
ಬೆಂಗಳೂರು(ಮೇ.11): ತಬ್ಲೀಘಿಗಳು ಆಯ್ತು ಈಗ, ರಾಜ್ಯವನ್ನು ‘ಅಜ್ಮೇರ್’ ಆತಂಕ ಕಾಡಲು ಶುರುವಾಗಿದೆ. ಮಾಚ್ರ್ ತಿಂಗಳಲ್ಲಿ ರಾಜಸ್ಥಾನದ ಅಜ್ಮೇರ್ ಪ್ರವಾಸಕ್ಕೆ ಹೋಗಿ ಬಂದಿದ್ದ ಬೆಳಗಾವಿಯ 30 ಹಾಗೂ ದಾವಣಗೆರೆಯ ಒಬ್ಬನಿಗೆ ಸೇರಿ 31 ಮಂದಿಗೆ ಕೊರೋನಾ ದೃಢಪಟ್ಟಿದೆ.
ಈಗಾಗಲೇ ತಬ್ಲೀಘಿಗಳಿಂದಾಗಿ 80ಕ್ಕೂ ಹೆಚ್ಚು ಸೋಂಕಿತ ಪ್ರಕರಣ ವರದಿಯಾಗಿದ್ದ ಬೆಳಗಾವಿಯಲ್ಲಿ ಅಜ್ಮೇರ್ಗೆ ಹೋಗಿಬಂದ 30ಮಂದಿಗೆ ಸೋಂಕು ದೃಢಪಟ್ಟಿರುವುದಿಂದ ಮತ್ತಷ್ಟುಆತಂಕ ಸೃಷ್ಟಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 115ಕ್ಕೇರಿದೆ. ಜಿಲ್ಲೆಯ ಅಜ್ಮೇರ್ ಪ್ರವಾಸಕ್ಕೆ ಒಟ್ಟು 38 ಮಂದಿ ಹೋಗಿ ಬಂದಿದ್ದು, ಅವರಲ್ಲಿ ಸೋಂಕು ತಗುಲಿರುವ 30 ಮಂದಿಯನ್ನು ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಗರದಲ್ಲಿ ಮತ್ತೊಂದು ಆಸ್ಪತ್ರೆ ಸೀಲ್ಡೌನ್, ಆಸ್ಪತ್ರೆ ಸಿಬ್ಬಂದಿಗೆ ಕ್ವಾರಂಟೈನ್!
ಕಳ್ಳಮಾರ್ಗದ ಮೂಲಕ ಪ್ರವೇಶ: ಮಾ.17ರಂದು ಖಾಸಗಿ ಬಸ್ ಮಾಡಿಕೊಂಡು ಬೆಳಗಾವಿಯಿಂದ ಅಜ್ಮೇರ್ಗೆ ತೆರಳಿದ್ದ 38 ಮಂದಿ ಒಂದೂವರೆ ತಿಂಗಳು ಅಲ್ಲೇ ಸಿಕ್ಕಿಹಾಕಿಕೊಂಡಿದ್ದರು. ನಂತರ ಮೇ 1ರಂದು ಹೊರಟು ಮರುದಿನ ಬೆಳಗಾವಿ ಜಿಲ್ಲೆಯ ಗಡಿಭಾಗವಾದ ನಿಪ್ಪಾಣಿಗೆ ಬಂದಿದ್ದರು. ಆದರೆ, ನಿಪ್ಪಾಣಿ ಬಳಿಯ ಕೊಗನೊಳಿ ಚೆಕ್ಪೋಸ್ಟ್ನಲ್ಲಿದ್ದ ರಾಜ್ಯ ಪೊಲೀಸರು ಯಾರನ್ನೂ ಒಳಗೆ ಬಿಟ್ಟುಕೊಡದೆ ವಾಪಸ್ ಕಳುಹಿಸಿದ ಕಾರಣ ಇವರೆಲ್ಲರೂ ಕಾಲ್ನಡಿಗೆಯಲ್ಲೇ ರಾಜ್ಯ ಪ್ರವೇಶಿಸಿದ್ದರು. ಈ ವೇಳೆ ಮುಖ್ಯರಸ್ತೆಯಲ್ಲಿ ಸಾಗುತ್ತಿದ್ದಾಗ ಪೊಲೀಸರು ಗಮನಿಸಿ ವಿಚಾರಣೆ ನಡೆಸಿದ ವೇಳೆ ಸಿಕ್ಕಿಹಾಕಿಕೊಂಡಿದ್ದರು. ತಕ್ಷಣ ಅವರನ್ನು ನಿಪ್ಪಾಣಿ ಬಳಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಒಂದು ವೇಳೆ ಪೊಲೀಸರ ಕಣ್ಣು ತಪ್ಪಿಸಿ ಎಲ್ಲರೂ ತಮ್ಮ ಊರುಗಳಿಗೆ ತೆರಳಿದ್ದರೆ, ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಬಿಡುಗಡೆಗೂ ನಡೆದಿತ್ತು ಯತ್ನ: ಅಜ್ಮೇರ್ನಿಂದ ವಾಪಸಾದ ಇವರನ್ನು ಕ್ವಾರಂಟೈನ್ಗೊಳಪಡಿಸದಂತೆ ಭಾರೀ ರಾಜಕೀಯ ಒತ್ತಡಗಳು ಬಂದಿದ್ದವು. ಜತೆಗೆ ಸ್ಥಳೀಯ ಜನಪ್ರತಿನಿಧಿಯೊಬ್ಬರು ಕ್ವಾರಂಟೈನ್ನಲ್ಲಿದ್ದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿರುವ ಮಾಹಿತಿ ಇದೆ ಎನ್ನಲಾಗಿದೆ.
ರಾಜ್ಯದಲ್ಲಿ 1 ಲಕ್ಷ ದಾಟಿದ ಕೊರೋನಾ ಟೆಸ್ಟ್!
ಮೊದಲ ಕೇಸ್: ಇನ್ನು ದಾವಣಗೆರೆಯಿಂದ ಅಜ್ಮೇರ್ಗೆ ಹೋಗಿ ಬಂದಿದ್ದ 22 ವರ್ಷದ (ಪಿ-847) ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಮಾ.20ಕ್ಕೆ ಈತನೂ ಸೇರಿ ಒಟ್ಟು ಜಿಲ್ಲೆಯಿಂದ 16 ಮಂದಿ ಅಜ್ಮೇರ್ಗೆ ಹೋಗಿ, 21ರಿಂದ ಅಲ್ಲಿನ ಬಾಡಿಗೆ ಮನೆಯಲ್ಲಿದ್ದರು. ಮೇ 1ರಂದು ಅಲ್ಲಿಂದ ಹೊರಟು ಮೇ 3ಕ್ಕೆ ದಾವಣಗೆರೆಗೆ ತಲುಪಿದ್ದರು. ಹೀಗೆ ಬಂದ ಎಲ್ಲ 16 ಮಂದಿಯನ್ನೂ ತಕ್ಷಣ ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಡಿಸಲಾಗಿದ್ದು, ಒಬ್ಬನಿಗೆ ಸೋಂಕು ದೃಢಪಟ್ಟಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ