರು. ಮೌಲ್ಯದ 2.35 ಎಕರೆ ಭೂಮಿಯನ್ನು ನಕಲಿ ದಾಖಲೆ ಸೃಷ್ಟಿಸಿ ಯತ್ನಿಸಿದ ಆರೋಪದ ಮೇರೆಗೆ ಮಾಜಿ ಕೆಎಎಸ್ ಅಧಿಕಾರಿ ಮತ್ತು ಬಿಜೆಪಿ ಮುಖಂಡ ಎಲ್.ಸಿ.ನಾಗರಾಜ್ ಸೇರಿದಂತೆ ನಾಲ್ವರ ವಿರುದ್ಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜೆ.ಪಿ.ನಗರದ 2ನೇ ಹಂತದಲ್ಲಿರುವ ಜಮೀನು ಕಬ್ಜಾಕ್ಕೆ ಯತ್ನವಾಗಿದ್ದು, ಈ ಸಂಬಂಧ ಬಿಡಿಎ ವಿಚಕ್ಷಣಾ ದಳದ ಡಿವೈಎಸ್ಪಿ ಬಿ.ಹನುಮಂತರಾಯ ಅವರು ನೀಡಿದ ದೂರಿನ ಅನ್ವಯ ಸಿ.ಲಕ್ಷ್ಮೀನಾರಾಯಣ, ಮಾರುತಿ ಕುಮಾರ್, ಎಚ್.ಆರ್ ಪ್ರದೀಪ್ ಹಾಗೂ ಎಲ್.ಸಿ ನಾಗರಾಜು ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜೆ.ಪಿ ನಗರ 8ನೇ ಹಂತದ ಬಡಾವಣೆ ಅಭಿವೃದ್ಧಿಗೆ ಕೊತ್ತನೂರು ಸರ್ವೇ ನಂಬರ್ 176/1ರಲ್ಲಿನ 2 ಎಕರೆ 13 ಗುಂಟೆ ಜಮೀನು ಬಿಡಿಎ ಸ್ವಾಧೀನಡಿಸಿಕೊಂಡಿತ್ತು. ಅಲ್ಲದೆ ಈ ಜಮೀನು ಮೂಲಕ ಮಾಲೀಕರಾದ ಮೇರಿಯಮ್ಮ ಅವರಿಗೆ ಭೂ ಪರಿಹಾರ ಸಹ ಸಂದಾಯವಾಗಿತ್ತು. ಆದರೆ 2008ರಲ್ಲಿ ಮೇರಿಯಮ್ಮ ಗಂಡ ಫಾಲ್ಕನ್ ಅವರು ಮಾರುತಿಕುಮಾರ್ ಅವರಿಗೆ ದಾನ ನೀಡಿದಂತೆ ನಕಲಿ ದಸ್ತಾವೇಜು ಸೃಷ್ಟಿಸಿದ್ದರು. ಬಳಿಕ ಅಂದು ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಆಗಿದ್ದ ಎಲ್.ಸಿ ನಾಗರಾಜು ಅವರ ಮುಂದೆ ದಾವೆ ಸಲ್ಲಿಸಿ ತಮ್ಮ ಪರವಾಗಿ ಆದೇಶವನ್ನು ಮಾರುತಿ ಪಡೆದುಕೊಂಡಿದ್ದರು. ಈ ಮೂಲಕ ಜಮೀನಿಗೆ ದಾಖಲೆ ಸೃಷ್ಟಿಸಿಕೊಂಡು ಬಿಡಿಎ ಭೂಮಿ ಕಬಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ಈ ವಂಚನೆಯಲ್ಲಿ ಸಿ.ಲಕ್ಷ್ಮೀನಾರಾಯಣ, ಮಾರುತಿಕುಮಾರ್, ಎಚ್.ಆರ್ ಪ್ರದೀಪ್ ಭಾಗಿಯಾಗಿದ್ದಾರೆ. ವಂಚಕರು ಸಲ್ಲಿಸಿದ್ದ ನಕಲಿ ದಾಖಲೆ ಪರಿಶೀಲಿಸದೆ ಉಪವಿಭಾಗಾಧಿಕಾರಿ ಆಗಿದ್ದ ನಾಗರಾಜು ಆದೇಶ ಹೊರಡಿಸಿ ಕರ್ತವ್ಯಲೋಪ ಎಸಗಿದ್ದಾರೆ. ಹೀಗಾಗಿ,ನಾಲ್ವರ ವಿರುದ್ಧವೂ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕೆಂದು ಡಿವೈಎಸ್ಪಿ ಹನುಮಂತರಾಯ ಆಗ್ರಹಿಸಿದ್ದಾರೆ.
ಐಎಎಂ ಬಹುಕೋಟಿ ಹಗರಣದಲ್ಲಿ ನಾಗರಾಜ್ ಸಂಕಷ್ಟಕ್ಕೆ ತುತ್ತಾಗಿದ್ದರು. ಈ ಪ್ರಕರಣದ ಬಳಿಕ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ಅವರು, 2023ರಲ್ಲಿ ಮಧುಗಿರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಥಿಸಿ ಪರಾಜಿತರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ