Guru Raghavendra Bank: ಒಂದೇ ದಿನ ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ 400 ಕೋಟಿ ಸಂದಾಯ

By Kannadaprabha NewsFirst Published Nov 30, 2021, 7:05 AM IST
Highlights
  •  ಒಂದೇ ದಿನ ಗುರು ರಾಘವೇಂದ್ರ ಬ್ಯಾಂಕ್‌ ಠೇವಣಿದಾರರಿಗೆ 400 ಕೋಟಿ ಸಂದಾಯ
  •  ಡಿ.10ರೊಳಗೆ ಎಲ್ಲರಿಗೂ ಹಣ ಪಾವತಿ - ಸಂಸದ ತೇಜಸ್ವಿ ಸೂರ್ಯ ಮಾಹಿತಿ
     

ನವದೆಹಲಿ(ನ.30):  ಶ್ರೀ ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್‌ನ (Shri Guru Raghavendra sahakari Bank) 33 ಸಾವಿರ ಠೇವಣಿದಾರರಿಗೆ ವಿಮೆ ಹಣ (Insurance Money) ಸಿಗಲಿದೆ ಎಂದು ಸಂಸದ ತೇಜಸ್ವಿ ಸೂರ್ಯ (Tejasvi Surya) ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ರಾಘವೇಂದ್ರ ಬ್ಯಾಂಕ್‌ನ (Bank) ಅಧ್ಯಕ್ಷ ಮತ್ತು ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಕೈಚಳದಿಂದ ಸಾವಿರಾರು ಕೋಟಿ ಮೊತ್ತದ ಹಣ ವಂಚನೆ ನಡೆದಿತ್ತು. ಹೀಗಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬೆಂಗಳೂರಿಗೆ ಐದಾರು ಬಂದಾಗ ಬ್ಯಾಂಕ್‌ನ ಠೇವಣಿದಾರರು ಭೇಟಿಯಾಗಿ ತಮಗಾದ ವಂಚನೆಯ ಬಗ್ಗೆ ಮನವಿ ಸಲ್ಲಿಸಿದ್ದರು ಎಂದು ಹೇಳಿದರು.

ಈ ನಡುವೆ 12,014 ಠೇವಣಿದಾರರಿಗೆ ವಿಮೆ ಹಣ (Money) ಸಿಕ್ಕಿದೆ. ಸೋಮವಾರ ಒಂದೇ ದಿನ ಒಟ್ಟು ರು. 401 ಕೋಟಿಯನ್ನು ಠೇವಣಿದಾರಿಗೆ ನೀಡಲಾಗಿದೆ. ಒಟ್ಟು 33 ಸಾವಿರ ಠೇವಣಿದಾರರಿದ್ದಾರೆ. ಎಲ್ಲರಿಗೂ ಹಣ ಸಂದಾಯ ಆಗಲಿದೆ. ಡಿಸೆಂಬರ್‌ 10ರ ಒಳಗೆ ಎಲ್ಲಾ ಠೇವಣಿದಾರರಿಗೆ ವಿಮೆ ಹಣ ಸಿಗಲಿದೆ ಎಂದು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸರ್ಕಾರವು 1949 ಬ್ಯಾಂಕಿಂಗ್‌  ರೆಗ್ಯುಲೇಶನ್‌ ಆ್ಯಕ್ಟ್ಗೆ ತಿದ್ದುಪಡಿ ಮಾಡಿತು. ಇದರಿಂದ ದಿವಾಳಿಯಾದ ಬ್ಯಾಂಕ್‌ನ ಠೇವಣಿದಾರರಿಗೆ  5 ಲಕ್ಷರು. ವಿಮೆ ಹಣ ದೊರೆಯುವಂತಾಯಿತು. ಈ ಹಿಂದೆ ರು.1 ಲಕ್ಷ ವಿಮೆ ಮಾತ್ರ ನೀಡಲಾಗುತ್ತಿತ್ತು. ಈ ಮೊತ್ತವನ್ನು 5 ಲಕ್ಷಕ್ಕೆ ಕೇಂದ್ರ ಸರ್ಕಾರ ಏರಿಸಿತ್ತು. ಅಲ್ಲದೆ ದಿವಾಳಿಯಾಗಿರುವ ಬ್ಯಾಂಕಿನಲ್ಲಿಟ್ಟಿದ್ದ ಠೇವಣಿದಾರರಿಗೆ 90 ದಿನದಲ್ಲಿ ವಿಮೆ ಹಣ (Insurance Money) ಸಿಗುವಂತಾಗಿದೆ ಎಂದು ಮಾಹಿತಿ ನೀಡಿದರು.

 ರಾಘವೇಂದ್ರ ಬ್ಯಾಂಕ್‌ ಪೂರ್ತಿ ಠೇವಣಿ ಹಿಂತಿರುಗಿಸುವಂತೆ ಆಗ್ರಹಿಸಿ ಪ್ರತಿಭಟನೆ

 ನಗರದ ಶ್ರೀಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ವಂಚನೆ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ವಹಿಸಿ, ಠೇವಣಿದಾರರ ಹಣ ಹಿಂದಿರುಗಿಸಬೇಕು ಎಂದು ಆಗ್ರಹಿಸಿ ಬ್ಯಾಂಕ್‌ನ ಗ್ರಾಹಕರು ಪ್ರತಿಭಟಿಸಿರು (Protest).

ಸೋಮವಾರ ನಗರದ ಮೈಸೂರು ಬ್ಯಾಂಕ್‌ (Mysuru Bank) ವೃತ್ತದಲ್ಲಿ ಬ್ಯಾಂಕಿನ ಷೇರುದಾರರು ಮತ್ತು ಠೇವಣಿದಾರರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಬ್ಯಾಂಕ್‌ನಲ್ಲಿ ಠೇವಣಿ ಹೂಡಿದ್ದ ನೂರಾರು ಜನ ಭಾಗಿಯಾಗಿದ್ದರು. ತಕ್ಷಣ ಠೇವಣಿಯಿಟ್ಟಿರುವ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಬೇಕು ಎಂದು ಆಗ್ರಹಿಸಿದರು. ಅಲ್ಲದೆ, ಬ್ಯಾಂಕ್‌ನ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ವೇದಿಕೆಯ ಮುಖ್ಯ ಪೋಷಕ ಡಾ. ಶಂಕರ ಗುಹಾ ದ್ವಾರಕಾನಾಥ್‌ ಬೆಳ್ಳೂರು, ಕಳೆದ ಒಂದು ವರ್ಷದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೂ ಸರ್ಕಾರ ಇತ್ತ ಗಮನ ಹರಿಸಿಲ್ಲ. ತಕ್ಷಣ ಬ್ಯಾಂಕ್‌ನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು. ಬ್ಯಾಂಕ್‌ನ ಹಣ ಪಡೆದು ವಂಚಕರು ನೆಮ್ಮದಿ ಜೀವನ ನಡೆಸುತ್ತಿದ್ದು, ಹಣ ಕಳೆದುಕೊಂಡವರು ಪರದಾಡುತ್ತಿದ್ದಾರೆ. ಈಗಾಗಲೇ ಮೂವರು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ (Karnataka govt) ಸಿಐಡಿ ಮೂಲಕ ತನಿಖೆ ನಡೆಸುತ್ತಿದೆ. ಆದರೆ, ಪ್ರಭಾವಿಗಳಾಗಿರುವ ಆರೋಪಿಗಳು ತನಿಖೆಯ ಹಾದಿ ತಪ್ಪಿಸುತ್ತಿದ್ದಾರೆ. ಠೇವಣಿದಾರರಿಗೆ ಸರಿಯಾದ ನ್ಯಾಯ ದೊರಕಿಸುವುದರಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಫಲವಾಗಿವೆ. ಹೀಗಾಗಿ ಈ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು. ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಜೊತೆಗೆ, ಗುರು ರಾಘವೇಂದ್ರ ಕೋ-ಆಪರೇಟಿವ್‌ ಬ್ಯಾಂಕ್‌, ಗುರು ಸಾರ್ವಭೌಮ ಕ್ರಿಕೆಟ್‌ ಕೋ-ಆಪರೇಟಿವ್‌ ಸೊಸೈಟಿ ಹಾಗೂ ವಸಿಷ್ಠ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿ ಈ ಮೂರು ಸಂಸ್ಥೆಗಳಿಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಾಜಿ ಅಧ್ಯಕ್ಷರು ಮತ್ತು ಮಹಾಸಭಾದ ಮಾಜಿಗಳು ನೇರಾನೇರ ಸಂಪರ್ಕದಲ್ಲಿದ್ದು, ಈ ಕುರಿತು ತನಿಖೆ ನಡೆಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು.

click me!