ಮಾಲ್‌ಗಳ ವ್ಯಾಪಾರಿಗಳಿಗೆ ಬಾಡಿಗೆ ವಿನಾಯಿತಿ

By Kannadaprabha NewsFirst Published Apr 19, 2020, 9:08 AM IST
Highlights

ಮಾಲ್‌ಗಳ ವ್ಯಾಪಾರಿಗಳಿಗೆ ಬಾಡಿಗೆ ವಿನಾಯಿತಿ| ಬಾಡಿಗೆದಾರರನ್ನು ಉಳಿಸಿಕೊಳ್ಳಲು ಯೋಜನೆ| 1 ತಿಂಗಳ ಬಾಡಿಗೆ ವಿನಾಯಿತಿಗೆ ಪ್ರಮುಖ ಮಾಲ್‌ಗಳ ಮಾಲಿಕರ ನಿರ್ಧಾರ

ಬೆಂಗಳೂರು(ಏ.19): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನಗರದ ಬಹುತೇಕ ಶಾಪಿಂಗ್‌ ಮಾಲ್‌ಗಳ ಮಾಲಿಕರು ತನ್ನ ಬಾಡಿಗೆದಾರರನ್ನು ಉಳಿಸಿಕೊಳ್ಳಲು ಬಾಡಿಗೆ ವಿನಾಯಿತಿ ನೀಡಲು ಮುಂದಾಗಿದ್ದಾರೆ.

ಕೊರೋನಾ ಸೋಂಕು ಹರಡುವ ಭೀತಿಯಿಂದ ಕಳೆದೊಂದು ತಿಂಗಳಿನಿಂದ ನಗರದ ಎಲ್ಲ ಶಾಪಿಂಗ್‌ ಮಾಲ್‌ಗಳು ಸರ್ಕಾರದ ಸೂಚನೆಯಂತೆ ಬಂದ್‌ ಆಗಿವೆ. ಒಂದು ನಯಾ ಪೈಸೆಯ ವ್ಯಾಪಾರವಾಗಿಲ್ಲ. ಹೀಗಾಗಿ, ಬಾಡಿಗೆ ನೀಡುವುದಕ್ಕೆ ಸಾಧ್ಯವಿಲ್ಲ ಎಂಬ ಮಾತನ್ನು ಅನೇಕ ವ್ಯಾಪಾರಿಗಳು ಹೇಳಿದ್ದಾರೆ.

ಮಗು ಮೃತಪಟ್ಟ ಮರುದಿನವೇ ಕೊರೋನಾ ಡ್ಯೂಟಿಗೆ ಹಾಜರ್‌: ಪುತ್ರ ಶೋಕದ ಮಧ್ಯೆಯೂ ಕೆಲಸ..!

ಹೀಗಾಗಿ, ಒಂದು ತಿಂಗಳ ಬಾಡಿಗೆ ವಿನಾಯಿತಿ ನೀಡುವುದಕ್ಕೆ ನಗರದ ಪ್ರಮುಖ ಮಾಲ್‌ಗಳ ಮಾಲಿಕರು ತೀರ್ಮಾನಿಸಿದ್ದಾರೆ. ಇನ್ನು ಕೆಲವು ಮಾಲ್‌ ಮಾಲಿಕರು ಬಾಡಿಗೆ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಾಡಿಗೆ ಕೇಳಿದರೆ ಮಳಿಗೆ ಖಾಲಿ:

ಈಗಾಗಲೇ ಒಂದು ತಿಂಗಳಿಯಿಂದ ವ್ಯಾಪಾರ ವಹಿವಾಟು ಇಲ್ಲದೇ ಸಂಕಷ್ಟದಲ್ಲಿರುವ ಮಾಲ್‌ಗಳ ಮಳಿಗೆದಾರರಿಗೆ ಕೆಲವು ಮಾಲ್‌ಗಳ ಮಾಲಿಕರು ಬಾಡಿಗೆ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ, ಬಾಡಿಗೆದಾರರು ಮಾತ್ರ ಬಾಡಿಗೆ ಕೇಳಿದರೆ ನಾವು ಮಳಿಗೆ ಖಾಲಿ ಮಾಡಿಕೊಂಡು ಹೋಗುತ್ತೇವೆ ಎಂದು ಹೇಳಿದ್ದಾರೆ.

ಈಗಿರುವ ಪರಿಸ್ಥಿತಿಯಲ್ಲಿ ಹೊಸದಾಗಿ ಬಾಡಿಗೆದಾರರು ಬರುವುದು ಅನುಮಾನ ಇರುವುದರಿಂದ ಮಾಲ್‌ಗಳ ಮಾಲಿಕರು ಒಂದು ತಿಂಗಳ ಬಾಡಿಗೆ ವಿನಾಯಿತಿ ನೀಡಿ ತನ್ನ ಬಾಡಿಗೆದಾರರನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗಿದ್ದಾರೆ.

ನಿರ್ವಹಣಾ ವೆಚ್ಚ ಕೊಡಿ ಸಾಕು:

ವ್ಯಾಪಾರಿಗಳಿಗೆ ಬಾಡಿಗೆ ವಿನಾಯಿತಿ ನೀಡಲು ಮುಂದಾಗಿರುವ ಮಾಲ್‌ ಮಾಲಿಕರು ಒಂದು ಷರತ್ತು ವಿಧಿಸಿದ್ದಾರೆ. ಬಾಡಿಗೆ ವಿನಾಯಿತಿ ನೀಡುತ್ತೇವೆ. ಆದರೆ, ಮಾಲ್‌ ಸ್ವಚ್ಛತೆ ಹಾಗೂ ನಿರ್ವಹಣೆ ವೆಚ್ಚವನ್ನು ನೀಡುವಂತೆ ಸೂಚಿಸಿದ್ದಾರೆ. ಬಹುತೇಕ ಬಾಡಿಗೆದಾರರು ಮಾಲ್‌ ಮಾಲಿಕರ ಷರತ್ತು ಒಪ್ಪಿಕೊಂಡಿದ್ದು, ಒಂದು ತಿಂಗಳ ನಿರ್ವಹಣೆ ವೆಚ್ಚವನ್ನು ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಸಾಮೂಹಿಕ ನಮಾಜ್‌: 35 ಜನರ ಮೇಲೆ ಕೇಸ್‌

ಇನ್ನು ಕೆಲವು ಮಾಲ್‌ಗಳಲ್ಲಿ ಬಾಡಿಗೆದಾರು ಮತ್ತು ಮಾಲ್‌ ಮಾಲಿಕರು ವ್ಯಾಪಾರದ ವಹಿವಾಟಿನಲ್ಲಿ ಇತ್ತಿಷ್ಟುಶೇಕಡಾ ಪ್ರಮಾಣದ ಲಾಭಾಂಶದಲ್ಲಿ ಹಂಚಿಕೆ ಮಾಡಿಕೊಳ್ಳಲಾಗುತ್ತದೆ. ತಿಂಗಳ ಬಾಡಿಗೆ ಇರುವುದಿಲ್ಲ. ಹೀಗಾಗಿ, ಅಂತಹ ಮಾಲ್‌ಗಳಲ್ಲಿ ಬಾಡಿಗೆ ವಿನಾಯಿತಿ ಪ್ರಶ್ನೆ ಉದ್ಬವವಾಗಿರುವುದಿಲ್ಲ. ಆದರೆ, ನಿರ್ವಹಣೆ ವೆಚ್ಚ ಮಾತ್ರ ಶಾಪಿಂಗ್‌ ಮಳಿಗೆದಾರರು ಮಾಲ್‌ ಮಾಲಿಕರಿಗೆ ನೀಡಬೇಕಾಗಲಿದೆ.

ಒಪ್ಪಂದ ಷರತ್ತಿನಲ್ಲಿ ಬಾಡಿಗೆ ವಿನಾಯಿತಿ

ಬಹುತೇಕ ಮಾಲ್‌ ಮಾಲಿಕರು ಹಾಗೂ ಬಾಡಿಗೆದಾರರು ಮಾಡಿಕೊಂಡ ಒಪ್ಪಂದದಲ್ಲಿ ಮಾಲ್‌ಗಳ ಮಾಲಿಕರು ಒತ್ತಡ ಹಾಕಿ ಮಳಿಗೆ ಬಂದ್‌ ಮಾಡಿದರೆ ಬಾಡಿಗೆ ನೀಡುವ ಅವಶ್ಯಕತೆ ಇಲ್ಲ ಎಂದು ಒಪ್ಪಂದ ಮಾಡಿರುವುದರಿಂದ ಬಾಡಿಗೆದಾರರು ನಿರಾಳರಾಗಿದ್ದಾರೆ. ಲಾಕ್‌ಡೌನ್‌ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮಾಲ್‌ ಬಂದ್‌ಗೆ ಮಾಲ್‌ಗಳ ಮಾಲಿಕರಿಗೆ ಸೂಚನೆ ನೀಡಿತ್ತು. ಮಾಲ್‌ ಮಾಲಿಕರು ಶಾಪಿಂಗ್‌ ಮಳಿಗೆಯ ಬಾಡಿಗೆದಾರರಿಗೆ ಹೇಳಿ ಮಳಿಗೆ ಬಂದ್‌ ಮಾಡಿಸಿದ್ದರು. ಹೀಗಾಗಿ, ಬಾಡಿಗೆದಾರರಿಗೆ ಬಾಡಿಗೆ ಕೇಳುವ ಪ್ರಶ್ನೆ ಉದ್ಬವಿಸುವುದಿಲ್ಲ ಎಂದು ಕೆಲವು ಬಾಡಿಗೆದಾರರು ಮಾಹಿತಿ ನೀಡಿದ್ದಾರೆ.

ಸಂಕಷ್ಟದ ಪರಿಸ್ಥಿತಿಯಲ್ಲಿ ಮಾಲ್‌ನಲ್ಲಿರುವ ಬಾಡಿಗೆದಾರ ನೆರವಾಗುವ ಉದ್ದೇಶದಿಂದ ಎಲ್ಲ ಗರುಡಾಮಾಲ್‌ನ ಬಾಡಿಗೆದಾರರಿಗೆ ಲಾಕ್‌ಡೌನ್‌ ಅವಧಿಯ ಬಾಡಿಗೆ ವಿನಾಯಿತಿ ನೀಡಿದ್ದೇವೆ. ನಿರ್ವಹಣೆ ವೆಚ್ಚ ಕೊಡಿ ಎಂದು ಹೇಳಿದ್ದೇವೆ. ಎಲ್ಲ ಮಾಲ್‌ಗಳಲ್ಲಿಯೂ ಬಾಡಿಗೆ ವಿನಾಯಿತಿ ನೀಡಲಾಗುತ್ತಿದೆ.

-ಉದಯ್‌ ಗರುಡಾಚಾರ, ಗರುಡಾಮಾಲ್‌ ಮಾಲಿಕರು.

click me!