ಸರ್ಕಾರದಿಂದಲೇ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು: ಆರ್‌.ಅಶೋಕ್‌

By Kannadaprabha NewsFirst Published Sep 21, 2024, 6:30 AM IST
Highlights

ಕಳೆದ ವರ್ಷ ಹನುಮಧ್ವಜಕ್ಕೆ ಅಗೌರವ ತಂದರು. ಈ ವರ್ಷ ಗಣೇಶ ಉತ್ಸವದ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಸರ್ಕಾರವೇ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿದೆ. ಇನ್ನು ಮೂವತ್ತು ವರ್ಷದಲ್ಲಿ ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎಂದು ಹೇಳುತ್ತಿದ್ದು, ಅದನ್ನು ಮಾಡುವ ಸಲುವಾಗಿಯೇ ಈ ಎಲ್ಲ ಭಯೋತ್ಪಾದಕ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ಕಿಡಿಕಾರಿದ ವಿಪಕ್ಷ ನಾಯಕ ಆರ್.ಅಶೋಕ್ 

ಮಂಡ್ಯ(ಸೆ.21):  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕೋಮು ಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಜಿಲ್ಲೆಯೊಳಗಿರುವ ಜನಪ್ರತಿನಿಧಿಗಳೂ ಹಿಂದೂ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ನಗರದ ಬಿಜೆಪಿ ವಿಕಾಸ ಭವನದಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಳೆದ ವರ್ಷ ಹನುಮಧ್ವಜಕ್ಕೆ ಅಗೌರವ ತಂದರು. ಈ ವರ್ಷ ಗಣೇಶ ಉತ್ಸವದ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಸರ್ಕಾರವೇ ಮುಸ್ಲಿಂ ಭಯೋತ್ಪಾದಕರಿಗೆ ಕುಮ್ಮಕ್ಕು ಕೊಡುತ್ತಿದೆ. ಇನ್ನು ಮೂವತ್ತು ವರ್ಷದಲ್ಲಿ ಭಾರತವನ್ನು ಪಾಕಿಸ್ತಾನ ಮಾಡುತ್ತೇವೆ ಎಂದು ಹೇಳುತ್ತಿದ್ದು, ಅದನ್ನು ಮಾಡುವ ಸಲುವಾಗಿಯೇ ಈ ಎಲ್ಲ ಭಯೋತ್ಪಾದಕ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದು ಕಿಡಿಕಾರಿದರು.

Latest Videos

ಕಾಂಗ್ರೆಸ್‌ನಲ್ಲಿದ್ದಾಗ ಶಾಸಕ ಮುನಿರತ್ನ ಸತ್ಯ ಹರಿಶ್ಚಂದ್ರರಾಗಿದ್ದರಾ: ಆರ್.ಅಶೋಕ್

ಸರ್ಕಾರಕ್ಕೆ ಸಾಮಾನ್ಯ ಜ್ಞಾನವಿಲ್ಲ:

ಮಂಡ್ಯದಲ್ಲಿ ಶೇ.೯೫ರಷ್ಟು ಮಂದಿ ಹಿಂದೂಗಳಿದ್ದಾರೆ. ಹಾಗಾಗಿ ಇಲ್ಲಿ ಕೋಮು ದಳ್ಳುರಿ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಈ ಸರ್ಕಾರಕ್ಕೆ ಕಾಮನ್ ಸೆನ್ಸ್ ಇಲ್ಲ. ನಾಗಮಂಗಲ ಗಲಭೆಗೆ ಸಂಬಂಧಿಸಿದಂತೆ ಕೆಳ ಹಂತದ ಡಿವೈಎಸ್ಪಿ, ಇನ್ಸ್‌ಪೆಕ್ಟರ್‌ ಅವರನ್ನು ಅಮಾನತುಗೊಳಿಸಿ ಕೈತೊಳೆದುಕೊಂಡಿದ್ದಾರೆ. ಇವರನ್ನು ಬಿಟ್ಟು ಡಿಸಿ, ಎಸ್‌ಪಿ ಅವರನ್ನು ಅಮಾನತ್ತು ಮಾಡಬೇಕಿತ್ತು ಎಂದರು.

ಜನರಿಗೆ ಮೋಸ ಮಾಡುವ ಕಾರ್ಯವನ್ನು ಸರ್ಕಾರ ಮಾಡುತ್ತಿದೆ. ನಾವು ನಾಗಮಂಗಲಕ್ಕೆ ಬಂದು ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದೇವೆ. ನಾನು ಅಲ್ಲಿ ಯಾವುದೇ ಪ್ರಚೋದನಕಾರಿ ಭಾಷಣ ಮಾಡಿಲ್ಲ. ಆದರೂ ನನ್ನ ಮೇಲೆ ಏಕಾಏಕಿ ಕೇಸ್ ದಾಖಲು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖೆ ಮಾಡಿ ಎಂದರೆ ಕೇಸ್ ಹಾಕುತ್ತಾರೆ:

ತಪ್ಪು ಆಗಿದ್ದರೆ ತನಿಖೆ ಮಾಡಿ ಎನ್ನುವ ಅಧಿಕಾರ ವಿಪಕ್ಷ ನಾಯಕನಿಗಿದೆ. ತನಿಖೆ ಮಾಡಿ ಎಂದು ಹೇಳಿದ್ದೇನೆ. ನನ್ನ ಪೋಸ್ಟ್‌ನಲ್ಲಿ ಕೂಡ ಹಾಕಿದ್ದೇನೆ. ತನಿಖೆ ಮಾಡಿ ಎನ್ನುವುದು ತಪ್ಪೇ?, ಪ್ಯಾಲೆಸ್ತೇನಿ ಧ್ವಜ ಹಿಡಿದರೆ ತಪ್ಪಿಲ್ಲ ಎಂದು ಆ ಮಂತ್ರಿ ಹೇಳಿದ್ದಾನೆ. ಇಲ್ಲಿ ಹಿಡಿಯುವ ಅವಶ್ಯಕತೆ ಏನಿದೆ, ಕಾಂಗ್ರೆಸ್ ಸರ್ಕಾರ ಕೋಮು ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ನನ್ನ ಹೋರಾಟ ಹತ್ತಿಕ್ಕಲು ಯತ್ನ

ಸರ್ಕಾರ ನನ್ನ ಬಾಯಿ ಮುಚ್ಚುವ ಕೆಲಸ ಮಾಡುತ್ತಿದೆ. ನನ್ನ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹುಬ್ಬಳ್ಳಿ ವಿಚಾರವಾಗಿ ಕೂಡ ಕೇಸ್ ಹಾಕಿದ್ದಾರೆ. ಇವರು ಹೇಳಿದ ಹಾಗೆ ಕೇಳಿಕೊಂಡು ಇರಬೇಕಾ, ಇದಕ್ಕಾಗಿಯೇ ವಿರೋಧ ಪಕ್ಷವೇ, ಈ ಸರ್ಕಾರ ಭ್ರಷ್ಟಾಚಾರದ ಕೂಪವಾಗಿದೆ. ಬಿಜೆಪಿಯನ್ನು ತುಳಿಯುವ ಷಡ್ಯಂತ್ರವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

ಗಣೇಶ ವಿಸರ್ಜನೆ ವೇಳೆ ಸರಿಯಾಗಿ ಬಂದೋಬಸ್ತ್ ಮಾಡಿದರೆ ಗಲಾಟೆ ಆಗುತ್ತಿರಲಿಲ್ಲ. ಗಲಾಟೆ ಮಾಡಿಸಿದವರು ಕಾಂಗ್ರೆಸ್‌ನವರು. ಬೆಂಕಿ ಇಟ್ಟಿದ್ದು ನೀವೇ ತಾನೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಹಲವು ಗಲಾಟೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲದಂತಾಗಿದೆ ಎಂದು ಆರೋಪಿಸಿದರು.

ಎದ್ದು ಕುಳಿತಿರುವ ಮುಸ್ಲಿಮರು:

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಮುಸ್ಲಿಮರು ಎದ್ದು ಕುಳಿತಿದ್ದಾರೆ. ಮುಸ್ಲಿಮರ ಪರವಾಗಿ ಕಾಂಗ್ರೆಸ್ ನಾಯಕರು ನಿಲ್ಲುತ್ತಾರೆ. ಹೀಗಾಗಿ ಇಂತಹ ಕೋಮು ದಳ್ಳುರಿಗಳು ನಡೆಯುತ್ತಿವೆ ಎಂದ ಅವರು, ಶಾಸಕ ಮುನಿರತ್ನ ಅವರಿಗೆ ನೋಟಿಸ್ ಕೊಟ್ಟಿದ್ದೇವೆ. ಎಫ್‌ಎಸ್‌ಎಲ್ ವರದಿ ಬಂದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇವೇಗೌಡರ ಕುಟುಂಬ ಮುಗಿಸಲು ಸಂಚು:

ಕಾಂಗ್ರೆಸ್‌ನವರು ಸಂಚು ಮಾಡಿ ದೇವೇಗೌಡರ ಕುಟುಂಬವನ್ನು ಮುಗಿಸಲು ಹೊರಟಿದ್ದರು. ಆಗ ಯಾಕೆ ಕಾಂಗ್ರೆಸ್‌ನ ಒಕ್ಕಲಿಗರು ಹೋರಾಟ ಮಾಡಲಿಲ್ಲ. ಇದೀಗ ಸಿದ್ದರಾಮಯ್ಯರನ್ನು ಬದಲಾವಣೆ ಮಾಡಿ ಒಕ್ಕಲಿಗರನ್ನು ಸಿಎಂ ಮಾಡಿ ಎನ್ನುತ್ತಾರೆ. ಈಗಾಗಲೇ ಕೆಲವರು ಪೇಪರ್ ಕೊಡಿ ಎಂದು ಕೇಳಿದ್ದರು. ನಿಮ್ಮ ತರ ಡಬಲ್‌ಸ್ಟಾಂಡ್ ಆಗಿ ಮಾತನಾಡಲ್ಲ. ನಾವು ಈಗಾಗಲೇ ಹೇಳಿದ್ದೇವೆ. ತಪ್ಪು ಮಾಡಿದವರು ಉಪ್ಪು ತಿಂದವರು, ನೀರು ಕುಡಿಯಲೇಬೇಕು ಎಂದಿದ್ದೇವೆ. ಎಫ್‌ಎಸ್‌ಎಲ್ ವರದಿ ಕೊಡಿ, ನೀವು ರಾಜಕಾರಣ ಮಾಡುತ್ತಿದ್ದೀರಿ. ನಾವೂ ರಾಜಕಾರಣ ಮಾಡುತ್ತಿದ್ದೇವೆ. ಕಾನೂನು ಮುಂದೆ ಯಾರೂ ಇಲ್ಲ. ಈಗಾಗಲೇ ಮುನಿರತ್ನ ಅವರಿಗೆ ನೋಟಿಸ್ ಕೊಟ್ಟಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಮೇಲೆ ಆರೋಪ ಬಂದಿದೆ. ಇವರೆಲ್ಲ ಮಾದರಿ ಆಗಲಿ, ಮೊದಲು ಅವರು ರಾಜೀನಾಮೆ ಕೊಡಲಿ, ನಂತರ ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

ಎಲ್ಲಾದ್ರೂ ಹೋದ್ರೆ ವಿಕೃತಕಾಮಿ ಮುನಿರತ್ನ ಏಡ್ಸ್ ಪಿನ್ನು ಚುಚ್ಚಿಬಿಡ್ತಾನೋ ಅಂತಾ ಭಯ ಆಗ್ತಿದೆ: ಮೊಹಮ್ಮದ್ ನಲಪಾಡ್

ಈ ಸರ್ಕಾರಕ್ಕೇ ಗ್ಯಾರಂಟಿ ಇಲ್ಲ:

ಕುಮಾರಸ್ವಾಮಿ ಅವರು ಸರ್ಕಾರದ ವಿರುದ್ಧ ಹೋರಾಟ ಮಾಡಿದರೆ ಕೇಸ್ ಹಾಕುತ್ತಾರೆ. ಕಾಂಗ್ರೆಸ್‌ ಸರ್ಕಾರ ಐದು ವರ್ಷ ಇರಲ್ಲ ಎಂದು ಅವರೇ ಹೇಳುತ್ತಿದ್ದಾರೆ. ಪಾಪರ್ ಆಗಿರೋ ಸರ್ಕಾರ. ಗ್ಯಾರಂಟಿ ಇಲ್ಲದ ಸರ್ಕಾರ. ಸರ್ಕಾರವೇ ಬಿದ್ದು ಹೋಗುತ್ತದೆ. ಇದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಭವಿಷ್ಯ ನುಡಿದರು.

ತಿರುಪತಿ ಲಡ್ಡು ಅಪವಿಚಾರದಿಂದ ನಮಗೂ ತುಂಬಾ ನೋವಾಗಿದೆ. ತಿರುಪತಿ ಹಿಂದೂಗಳ ಆರಾಧ್ಯ ದೈವ. ಈ ರೀತಿ ಮಾಡಿದ್ದರೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ಮುಖಂಡರಾದ ಇಂಡುವಾಳು ಸಚ್ಚಿದಾನಂದ, ಅಶೋಕ್‌ಕುಮಾರ್, ಶ್ರೀಧರ್, ನಾಗಾನಂದ, ಶಿವಕುಮಾರ್ ಆರಾಧ್ಯ ಇತರರು ಇದ್ದರು.

click me!