
ಬೆಂಗಳೂರು(ನ.20): ರಾಜ್ಯಾದ್ಯಂತ ಎಂಟು ತಿಂಗಳ ಬಳಿಕ ಪದವಿ (ಅಂತಿಮ ವರ್ಷ) ಹಾಗೂ ಸ್ನಾತಕೋತ್ತರ ತರಗತಿಗಳು ಆರಂಭವಾದ ಬೆನ್ನಲ್ಲೇ ಕೋವಿಡ್ ಆತಂಕವೂ ಹೆಚ್ಚಾಗಿದೆ. ಕಾಲೇಜು ಪುನಾರಂಭಗೊಂಡ ಮೂರನೇ ದಿನವಾದ ಗುರುವಾರ ಹೊಸದಾಗಿ 70 ಮಂದಿ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೊರೋನಾ ದೃಢಪಟ್ಟಿದೆ. ಬೆಂಗಳೂರೊಂದರಲ್ಲೇ 52 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟಾರೆ ರಾಜ್ಯದಲ್ಲಿ ಕಳೆದ ಮೂರು ದಿನಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾದ ವಿದ್ಯಾರ್ಥಿಗಳು, ಸಿಬ್ಬಂದಿ ಸಂಖ್ಯೆ 77ಕ್ಕೇರಿದೆ.
ರಾಜ್ಯಾದ್ಯಂತ ಕೋವಿಡ್ ನಿಯಮಾವಳಿಯೊಂದಿಗೆ ಅಂತಿಮ ವರ್ಷದ ಪದವಿ ಮತ್ತು ಡಿಪ್ಲೊಮಾ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ಮಂಗಳವಾರ ಆರಂಭಗೊಂಡಿದ್ದವು. ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪರೀಕ್ಷೆಗೊಳಪಟ್ಟಬೆಂಗಳೂರಿನ ಇಬ್ಬರು ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿತ್ತು. 2ನೇ ದಿನವಾದ ಬುಧವಾರ ಬೆಂಗಳೂರಿನ ಮೂವರು ಮತ್ತು ದೊಡ್ಡಬಳ್ಳಾಪುರದ ಇಬ್ಬರು ವಿದ್ಯಾರ್ಥಿಗಳು ಸೇರಿ ಒಟ್ಟು ಐದು ಮಂದಿಗೆ ಕೋವಿಡ್ ದೃಢಪಟ್ಟಿತ್ತು.
3 ಜಿಲ್ಲೆಗಳ 150 ವಿದ್ಯಾರ್ಥಿಗಳಿಗೆ ಸೋಂಕು: ಶಾಲೆ ಮುಚ್ಚಲು ಸೂಚನೆ! ..
ಇದೀಗ ಗುರುವಾರ ಒಂದೇ ದಿನ ಈ ಸಂಖ್ಯೆ 77ಕ್ಕೆ ಜಿಗಿದಿದೆ. ಬೆಂಗಳೂರೊಂದರಲ್ಲೇ 52 ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿಗೆ ಕೋವಿಡ್ ದೃಢಪಟ್ಟಿದ್ದರೆ, ಬಳ್ಳಾರಿಯಲ್ಲಿ 7, ರಾಮನಗರ ಜಿಲ್ಲೆಯಲ್ಲಿ ಇಬ್ಬರು ಉಪನ್ಯಾಸಕರು ಮತ್ತು ನಾಲ್ವರು ವಿದ್ಯಾರ್ಥಿಗಳು, ಚಾಮರಾಜನಗರದಲ್ಲಿ ನಾಲ್ವರು, ವಿಜಯಪುರದಲ್ಲಿ ಇಬ್ಬರು ಹಾಗೂ ಚಿತ್ರದುರ್ಗದಲ್ಲಿ ಒಬ್ಬ ವಿದ್ಯಾರ್ಥಿಗೆ ಕೊರೋನಾ ದೃಢಪಟ್ಟಿದೆ. ನೆಮ್ಮದಿಯ ವಿಚಾರವೆಂದರೆ ಇವರಾರಯರೂ ತರಗತಿಗೆ ಹಾಜರಾಗಿಲ್ಲ. ಹೀಗಾಗಿ ತರಗತಿಗೆ ಹಾಜರಾದ ಇತರೆ ವಿದ್ಯಾರ್ಥಿಗಳಿಗೆ ಕೋವಿಡ್ ಹರಡುವ ಆತಂಕ ತಪ್ಪಿದೆ. ಇನ್ನು ಸೋಂಕಿತ ವಿದ್ಯಾರ್ಥಿಗಳನ್ನು ಮನೆಯಲ್ಲೇ ಕ್ವಾರಂಟೈನ್ಗೊಳಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ಹೆಚ್ಚಿನ ವಿದ್ಯಾರ್ಥಿಗಳು ಕೋವಿಡ್ ಟೆಸ್ಟ್ಗೆ ಒಳಗಾಗಿದ್ದು, ಈ ಕುರಿತ ವರದಿ ಇನ್ನಷ್ಟೇ ಬರಬೇಕಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಇನ್ನಷ್ಟುಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬರುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ