ಮಳೆ ಆರ್ಭಟಕ್ಕೆ ಮತ್ತೆ 7 ಜನ ಬಲಿ: ಕೃಷ್ಣಾ ನದಿ ಪ್ರವಾಹಕ್ಕೆ 52 ಸೇತುವೆ ಮುಳುಗಡೆ

By Kannadaprabha NewsFirst Published Jul 20, 2024, 8:23 AM IST
Highlights

ಮಲೆನಾಡು, ಕರಾವಳಿ ಸೇರಿ ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ ಶುಕ್ರವಾರ 7 ಮಂದಿ ಮೃತಪಟ್ಟಿದ್ದಾರೆ. 
 

ಬೆಂಗಳೂರು (ಜು.20): ಮಲೆನಾಡು, ಕರಾವಳಿ ಸೇರಿ ರಾಜ್ಯಾದ್ಯಂತ ಮಳೆಯ ಅಬ್ಬರ ಮುಂದುವರಿದಿದ್ದು, ಮಳೆ ಸಂಬಂಧಿ ಅನಾಹುತಗಳಲ್ಲಿ ಶುಕ್ರವಾರ 7 ಮಂದಿ ಮೃತಪಟ್ಟಿದ್ದಾರೆ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರದಲ್ಲಿ ಮನೆಯ ಮೇಲ್ಬಾವಣಿ ಕುಸಿದು ಮೂವರು, ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿಯಲ್ಲಿ ಶೌಚಾಲಯದ ಗೋಡೆ ಕುಸಿದು ಮಹಿಳೆ, ಮಂಗಳೂರು ಕಲ್ಲಕಲಂಬಿಯಲ್ಲಿ ವಿದ್ಯುತ್‌ ತಂತಿ ಸ್ಪರ್ಶಿಸಿ ವಿದ್ಯಾರ್ಥಿನಿಯೊಬ್ಬಳು ಅಸುನೀಗಿದ್ದಾಳೆ. ಬಂಟ್ವಾಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಕೂಲಿ ಕಾರ್ಮಿಕನೊಬ್ಬ ನೀರಲ್ಲಿ ಕೊಚ್ಚಿ ಹೋಗಿದ್ದರೆ, ಪುಂಜಾಲಕಟ್ಟೆ ಬಳಿ ಲಾರಿ ಪಲ್ಟಿಯಾಗಿ ಕ್ಲೀನರ್ ಮೃತಪಟ್ಟಿದ್ದಾರೆ.

ಇದೇ ವೇಳೆ, ಕೃಷ್ಣಾ ನದಿಯ ಪ್ರವಾಹದಿಂದ ಬೆಳಗಾವಿಜಿಲ್ಲೆಯಲ್ಲಿ 52ಕ್ಕೂಹೆಚ್ಚುಸೇತುವೆಗಳು ಮುಳುಗಡೆಯಾಗಿವೆ. ಕರಾವಳಿ, ಮಲೆನಾಡು ಭಾಗದಲ್ಲಿ ಇನ್ನೆರಡು ದಿನ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳ ಎಲ್ಲಾ ಹಾಸನ ಜಿಲ್ಲೆಯ ಆಲೂರು, ಬೇಲೂರು, ಹಾಸನ, ಹೊಳೆನರಸೀ ಪುರ, ಅರಕಲಗೂಡು ತಾಲೂಕು, ಬೆಳಗಾವಿಯ ಖಾನಾಪುರ, ಶಿವಮೊಗ್ಗದ ಸಾಗರ, ಸೊರಬ, ಹೊಸನಗರ ತಾಲೂಕುಗಳ ಶಾಲಾ- ಕಾಲೇಜುಗಳಿಗೆ ಶನಿವಾರ ರಜೆ ಘೋಷಿಸಲಾಗಿದೆ.

Latest Videos

ಕಲಬುರಗಿ: ಹಿಂದು ಸಂಪ್ರದಾಯದಂತೆ ಮಂಗನ ಅಂತಿಮ ಸಂಸ್ಕಾರ ನಡೆಸಿದ ಗ್ರಾಮಸ್ಥರು

ಮಳೆಗೆ 7 ಸಾವು: ಸವಣೂರು ತಾಲೂಕಿನ ಮಾದಾಪುರದಲ್ಲಿ ಶುಕ್ರವಾರ ಮುಂಜಾನೆ ಮಲ ಗಿದ್ದ ವೇಳೆ ಮನೆಯ ಮೇಲ್ಬಾವಣಿ ಕುಸಿದು ಅವಳಿ ಮಕ್ಕಳು ಹಾಗೂ ಇವರ ಅತ್ತೆ ಮೃತಪಟ್ಟಿ ದ್ದಾರೆ. ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ ೫ ಲಕ್ಷ ಪರಿಹಾರ ಘೋಷಿಸಲಾಗಿದೆ. ಸಂಸದ ಬಸವರಾಜ ಬೊಮ್ಮಾಯಿಯವರು ವೈಯಕ್ತಿಕವಾಗಿ 22 ಲಕ್ಷ ಪರಿಹಾರ ನೀಡಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿಯಲ್ಲಿ ಶೌಚಾಲಯದ ಗೋಡೆ ಕುಸಿದು ಹೇಮಾವತಿ (22) ಎಂಬುವರು ಮೃತಪಟ್ಟಿದ್ದಾರೆ. ಮಂಗಳೂರು ಕಲ್ಲಕಲಂಬಿಯಲ್ಲಿ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಅಶ್ವಿನಿ ಶೆಟ್ಟಿ (21) ಎಂಬುವರು ಅಸುನೀಗಿದ್ದಾರೆ.

ಮನೆಯ ಸಾಕು ನಾಯಿಯೊಂದು ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್‌ ತಂತಿ ಸ್ಪರ್ಶಿಸಿ ಒದ್ದಾಡುತ್ತಿತ್ತು. ಅದನ್ನು ರಕ್ಷಿಸಲು ಹೋದಾಗ ವಿದ್ಯುತ್ ಶಾಕ್‌ಗೆ ಮೃತಪಟ್ಟಿದ್ದಾರೆ. ಬಂಟ್ವಾಳ ತಾಲೂಕಿನ ಇನ್ನಾ ಗ್ರಾಮದಲ್ಲಿ ನದಿ ದಾಟುತ್ತಿದ್ದ ವೇಳೆ ತುಮಕೂರು ಮೂಲದ ಕೂಲಿ ಕಾರ್ಮಿಕ ಆನಂದ್ (45) ಎಂಬುವರು ನೀರಲ್ಲಿ ಕೊಚ್ಚಿ ಹೋಗಿದ್ದಾರೆ. ಬಂಟ್ವಾಳ ಸಮೀಪದ ಪುಂಜಾಲಕಟ್ಟೆ ಮಂದಿರದ ಬಳಿ ಲಾರಿ ಪಲ್ಟಿಯಾಗಿ ಲಾರಿ ಕ್ಲೀನರ್ ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬುವರು ಮೃತಪಟ್ಟಿದ್ದಾರೆ. ಮತ್ತಿಬ್ಬರು ಗಾಯಗೊಂಡಿದ್ದಾರೆ.

ನದಿಗಳಲ್ಲಿ ಪ್ರವಾಹ: ಪಶ್ಚಿಮಘಟ್ಟ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಕೃಷ್ಣಾ ಹಾಗೂ ಅದರ ಉಪನದಿಗಳು ತುಂಬಿ ಹರಿಯುತ್ತಿದ್ದು, ಬೆಳಗಾವಿ ಜಿಲ್ಲೆಯ ವಿವಿಧೆಡೆ 52ಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿವೆ. ಖಾನಾಪುರ ತಾಲೂಕಿನ ಕಸಮಳಗಿಯಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದತುಂಬು ಗರ್ಭಿಣಿ ಅದೃಷ್ಟವಶಾತ್ ಣಾಪಾಯದಿಂದ ಪಾರಾಗಿದ್ದಾರೆ. ಕೊಡಗಿನಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದ 12 ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 

ಕೆಆರ್‌ಎಸ್ ಗೆ ಒಳಹರಿವು ಹೆಚ್ಚಿದ್ದು, ಜಲಾಶಯ ಭರ್ತಿಗೆ ಕೇವಲ 6 (ಗರಿಷ್ಠ 124.80 ) ಅಡಿಗಳಷ್ಟು ಬಾಕಿಯಿದೆ.ಜಲಾಶಯ ದಿಂದ 25 ಸಾವಿರ ಕ್ಯುಸೆಕ್‌ ನೀರನ್ನು ಬಿಡಲಾಗು ತಿದ್ದು ನದಿ ಪಾತ್ರದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.ದಕ್ಷಿಣಕನ್ನಡದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿಯುತ್ತಿದ್ದು, ಕುಕ್ಕೆ ಸುಬ್ರಮಣ್ಯದ ಸ್ನಾನಘಟ್ಟ ಮುಳುಗಡೆಯಾಗಿದೆ. ತುಂಗಾ ನದಿಯ ಪ್ರವಾಹದಿಂದ ಶೃಂಗೇರಿ ಯಲ್ಲಿ ಕಪ್ಪೆ ದೇವಾಲಯ, ಸಂಧ್ಯಾವಂದನಮಂಟಪಜಲಾವೃತಗೊಂಡಿವೆ. ಶಂಕರ ಶೃಂಗೇರಿ ಸಮೀಪದ ಹೊಸದೇವರ ಹತ್ತು ಸಮೀಪ ರಸ್ತೆ ಕುಸಿದು ಎರಡು ಲಾರಿಗಳು ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದಿದ್ದು, ಚಾಲಕರು ಪವಾಡಸದೃಶ ರೀತಿಯಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. 

ಗೂಂಡಾ ವರ್ತನೆ, ಟಾರ್ಗೆಟ್ ರಾಜಕಾರಣ ಕಾಂಗ್ರೆಸ್ ಸಂಸ್ಕೃತಿ: ನಿಖಿಲ್ ಕುಮಾರಸ್ವಾಮಿ

ಕೇರಳದ ವೈನಾಡಿನಲ್ಲಿ ಮಳೆಯಾಗುತ್ತಿದ್ದು, ಕಬಿನಿಯಿಂದ ಕಪಿಲಾನದಿಗೆ 80 ಸಾವಿರ ಕ್ಯುಸೆಕ್ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ.ಇದರಿಂದಾಗಿ ನಂಜನಗೂಡಿನ ಸ್ನಾನಘಟ್ಟ, ಹದಿನಾರು ಕಾಲುಮಂಟಪ ಮುಳುಗಡೆಯಾಗಿವೆ. ನಂಜನಗೂಡಿನಲ್ಲಿ ಸುಮಾರು 100ಕ್ಕೂ ಹೆಚ್ಚಿನ ಮನೆಗಳು ಜಲಾವೃತಗೊಂಡಿವೆ. ಹೆದ್ದಾರಿಗಳು ಬಂದ್: ರಾಜ್ಯದ ಹಲವೆಡೆ ಗುಡ್ಡ ಕುಸಿತ ಕೂಡ ಮುಂದುವರಿದಿದೆ. ಗುಡ್ಡ ಕುಸಿತ ಹಾಗೂ ಪ್ರವಾಹದಿಂದ ಊಟ- ಮೈಸೂರು ಹೆದ್ದಾರಿ, ಕಾರ್ಕಳ, ಮಂಗಳೂರು, ಹೊನ್ನಾ ವರ- ಬೆಂಗಳೂರು, ಕುಮಟಾ- ಸಿದ್ದಾಪುರ, ಕುಮಟಾ-ಹುಬ್ಬಳ್ಳಿ ಹೆದ್ದಾರಿ, ಮಡಿಕೇರಿ- ಚೆಟ್ಟಳ್ಳಿ,ಸುಬ್ರಹ್ಮಣ್ಯ-ಪುತ್ತೂರು, ಕುಕ್ಕೆ-ಮಂಜೇ ಶ್ವರ ರಸ್ತೆಗಳ ಸಂಪರ್ಕ ಬಂದ್ ಆಗಿವೆ.

click me!