Latest Videos

ನದಿ ಜೋಡಣೆ: ರಾಜ್ಯದ ಅಹವಾಲು ಕೇಳಲು ಶಾ ಸೂಚನೆ, ಸಿಎಂ ಬೊಮ್ಮಾಯಿ

By Kannadaprabha NewsFirst Published Nov 16, 2021, 6:13 AM IST
Highlights

*   ಕೇಂದ್ರ ಜಲಶಕ್ತಿ ಸಚಿವಾಲಯಕ್ಕೆ ಕೇಂದ್ರ ಸಚಿವರಿಂದ ಸೂಚನೆ
*   ನದಿ ಜೋಡಣೆ ಡಿಪಿಆರ್‌ಗೂ ಮೊದಲು ರಾಜ್ಯಗಳಿಗೆ ನೀರು ಹಂಚಿಕೆ ಆಗಬೇಕೆಂದ ಕರ್ನಾಟಕ
*   ಕರ್ನಾಟಕದ ಅಹವಾಲಿಗೆ ಸಚಿವ ಅಮಿತ್‌ ಶಾ ಸಹಮತ
 

ಬೆಂಗಳೂರು(ನ.16):  ನದಿ ಜೋಡಣೆ(Rivers Interlinking)  ಸಂಬಂಧ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಸಿದ್ಧಪಡಿಸುವ ಮೊದಲು ರಾಜ್ಯಗಳ ಪಾಲಿನ ನೀರಿನ ಹಂಚಿಕೆ ಆಗಬೇಕು ಎಂಬ ಕರ್ನಾಟಕದ ಅಹವಾಲು ಪರಿಗಣಿಸಿ ಮುಂದುವರಿಯುವಂತೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಅವರು ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಷಯ ತಿಳಿಸಿದ್ದಾರೆ.

ಸೋಮವಾರ ತಿರುಪತಿ(Tirupati) ಪ್ರವಾಸ ಮುಗಿಸಿ ನಗರಕ್ಕೆ ವಾಪಸಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಭಾನುವಾರ ತಿರುಪತಿಯಲ್ಲಿ ಅಂತಾರಾಜ್ಯದ ದಕ್ಷಿಣ ಕ್ಷೇತ್ರಿಯ ಮುಖ್ಯಮಂತ್ರಿಗಳ ಸಭೆ ಯಶಸ್ವಿಯಾಗಿ ನಡೆದಿದೆ. ಸಭೆಯಲ್ಲಿ ಕೆಲವು ಅಂತಾರಾಜ್ಯಗಳ ನದಿ ವಿಷಯ ಸಂಬಂಧ ಚರ್ಚೆಗಳು ನಡೆದಿವೆ. ಗೋದಾವರಿ, ಕೃಷ್ಣಾ, ಕಾವೇರಿ, ಪಾಲಾರ್‌ ನದಿಗಳ ಜೋಡಣೆ ಬಗ್ಗೆ ರಾಜ್ಯದ ಆಕ್ಷೇಪಣೆ ಕುರಿತು ಸಮಾಲೋಚನೆ ನಡೆಸಲಾಯಿತು. ಡಿಪಿಆರ್‌ಗಿಂತ ಮೊದಲು ರಾಜ್ಯಗಳ ನೀರಿನ ಪಾಲು ಹಂಚಿಕೆಯಾಗಬೇಕು ಎಂದು ಒತ್ತಾಯಿಸಲಾಗಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಂತಾರಾಜ್ಯ ನದಿ ಜೋಡಣೆ ವಿಚಾರವಾಗಿ ಕರ್ನಾಟಕದ ಅಹವಾಲು ಸ್ವೀಕರಿಸಿ ಮುಂದುವರಿಯುವಂತೆ ಕೇಂದ್ರ ಜಲಶಕ್ತಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು ಎಂದು ತಿಳಿಸಿದರು.

ದಕ್ಷಿಣ ರಾಜ್ಯಗಳ ಸಭೆ ಯಶಸ್ವಿ : 51 ಅಂತಾರಾಜ್ಯ ಸಮಸ್ಯೆಗಳ ಪೈಕಿ 40 ಇತ್ಯರ್ಥ!

ಕೃಷ್ಣಾ ಐತೀರ್ಪಿನ ಅಧಿಸೂಚನೆ:

ಕೃಷ್ಣಾ ನದಿ(Krishna River) ನೀರಿನ ಹಂಚಿಕೆ ವಿಚಾರವಾಗಿ ಚರ್ಚೆ ನಡೆಯಿತು. ಕೃಷ್ಣಾ ಜಲವಿವಾದ(Water Dispute) ನ್ಯಾಯಾಧಿಕರಣ-2ರ ತೀರ್ಪಿನ ಅಧಿಸೂಚನೆಯಾಗಬೇಕು. ಅದಷ್ಟು ಬೇಗ ಕೇಂದ್ರ ಸರ್ಕಾರವು(Central Government) ಅಧಿಸೂಚನೆ ಹೊರಡಿಸಬೇಕು ಎಂದು ಒತ್ತಾಯಿಸಿದ್ದೇವೆ. ರಾಜ್ಯದ ನೀರಾವರಿ ಯೋಜನೆಗಳ ಕುರಿತು ಸಭೆಯಲ್ಲಿ ಗಟ್ಟಿಯಾಗಿ ನಮ್ಮ ವಿಚಾರಗಳನ್ನು ಮಂಡಿಸಿದ್ದೇವೆ. ಇದಲ್ಲದೆ, ಮೆಟ್ರೋ ಯೊಜನೆಗೆ ರೈಲ್ವೆ ಭೂಮಿ ನೀಡುವ ಕುರಿತು ಸಹ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಮೀನುಗಾರಿಕೆಯಲ್ಲಿ ಆ್ಯಂಟಿ ಬಯೋಟಿಕ್‌ಗಳ ಬಳಕೆಯಿಂದ ಮೀನು ರಫ್ತಿಗೆ ಅಡಚಣೆಯಾಗುತ್ತಿದೆ. ಈ ಕುರಿತು ಮೀನುಗಾರರು ಮುನ್ನೆಚ್ಚರಿಕೆ ವಹಿಸುವ ಕುರಿತು, ಪೋಕ್ಸೋ ಪ್ರಕರಣಗಳನ್ನು ಶೀಘ್ರ ಇತ್ಯರ್ಥಪಡಿಸಲು, ನಿಗದಿತ ಅವಧಿಯೊಳಗೆ ಆರೋಪಪಟ್ಟಿಸಲ್ಲಿಕೆಗೆ ಅಮಿತ್‌ ಶಾ ಅವರು ಸೂಚಿಸಿದ್ದಾರೆ ಎಂದರು.

ಆದಷ್ಟು ಬೇಗ ಮೇಕೆದಾಟು ಇತ್ಯರ್ಥ:

ಮೇಕೆದಾಟು(Mekedatu) ಯೋಜನೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ, ತಮಿಳುನಾಡು ಮುಖ್ಯಮಂತ್ರಿ ಸಭೆಗೆ ಗೈರಾಗಿದ್ದರಿಂದ ಚರ್ಚೆ ನಡೆಸಲು ಸಾಧ್ಯವಾಗಿಲ್ಲ. ಕೇಂದ್ರ ಜಲಶಕ್ತಿ ಸಚಿವರು ಮತ್ತು ಸಚಿವಾಲಯಕ್ಕೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ತೊಡಕು ನಿವಾರಣೆ ಮಾಡುವಂತೆ ಮನವಿ ಮಾಡಲಾಗಿದೆ. ದೆಹಲಿಗೆ ಹೋಗಿದ್ದಾಗಲೂ ಕಾನೂನು ತಜ್ಞರ ಜತೆ ಈ ವಿಷಯದ ಕುರಿತು ಚರ್ಚೆ ನಡೆಸಲಾಗಿದೆ. ಆದಷ್ಟುಬೇಗ ಮೇಕೆದಾಟು ವಿಚಾರ ಬಗೆಹರಿಯಲಿದೆ. ರಾಜ್ಯದ ಎಲ್ಲಾ ಯೋಜನೆಗಳಿಗೂ ತಮಿಳುನಾಡು ಮೊದಲಿಂದಲೂ ವಿರೋಧಿಸುತ್ತಾ ಬಂದಿದೆ. ಈಗ ತಮಿಳುನಾಡು ಕೆಳಹಂತದಲ್ಲಿ ಮಾಡುತ್ತಿರುವ ಯೋಜನೆಗಳಿಗೆ ನಾವು ಆಕ್ಷೇಪ ಮಾಡಿದ್ದೇವೆ. ನಮ್ಮ ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪಿಸಿದೆ. ಇದಕ್ಕೆ ಒಂದು ನ್ಯಾಯ ಸಮ್ಮತ ತೀರ್ಮಾನವಾಗಬೇಕಿದೆ. ಆದಷ್ಟುಬೇಗ ಆ ಕೆಲಸವಾಗುವ ಭರವಸೆ ಇದೆ ಎಂದು ಬೊಮ್ಮಾಯಿ ತಿಳಿಸಿದರು.

ಅಕ್ರಮ ಜಲಯೋಜನೆಗಳಿಗೆ ಬೊಮ್ಮಾಯಿ ಆಕ್ಷೇಪ

ನಾವು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡಿದರೆ ಹಲವು ವರ್ಷಗಳಿಂದ ಬಾಕಿ ಉಳಿದಿರುವ ಹಲವಾರು ಸಮಸ್ಯೆಗಳನ್ನು ಬಗೆ ಹರಿಸಿಕೊಳ್ಳಬಹುದು. ದಕ್ಷಿಣ ಭಾರತದ(South India) ರಾಜ್ಯಗಳೆಲ್ಲವೂ ಪ್ರಾಕೃತಿಕವಾಗಿ ಸಂಪರ್ಕಿತವಾಗಿರುವುದರಿಂದ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅನಿವಾರ್ಯ. ದಕ್ಷಿಣದ ರಾಜ್ಯಗಳು ಸ್ವತಂತ್ರವಾಗಿ ಅಲ್ಲದೆ, ಪರಸ್ಪರ ಅವಲಂಬಿತರಾಗಿ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಪರಿಸ್ಥಿತಿ ಇದೆ. ರಾಷ್ಟ್ರದ ಒಳಿತಿಗಾಗಿ ಒಮ್ಮತದಿಂದ ಕೆಲಸ ಮಾಡಿದಾಗ ಭಾರತದ ಅಭಿವೃದ್ಧಿ ಸಾಧ್ಯ. ಪ್ರಧಾನ ಮಂತ್ರಿಗಳ ಸಹಕಾರಿ ಸಂಯುಕ್ತ ತತ್ವ ನಮ್ಮ ಮೂಲಮಂತ್ರವಾಗಬೇಕು. ಒಟ್ಟಾಗಿ ಕೆಲಸ ಮಾಡುವ ಮೂಲಕ ಇದನ್ನು ಸಂಪೂರ್ಣವಾಗಿ ಅನುಷ್ಠಾನಕ್ಕೆ ತರುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ಹೇಳಿದ ಸಿಎಂ

ಹಂಚಿಕೆಯ ಹೊರತಾಗಿ ಕೃಷ್ಣಾ ನೀರಿಗೆ ಸಂಬಂಧಿಸಿದಂತೆ ಆಂಧ್ರ ಪ್ರದೇಶ ಹಾಗೂ ತೆಲಂಗಾಣ(Telangana) ರಾಜ್ಯಗಳ ಯಾವುದೇ ಯೋಜನೆಗಳಿಗೆ ಅನುಮತಿಯಿಲ್ಲ. ಕೃಷ್ಣಾ ನದಿ(Krishna River) ಮೂಲಕ ಶ್ರೀಶೈಲಂ ಜಲಾಶಯದಲ್ಲಿ ಅಪಾರ ಮೊತ್ತದ ಹೆಚ್ಚುವರಿ ನೀರನ್ನು ಬಳಸಿಕೊಂಡು ಪಲಮುರು ರಂಗಾರೆಡ್ಡಿ ಮತ್ತು ನಕ್ಕಲಗಂಡಿಯಲ್ಲಿ ಏತನೀರಾವರಿ ಯೋಜನೆಗಳನ್ನು ಕೈಗೊಳ್ಳಲು ತೆಲಂಗಾಣ ಅಥವಾ ಅಪೆಕ್ಸ್ ಮಂಡಳಿಗೆ ಅಧಿಕಾರವಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದ ಸಿಎಂ ಬೊಮ್ಮಾಯಿ
 

click me!