
ಪುತ್ತೂರು (ಜೂ.07): ಉತ್ತರ ಪ್ರದೇಶದ ಅಯೋಧ್ಯೆ ಫೈಝಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಅಭ್ಯರ್ಥಿ ಲಲ್ಲುಸಿಂಗ್ ಅವರಿಗೆ ಕರೆ ಮಾಡಿ ಹಿಂದಿಯಲ್ಲಿ ತರಾಟೆಗೆ ತೆಗೆದುಕೊಂಡಿರುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುತ್ತೂರಿನ ಜಗದೀಶ್ ರೈ ಎಂದು ಹೇಳಿಕೊಂಡಿರುವ ವ್ಯಕ್ತಿ ಅಯೋಧ್ಯೆಯ ಫೈಝಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿಯ ಪರಾಜಿತ ಅಭ್ಯರ್ಥಿ ಲಲ್ಲುಸಿಂಗ್ ಅವರಿಗೆ ಕರೆ ಮಾಡಿ ಮಾತನಾಡಿ ಲೋಕಸಭಾ ಸದಸ್ಯರಾಗಿ ಒಂದು ಬಾರಿಯೂ ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಯೋಗಿ ಅವರು ನಿಮ್ಮನ್ನು ಚುನಾವಣೆಗೆ ಸ್ಪರ್ಧಿಸದಂತೆ ತಡೆದಿದ್ದರು.
ಆದರೂ ನಿಮಗೆ ಟಿಕೆಟ್ ನೀಡಲಾಗಿತ್ತು ಎಂದು ನಯವಾಗಿಯೇ ಅವರ ಸೋಲಿನ ಬಗ್ಗೆ ಟಾಂಗ್ ನೀಡಿದ್ದಾರೆ. ಅಯೋಧ್ಯೆಯ ಜನ ನಿಮ್ಮನ್ನು ತಿರಸ್ಕರಿಸಿದ್ದರೂ ಮತ್ತೆ ಮತ್ತೆ ಯಾಕೆ ಚುನಾವಣೆಗೆ ಸ್ಪರ್ಧಿಸಿದಿರಿ, ನೀವು ಸೋಲಲು ಏನು ಕಾರಣ ಎಂದು ತಿಳಿಸುವಿರಾ? ಅಯೋಧ್ಯೆಯಲ್ಲಿ ನಿಮ್ಮ ಸೋಲಿನಿಂದಾಗಿ ನಮ್ಮಂಥ ಬಿಜೆಪಿ ಕಾರ್ಯಕರ್ತರಿಗೆ ಅವಮಾನವಾಗಿದೆ. ರಾಮಮಂದಿರ ಇರುವ ಕ್ಷೇತ್ರದಲ್ಲೇ ಬಿಜೆಪಿ ಸೋತಿದೆ ಎನ್ನುವ ಕುಹಕ ಕೇಳುವಂತಾಗಿದೆ ಎಂದು ಕಟುವಾಗಿ ತಿಳಿಸಿದ್ದು, ಇದರಿಂದಾಗಿ ಪ್ರಧಾನಿ ಮೋದಿಜಿಯವರ ವರ್ಚಸ್ಸಿಗೂ ಧಕ್ಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವರಿಬ್ಬರ ಮಾತುಕತೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಯೋಧ್ಯೆ ಜನರ ವಿರುದ್ಧ ಲಕ್ಷ್ಮಣ ಪಾತ್ರಧಾರಿ ಕಿಡಿ: ರಮಾನಂದ್ ಸಾಗರ್ ಅವರ ರಾಮಾಯಣದಲ್ಲಿ ಲಕ್ಷ್ಮಣನ ಪಾತ್ರದಲ್ಲಿ ಹೆಸರುವಾಸಿಯಾಗಿರುವ ಸುನಿಲ್ ಲಾಹ್ರಿ ಅವರು ಬಿಜೆಪಿಗೆ ಮತ ಹಾಕದೇ ಸೋಲಿಸಿ ಸಮಾಜವಾದಿ ಪಾರ್ಟಿ ಗೆಲ್ಲಿಸಿದ ಅಯೋಧ್ಯೆಯ ಜನರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾತನಾಡಿದ ಲಾಹ್ರಿ, ಪವಿತ್ರ ನಗರದ ಜನರು "ತಮ್ಮ ರಾಜನಿಗೆ ದ್ರೋಹ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು ಮತ್ತು ಅವರನ್ನು "ಸ್ವಾರ್ಥಿಗಳು" ಎಂದು ಕರೆದರು.ಪಕ್ಷದ ನಾಯಕತ್ವದಲ್ಲಿ ಈ ವರ್ಷದ ಜನವರಿಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಯಿತು. ಆದಾಗ್ಯೂ, ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದಾಗ, ಬಿಜೆಪಿಯ ಲಲ್ಲು ಸಿಂಗ್ ಅವರು ದೇವಸ್ಥಾನವಿರುವ ಫೈಜಾಬಾದ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಅವಧೇಶ್ ಪ್ರಸಾದ್ ವಿರುದ್ಧ ಸೋತರು.
ನಾನು ಈಗ 24*7 ರಾಜಕಾರಣಿ, ಸಿನಿಮಾ ಮಾಡೋದನ್ನು ಬಂದ್ ಮಾಡಿದ್ದೇನೆ: ನಿಖಿಲ್ ಕುಮಾರಸ್ವಾಮಿ
ಮೋದಿಗೆ ಅಲ್ಪ ಬಹುಮತ ಆರ್ಥಿಕ ಅಭಿವೃದ್ಧಿಗೆ ಕಷ್ಟ: ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಲ್ಪಮತಕ್ಕೆ ಕುಸಿದಿರುವುದು ಆರ್ಥಿಕ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲು ಕಷ್ಟವಾಗುತ್ತದೆ ಎಂದು ರೇಟಿಂಗ್ ಏಜೆನ್ಸಿಗಳು ಹೇಳಿವೆ. ಅಲ್ಪಮತಗಳಿಂದಾಗಿ ಬಿಜೆಪಿಗೆ ತನ್ನ ಮೈತ್ರಿಪಕ್ಷಗಳ ಮೇಲೆ ಹೆಚ್ಚು ಅವಲಂಬನೆಯಾಗಬೇಕಾಗುತ್ತದೆ. ಹೀಗಾಗಿ ತನ್ನ ಸ್ವಂತ ನಿರ್ಧಾರಗಳನ್ನು ಬದಿಗೊತ್ತಿ, ಮಿತ್ರಪಕ್ಷಗಳ ಒಳಿತಿಗೆ ಕೆಲಸ ಮಾಡಬೇಕಾಗುತ್ತದೆ. ಇದರಿಂದಾಗಿ ಹಿಂದಿನ ಅವಧಿಯ ಆರ್ಥಿಕ ಸುಧಾರಣ ನೀತಿಗಳ ಅನುಷ್ಠಾನ ಮುಳ್ಳಿನ ಹಾದಿಗೆ ಬರಲಿದೆ ಎಂದು ಮೂಡೀಸ್ ರೇಟಿಂಗ್ ಹಾಗೂ ಫಿಟ್ಚ್ ರೇಟಿಂಗ್ ಸಂಸ್ಥೆಗಳು ಹೇಳಿವೆ.ಈ ಸರ್ಕಾರದ ಅವಧಿಯಲ್ಲಿಯೂ ಜಿಡಿಪಿ ಸೇರಿದಂತೆ ವಿವಿಧ ಆರ್ಥಿಕ ಬೆಳವಣಿಗೆಗಳ ನಿರೀಕ್ಷೆಗಳು ಕುಂಠಿತವಾಗುವ ಸಾಧ್ಯತೆಗಳಿವೆ ಎಂದು ಅವು ಹೇಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ