ಕೋವಿಡ್‌ ಸಾವಿನ ಸೂಕ್ತ ಮಾಹಿತಿ ನೀಡದ್ದಕ್ಕೆ ಲೆಕ್ಕಪತ್ರ ಸಮಿತಿ ಆಕ್ರೋಶ

By Kannadaprabha NewsFirst Published Aug 18, 2021, 7:41 AM IST
Highlights
  • ಕೋವಿಡ್‌ ಉಪಕರಣಗಳ ಖರೀದಿ, ಕೋವಿಡ್‌ ಸಾವಿನ ಬಗ್ಗೆ ಸೇರಿದಂತೆ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯು ಸಮರ್ಪಕ ಇಲ್ಲ
  • ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರು ತೀವ್ರ ತರಾಟೆ

ಬೆಂಗಳೂರು (ಆ.18):  ಕೋವಿಡ್‌ ಉಪಕರಣಗಳ ಖರೀದಿ, ಕೋವಿಡ್‌ ಸಾವಿನ ಬಗ್ಗೆ ಸೇರಿದಂತೆ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯು ಸಮರ್ಪಕ ಇಲ್ಲದಿರುವ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.

ವಿಧಾನಸೌಧದಲ್ಲಿ ಮಂಗಳವಾರ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸದಸ್ಯರಾದ ರಮೇಶ್‌ ಕುಮಾರ್‌, ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವು ಸದಸ್ಯರು ಕೋವಿಡ್‌ಗೆ ಸಂಬಂಧಿಸಿದಂತೆ ಆರೋಗ್ಯಾಧಿಕಾರಿಗಳು ತಪ್ಪು ಅಂಕಿ-ಅಂಶ ನೀಡಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದರು. ಸಮಿತಿಯು ಉತ್ತರ ಕೋರಿ 21 ಪ್ರಶ್ನಾವಳಿಯನ್ನು ಆರೋಗ್ಯ ಇಲಾಖೆ ನೀಡಿತ್ತು. ಆದರೆ, ಅಧಿಕಾರಿಗಳು ಸಮರ್ಪಕವಾದ ಉತ್ತರ ನೀಡಿಲ್ಲ ಎಂದು ಸದಸ್ಯರು ಬೇಸರ ವ್ಯಕ್ತಪಡಿಸಿದರು.

ಕೋವಿಡ್‌ ಲಸಿಕೆ ದೇಣಿಗೆ ನೀಡಿ: ಕಂಪನಿಗಳಿಗೆ ಸುಧಾಕರ್‌ ಮನವಿ

ಸಮಿತಿಯ ಪ್ರಶ್ನಾವಳಿಗೆ ಇಲಾಖೆಯು ಸಲ್ಲಿಸಿರುವ ಉತ್ತರವನ್ನು ತಿರಸ್ಕರಿಸಿ, ಸಮಂಜಸವಾದ ಮತ್ತು ಸ್ಪಷ್ಟವಾದ ಉತ್ತರವನ್ನು ಸಮಿತಿಗೆ ಆದ್ಯತೆಗೆ ಮೇರೆಗೆ ಒಂದು ವಾರದೊಳಗಾಗಿ ಸಮಿತಿಗೆ ಸಲ್ಲಿಸುವಂತೆ ಸಭೆಯಲ್ಲಿ ಸೂಚನೆ ನೀಡಲಾಯಿತು.

ಸದಸ್ಯರ ಚಾಟಿ: ಕೋವಿಡ್‌ ನಿಯಂತ್ರಿಸಲು ಪಾರ್ಟ್‌ ಹೆಮಟೋಲೊಜಿ ಸೆಲ್‌ ಕೌಂಟ್‌ ಅನ್ನು ಟೆಂಡರ್‌ ಮೂಲಕ ಪ್ರತಿ ಯೂನಿಟ್‌ಗೆ 2.96 ಲಕ್ಷ ರು. ನೀಡಿ 1,195 ಯೂನಿಟ್‌ಗಳನ್ನು ಖರೀದಿಸಿತ್ತು. ಆದರೆ, ಅದೇ ಯೂನಿಟ್‌ಗೆ ಹಿಮಾಚಲ ಪ್ರದೇಶ ರಾಜ್ಯವು ಕೇವಲ 1.30 ಲಕ್ಷ ರು. ನೀಡಿ ಖರೀದಿಸಿದೆ. ಇದರಿಂದ 25 ಕೋಟಿ ರು. ಹೆಚ್ಚಾಗಿದೆ. ರಾರ‍ಯಪಿಡ್‌ ಆ್ಯಂಟಿಜನ್‌ ಟೆಸ್ಟ್‌ ಕಿಟ್‌ ಖರೀದಿಸಲು ಆಹ್ವಾನಿಸಿದ ದರಪಟ್ಟಿಯಲ್ಲಿನ ವ್ಯತ್ಯಾಸಗಳ ಕುರಿತು ಸಮಾಲೋಚನೆ ನಡೆಸಲಾಯಿತು. ರಾಜ್ಯದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಅಭಾವದ ಕುರಿತು ಮತ್ತು ಬೆಂಗಳೂರಲ್ಲಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿಯೂ ಸೋಂಕಿತರ ಅವಶ್ಯಕತೆಗನುಗುಣವಾಗಿ ವೆಂಟಿಲೇಟರ್‌ಗಳ ಲಭ್ಯತೆ ಇತ್ತು ಎಂಬುದು ಸತ್ಯಕ್ಕೆ ದೂರವಾದುದು ಎಂದು ಸದಸ್ಯರು ಪಕ್ಷಾತೀತವಾಗಿ ಅಭಿಪ್ರಾಯಪಟ್ಟರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಮಿತಿಯ ಅಧ್ಯಕ್ಷ ರಾಮಲಿಂಗಾ ರೆಡ್ಡಿ, ಆರೋಗ್ಯ ಇಲಾಖೆಗೆ ಕೊವಿಡ್‌ ನ್ಯೂನತೆಗಳ ಬಗ್ಗೆ ಪ್ರಶ್ನಾವಳಿಗಳನ್ನು ನೀಡಲಾಗಿತ್ತು. ಒಟ್ಟು 21 ಪ್ರಶ್ನೆಗಳನ್ನು ನೀಡಲಾಗಿತ್ತು. ಆದರೆ, ಇಲಾಖೆಯು ಸದಸ್ಯರಿಗೆ ನೀಡಿದ ಉತ್ತರ ಸಮಾಧಾನವಾಗಿಲ್ಲ. ಇಲಾಖೆಯು ಅಂಕಿ-ಅಂಶಗಳನ್ನು ಸಹ ಸರಿಯಾಗಿ ನೀಡಿಲ್ಲ. ಯಾವುದೇ ಎಷ್ಟುಖರ್ಚು ಆಗಿದೆ ಎಂಬ ಮಾಹಿತಿ ಸಮರ್ಪಕವಾಗಿಲ್ಲ. ಈ ಕಾರಣಕ್ಕಾಗಿ ಕೊಟ್ಟಉತ್ತರವನ್ನು ಮರುಪರಿಶೀಲನೆ ಮಾಡುವಂತೆ ತಿಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಸಭೆ ನಡೆಯಲಿದೆ ಎಂದು ತಿಳಿಸಿದರು.

click me!