
ಬೆಂಗಳೂರು/ಯಾದಗಿರಿ (ಡಿ.24): ನೀರಾವರಿ ಇಲಾಖೆಯ ನೇಮಕಾತಿ ವೇಳೆ ತಪ್ಪು ಮಾಹಿತಿ ನೀಡಿದ ಅಭ್ಯರ್ಥಿಗಳ ದಾಖಲೆಗಳ ನೈಜತೆಯನ್ನು ಪರಿಶೀಲಿಸಿ, ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳುವುದಾಗಿ ಜಲಸಂಪನ್ಮೂಲ ಇಲಾಖೆ ತಿಳಿಸಿದೆ. ಅಲ್ಲದೆ, ನಕಲಿ ಅಥವಾ ತಪ್ಪು ಮಾಹಿತಿ ನೀಡಿರುವ ಅಭ್ಯರ್ಥಿಗಳ ಅರ್ಜಿಯನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.
ಪಿಎಸೈ ಆಯ್ತು, ಇದೀಗ ನೀರಾವರಿ ಇಲಾಖೆ ನೇಮಕಾತಿಯಲ್ಲೂ ಅಕ್ರಮ ಆರೋಪ ಕೇಳಿ ಬರುತ್ತಿದ್ದು, ಜಲಸಂಪನ್ಮೂಲ ಇಲಾಖೆಯ ಗ್ರೂಪ್-ಸಿ ವೃಂದದ ಪರಿಶಿಷ್ಟಜಾತಿ ಬ್ಯಾಕ್ಲಾಗ್ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಯ ಅರ್ಹತಾ ಪಟ್ಟಿಯಲ್ಲಿ ಅನರ್ಹರಿಗೆ ಆದ್ಯತೆ ನೀಡಲಾಗಿದೆ. ನೇಮಕಾತಿಯಲ್ಲಿ ಭಾರಿ ಅಕ್ರಮದ ಶಂಕೆಯಿದ್ದು, ಅಭ್ಯರ್ಥಿಗಳು ಪಿಯುಸಿಯಲ್ಲಿ ಪಡೆದ ಗರಿಷ್ಠ ಅಂಕಗಳನ್ನೇ ತಿರುಚಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು.
ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ವಿರುದ್ದ ಹಾಸನ ಡೀಸಿಗೆ ಸಂಸದೆ ಮನೇಕಾ ಗಾಂಧಿ ದೂರು
ಈ ಕುರಿತು, ಡಿ.18ರಂದು ‘ಕನ್ನಡಪ್ರಭ’ ವರದಿ ಪ್ರಕಟಿಸಿತ್ತು. ಕೆಲವು ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಪಡೆದ ಗರಿಷ್ಠ ಅಂಕಗಳನ್ನು ತಿದ್ದಿ ಮೆರಿಟ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವುದು ಕಂಡು ಬಂದಿದೆ. ಜೊತೆಗೆ, ಪರಿಶಿಷ್ಟಜಾತಿಗೆ ಮೀಸಲಾದ ಈ ನೇಮಕಾತಿಯಲ್ಲಿ ಪರಿಶಿಷ್ಟಜಾತಿಯೇತರರ ಹೆಸರೂ ಪರಿಶೀಲನಾ ಪಟ್ಟಿಯಲ್ಲಿದೆ. ಒಬ್ಬರದೇ ಹೆಸರುಗಳು ಪಟ್ಟಿಯಲ್ಲಿ ಮೂರ್ನಾಲ್ಕು ಬಾರಿ ಇವೆ ಎಂದು ವರದಿಯಲ್ಲಿ ಪ್ರಕಟವಾಗಿತ್ತು.
ಈ ಹಿನ್ನೆಲೆಯಲ್ಲಿ ಇಲಾಖೆಯ ಮುಖ್ಯ ಎಂಜಿನಿಯರ್ ಅವರು ಸ್ಪಷ್ಟನೆ ನೀಡಿದ್ದು, ‘ಸೆಪ್ಟೆಂಬರ್ 26ರಿಂದ ಅಕ್ಟೋಬರ್ 25ರವರೆಗೆ ಎನ್.ಐ.ಸಿ ತಂತ್ರಾಂಶ ವ್ಯವಸ್ಥೆಯ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಯಾವುದೇ ಅಂಕಪಟ್ಟಿ/ಪ್ರಮಾಣಪತ್ರಗಳನ್ನು ಲಗತ್ತಿಸಲು ಅವಕಾಶ ಕಲ್ಪಿಸಿರಲಿಲ್ಲ.
ಹೀಗಾಗಿ, ಅಭ್ಯರ್ಥಿಗಳು ಸಲ್ಲಿಸಿರುವ ಮಾಹಿತಿ, ಕೇವಲ ಅಂಕಿ-ಅಂಶಗಳ ಆಧಾರಿತವಾಗಿದೆ. ಡಿ.5ರಂದು ಜಲಸಂಪನ್ಮೂಲ ಇಲಾಖೆಯ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಪರಿಶೀಲನಾ ಪಟ್ಟಿ, ಅಂಕಗಳು ಮತ್ತು ಇತರ ಮೂಲ ದಾಖಲೆಗಳನ್ನು ಪರಿಶೀಲಿಸಲು ಕರೆದಿರುವ ಪಟ್ಟಿಯೇ ಹೊರತು ಆಯ್ಕೆ ಪಟ್ಟಿಅಲ್ಲ. ಡಿ.14 ಹಾಗೂ ಡಿ.15ರಂದು ಮೂಲ ದಾಖಲಾತಿಗಳನ್ನು ಪರಿಶೀಲನೆಗಾಗಿ ಸ್ವೀಕರಿಸಿದ್ದು, ನಕಲಿ, ತಪ್ಪು ಮಾಹಿತಿ ನೀಡಿರುವ ಅಭ್ಯರ್ಥಿಗಳ ಅರ್ಜಿಗಳನ್ನು ತಿರಸ್ಕರಿಸಲು ಕ್ರಮ ಕೈಗೊಳ್ಳಲಾಗಿದೆ.
ಕೇಂದ್ರದಿಂದ 28 ತಿಂಗಳು ಉಚಿತ ಆಹಾರ ಧಾನ್ಯ ವಿತರಣೆ: ಸಚಿವೆ ಶೋಭಾ ಕರಂದ್ಲಾಜೆ
ಜೊತೆಗೆ, ಅಭ್ಯರ್ಥಿಗಳ ಹೆಸರುಗಳು ಪುನರಾವರ್ತನೆಯಾಗಿದ್ದರೆ, ಸರಿಯಾದ ಅರ್ಜಿಯ ನೈಜತೆಯನ್ನು ದೃಢಪಡಿಸಿಕೊಳ್ಳಲಾಗುವುದು. ಅಭ್ಯರ್ಥಿಯ ಲಿಖಿತ ಒಪ್ಪಿಗೆಯೊಂದಿಗೆ ನೈಜ ಅರ್ಜಿಯನ್ನು ಉಳಿಸಿಕೊಂಡು, ಉಳಿದ ಹೆಸರುಗಳನ್ನು ತಿರಸ್ಕರಿಸಲಾಗುವುದು. ಅಭ್ಯರ್ಥಿಗಳು ಒದಗಿಸಿರುವ ಅಂಕಪಟ್ಟಿಗಳು/ಪ್ರಮಾಣ ಪತ್ರಗಳನ್ನು ಸಂಬಂಧಿಸಿದ ಮಂಡಳಿಗಳಿಗೆ/ ಇಲಾಖೆಗಳಿಗೆ ಆನ್ಲೈನ್ನಲ್ಲಿ ಸಲ್ಲಿಸಿ, ನೈಜತೆಯನ್ನು ಖಚಿತಪಡಿಸಿಕೊಂಡು, ತರುವಾಯ ನಿಯಮಾನುಸಾರ ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಿಸಲಾಗುವುದು’ ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ