ಮೌಢ್ಯ ಮುರಿದು ಇಂದು ಚಾಮರಾಜನಗರಕ್ಕೆ ಸಿಎಂ ಬೊಮ್ಮಾಯಿ!

By Kannadaprabha NewsFirst Published Oct 7, 2021, 7:36 AM IST
Highlights

* ಒಂದಲ್ಲ, ಅನೇಕ ಬಾರಿ ಹೋಗುವೆ: ಬೊಮ್ಮಾಯಿ

* ಮೌಢ್ಯ ಮುರಿದು ಇಂದು ಚಾಮರಾಜನಗರಕ್ಕೆ ಸಿಎಂ

* ಸರ್ಕಾರಿ ಮೆಡಿಕಲ್‌ ಕಾಲೇಜು ಆಸ್ಪತ್ರೆ ಉದ್ಘಾಟನೆ

ಮೈಸೂರು(ಅ.10): ಚಾಮರಾಜನಗರಕ್ಕೆ(Chamarajanagar) ಭೇಟಿ ನೀಡಿದರೆ ಅಧಿಕಾರ ಹೋಗುತ್ತದೆಂಬ ಮೌಢ್ಯ(Superstitious Belief) ಮುರಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Chief Minister Basavaraj Bommai) ಅವರು ಗುರುವಾರ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಜತೆಗೆ, ಚಾಮರಾಜನಗರಕ್ಕೆ ಒಂದಲ್ಲ, ಅನೇಕ ಬಾರಿ ಭೇಟಿ ನೀಡುತ್ತೇನೆ. ಮುಖ್ಯಮಂತ್ರಿಯಾಗಿ ಈ ಹಿಂದುಳಿದ ಜಿಲ್ಲೆಗೆ ಭೇಟಿ ನೀಡುವುದು ನನ್ನ ಕರ್ತವ್ಯ ಎಂದೂ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರ ಹೋಗುತ್ತದೆಂಬ ಮೂಢನಂಬಿಕೆಯ ನಡುವೆಯೂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ(Medical College Hospital) ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನೀರಾವರಿ ಸಚಿವನಾಗಿ ಹಲವು ಬಾರಿ ನಾನು ಅಲ್ಲಿಗೆ ಭೇಟಿ ಕೊಟ್ಟಿದ್ದೇನೆ. ಮುಖ್ಯಮಂತ್ರಿಯಾಗಿ ಎಲ್ಲಾ ಜಿಲ್ಲೆಗಳನ್ನೂ ಸಮನಾಗಿ ನೋಡಿಕೊಳ್ಳುವುದು ನನ್ನ ಕರ್ತವ್ಯ. ಅಲ್ಲಿಗೆ ಹೋದರೆ ಹಲವು ವಿಷಯ ತಿಳಿಯುತ್ತದೆ ಮತ್ತು ಅಭಿವೃದ್ಧಿ ಕಾರ್ಯವೂ ಆಗುತ್ತದೆ. ನಂಜುಂಡಪ್ಪ ವರದಿ ಪ್ರಕಾರ ಚಾಮರಾಜನಗರ ಅತ್ಯಂತ ಹಿಂದುಳಿದ ಜಿಲ್ಲೆ. ಹೀಗಾಗಿ ಅಲ್ಲಿಗೆ ಹೋಗುವುದು ನನ್ನ ಜವಾಬ್ದಾರಿ ಎಂದರು.

ಅಧಿಕಾರ ಅನ್ನುವುದು ಯಾರಿಗೆ ಶಾಶ್ವತ ಹೇಳಿ ಎಂದು ಪ್ರಶ್ನಿಸಿದ ಅವರು, ಅಲ್ಲಿಗೆ ಹೋಗದಿದ್ದರೆ ಅಧಿಕಾರ ಉಳಿಯುತ್ತದೆಯೇ? ಹೋಗಿಯೇ ಹೋಗುತ್ತದೆ. ಆದ್ದರಿಂದ ಇಲ್ಲಿ ಪ್ರಶ್ನೆ ಇರುವುದು ನನ್ನ ನಂಬಿಕೆ ಮತ್ತು ಕರ್ತವ್ಯದಲ್ಲಿ. ಅಲ್ಲಿನ ಜನಪ್ರತಿನಿಧಿಗಳಿಗೆ ಎರಡು ತಿಂಗಳ ಹಿಂದೆಯೇ ಚಾಮರಾಜನಗರಕ್ಕೆ ಬರುವುದಾಗಿ ಹೇಳಿದ್ದೆ. ಅಲ್ಲಿಗೆ ಮತ್ತೆ ಮತ್ತೆ ಭೇಟಿ ಕೊಡುತ್ತೇನೆ. ಕಾಮಗಾರಿಗಳ ಸಂಪೂರ್ಣ ಪ್ರಗತಿ ಪರಿಶೀಲಿಸುತ್ತೇನೆ ಎಂದು ಸ್ಪಷ್ಟಪಡಿಸಿದರು

click me!