ಅಪ್ಪಣ್ಣ ಸಮಾಜವನ್ನು ಪರಿಶಿಷ್ಠ ಜಾತಿಗೆ ಸೇರಿಸಲು ಕ್ರಮ: ಸಿಎಂ ಬೊಮ್ಮಾಯಿ

By Kannadaprabha NewsFirst Published Feb 2, 2023, 6:44 AM IST
Highlights

ಈ ಸಮಾಜದ ಅಭಿವೃದ್ಧಿಗಾಗಿ, ಶೈಕ್ಷಣಿಕ ಸುಧಾರಣೆಗಾಗಿ ಆದಷ್ಟು ಬೇಗ ಕುಲಶಾಸ್ತ್ರ ಅಧ್ಯಯನ ನಡೆಸಿ, ಈ ಸಮಾಜವನ್ನು ಪರಿಶಿಷ್ಟಜಾತಿ (ಎಸ್‌ಸಿ)ಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. 
 

ಮುದ್ದೇಬಿಹಾಳ/ಬ್ಯಾಡಗಿ (ಫೆ.02): ಕುಲವೃತ್ತಿ ಆಧಾರದ ಮೇಲೆ ಜೀವನ ನಡೆಸಿಕೊಂಡು ಬರುತ್ತಿರುವ ಹಡಪದ ಅಪ್ಪಣ್ಣ ಸಮಾಜವು ಲಿಂಗಾಯತ ಸಮಾಜದಲ್ಲಿಯೇ ತೀರಾ ಹಿಂದುಳಿದ ಸಮಾಜವಾಗಿದೆ. ಈ ಹಿನ್ನೆಲೆಯಲ್ಲಿ ಈ ಸಮಾಜದ ಅಭಿವೃದ್ಧಿಗಾಗಿ, ಶೈಕ್ಷಣಿಕ ಸುಧಾರಣೆಗಾಗಿ ಆದಷ್ಟು ಬೇಗ ಕುಲಶಾಸ್ತ್ರ ಅಧ್ಯಯನ ನಡೆಸಿ, ಈ ಸಮಾಜವನ್ನು ಪರಿಶಿಷ್ಟಜಾತಿ (ಎಸ್‌ಸಿ)ಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. 

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ತಂಗಡಗಿ ಗ್ರಾಮದಲ್ಲಿ ಹಡಪದ ಅಪ್ಪಣ್ಣ ಸಮುದಾಯ ಭವನ ಹಾಗೂ .3 ಕೋಟಿ ವೆಚ್ಚದಲ್ಲಿ ವಿವಿಧ ಕಟ್ಟಡಗಳ ಅಡಿಗಲ್ಲು ಸಮಾರಂಭ ಹಾಗೂ ಹಡಪದ ಸಮಾಜದ ರಾಜ್ಯಮಟ್ಟದ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.  ಹಡಪದ ಸಮಾಜಕ್ಕೆ ಪ್ರತ್ಯೇಕ ನಿಗಮ ಸ್ಥಾಪಿಸಲಾಗುವುದು. ವೃತ್ತಿ ಆಧಾರಿತವಾದ ಕುಲಕಸುಬುಗಳ ಕಾರ್ಮಿಕರಿಗೆ ವಿಶೇಷ ಕಾರ್ಯಕ್ರಮ ರೂಪಿಸಿ, ನಿಗಮದ ಮುಖಾಂತರ ಅನುಷ್ಠಾನಗೊಳಿಸಲಾಗುವುದು. ಜೊತೆಗೆ, ರಕ್ಕಸ ತಂಗಡಗಿ, ಯುದ್ಧ ಕಾಳಗದ ಪೂರ್ವ ಇತಿಹಾಸ ಹೊಂದಿದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. 

ಡೀಸೆಲ್‌ ಸಬ್ಸಿಡಿ ನೀಡುವ ರೈತ ಶಕ್ತಿ ಯೋಜನೆಗೆ ಸಿಎಂ ಬೊಮ್ಮಾಯಿ ಚಾಲನೆ

ಶಿವಶರಣ ಹಡಪದ ಅಪ್ಪಣ್ಣ ಅವರ ಜನ್ಮಸ್ಥಳ ಮಸಬಿನಾಳ, ಹಡಪದ ಅಪ್ಪಣ್ಣನವರ ಶರಣ ಲಿಂಗಮ್ಮ ತಾಯಿಯವರ ಜನ್ಮಸ್ಥಳ ದೇಗಿನಾಳ ಗ್ರಾಮವನ್ನು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸುವ ತಮ್ಮ ಬೇಡಿಕೆಯನ್ನು ಪರಿಶೀಲಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ .3 ಕೋಟಿ ಅನುದಾನ ನೀಡಲಾಗಿದೆ ಎಂದರು. ಹಡಪದ ಸಮಾಜ ಹಿಂದೆ ಸಂಘಟಿತವಾಗಿರಲಿಲ್ಲ. ನಾನು ಮುಖ್ಯಮಂತ್ರಿ ಆದಾಗಲೇ ಈ ಸಮುದಾಯ ಸಂಘಟಿತವಾಗಿರುವುದು ದೈವಿಚ್ಛೆ. 2016ರ ಪೂರ್ವದಲ್ಲಿ ಈ ಸಮುದಾಯವನ್ನು ‘ನಾಯಿಂದ ಸಮಾಜ’ದಿಂದ ವಿಂಗಡಿಸಿದ್ದರು. 

ಆ ಸಂದರ್ಭದಲ್ಲಿಯೇ ನೀವು ಸಂಘಟನೆ ಆಗಬೇಕಿತ್ತು. ಸಾಮಾಜಿಕ ಹಿತಾಸಕ್ತಿಯಿಂದ ಹಡಪದ ಸಮಾಜದವರು ಸಂಘಟಿತರಾಗಲು ಅವಕಾಶ ನೀಡಲಿಲ್ಲ. ಆದರೆ, ನಮ್ಮ ಸರ್ಕಾರದ ಅವಧಿಯಲ್ಲಿ ಇಂತಹ ಸಣ್ಣ ಸಣ್ಣ ಸಮುದಾಯಗಳಿಗೆ ಧ್ವನಿ ಸಿಕ್ಕಿದೆ ಎಂದರು. ಮುಂಬರುವ ದಿನಗಳಲ್ಲಿ ಬಡಿಗ, ಕಮ್ಮಾರ, ಕುಂಬಾರ, ಕ್ಷೌರಿಕ ಸೇರಿದಂತೆ ಇತರ ಕೌಶಲ್ಯಾಭಿವೃದ್ಧಿ ವೃತ್ತಿಯಾಧಾರಿತ ಸಣ್ಣ ಸಮಾಜಗಳ ವೃತ್ತಿಗಳನ್ನು ಉಳಿಸಿ ಬೆಳೆಸಲು ಸರ್ಕಾರದಿಂದ ಆರ್ಥಿಕ ಸಹಾಯಧನ ನೀಡಲಾಗುವುದು ಎಂದರು.

ಬ್ಯಾಡಗಿಯಲ್ಲಿ 693 ಕೋಟಿ ರು.ಕಾಮಗಾರಿಗೆ ಚಾಲನೆ: ಇದಕ್ಕೂ ಮೊದಲು, ಹಾವೇರಿ ಜಿಲ್ಲೆ ಬ್ಯಾಡಗಿಯಲ್ಲಿ 693 ಕೋಟಿ ರು.ಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಯೋಜನೆಗಳನ್ನು ರೂಪಿಸಿ, ಅದೇ ಅವಧಿಯಲ್ಲಿ ಉದ್ಘಾಟಿಸುವುದು ಬಿಜೆಪಿ ಸರ್ಕಾರಕ್ಕಿರುವ ಬದ್ಧತೆ. ಕೇವಲ 4 ವರ್ಷದಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ 1,614 ಕೋಟಿ ರೂ.ಅನುದಾನ ನೀಡಿದ್ದೇವೆ. ಜಿಲ್ಲೆಗೆ ಮುಖ್ಯಮಂತ್ರಿಗಳ ಕೊಡುಗೆ ಶೂನ್ಯ ಎಂಬ ಕಾಂಗ್ರೆಸ್‌ ನಾಯಕರ ರಾಜಕೀಯ ಭಾಷಣಗಳಿಗೆ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಉತ್ತರ ಕೊಡುತ್ತೇನೆ. ಕಾಂಗ್ರೆಸ್‌ ನಾಯಕರಿಂದ ನಾನು ಅಭಿವೃದ್ಧಿ ಮಾಡುವುದನ್ನು ಕಲಿಯಬೇಕಿಲ್ಲ. ನಿಮ್ಮೆದುರಿಗೆ ಲೆಕ್ಕ ಕೊಡುತ್ತಿದ್ದೇನೆ ಎಂದರು.

ಬಡವರು ಸೈಟ್‌ ಖರೀದಿಗೆ ಸರಳ ಕಾನೂನು: ಸಿಎಂ ಬೊಮ್ಮಾಯಿ ಭರವಸೆ

ರಾಜ್ಯದಲ್ಲಿ ರೈತಶಕ್ತಿ ಯೋಜನೆಯಡಿ ಸುಮಾರು 391 ಕೋಟಿ ರು.ಗಳನ್ನು 51 ಲಕ್ಷ ರೈತರ ಖಾತೆಗೆ ಹಾಕಿದ್ದೇನೆ. ಕೃಷಿ ವಿವಿಗಳಲ್ಲಿ ಕೃಷಿಕರ ಮಕ್ಕಳಿಗೆ ಮೀಸಲಾತಿಯನ್ನು ಶೇ. 40 ರಿಂದ ಶೇ.50ಕ್ಕೆ ಹೆಚ್ಚಿಸಲಾಗಿದೆ. ರೈತರ ಮಕ್ಕಳಿಗೆ ವಿದ್ಯಾನಿಧಿ ಘೋಷಿಸಿದ್ದೇವೆ ಎಂದು ಸರ್ಕಾರದ ಯೋಜನೆಗಳ ಬಗ್ಗೆ ವಿವರಣೆ ನೀಡಿದರು. ಇದೇ ವೇಳೆ, ರೈತ ಸಂಘದಿಂದ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

click me!