
ಬೆಂಗಳೂರು (ಜು.21) : ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಹೊಂಚು ಹಾಕಿ ಬಂಧನಕ್ಕೊಳಗಾದ ಐವರು ಲಷ್ಕರ್-ಎ-ತೊಯ್ಬಾ ಶಂಕಿತ ಉಗ್ರರ ಪೈಕಿ ಒಬ್ಬ ಆರೋಪಿಯ ಮನೆಯಲ್ಲಿ 4 ಜೀವಂತ ಹ್ಯಾಂಡ್ ಗ್ರೆನೇಡ್ಗಳು ಪತ್ತೆಯಾಗಿವೆ. ತನ್ಮೂಲಕ ಶಂಕಿತರು ಭಾರಿ ಪ್ರಮಾಣದ ದಾಳಿಯನ್ನೇ ನಡೆಸಲು ಸಿದ್ಧರಾಗುತ್ತಿದ್ದರು ಎಂಬುದು ಖಚಿತಪಟ್ಟಿದೆ.
ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ತನ್ನ ಸಹಚರರಿಗೆ ಶಂಕಿತ ಉಗ್ರ ಮಹಮ್ಮದ್ ಜುನೈದ್(Muhammad Junaid) ಕೇವಲ ತರಬೇತಿ ಹಾಗೂ ಪಿಸ್ತೂಲ್ ಮಾತ್ರವಲ್ಲದೆ ಗ್ರೆನೇಡ್ಗಳನ್ನೂ ಪೂರೈಸಿದ್ದ. ಅವುಗಳನ್ನು ಬೆಂಗಳೂರಿನ ಕೊಡಿಗೇಹಳ್ಳಿ ಮುಖ್ಯರಸ್ತೆಯ ಭದ್ರಪ್ಪ ಲೇಔಟ್ನಲ್ಲಿರುವ ಬಂಧಿತ ಶಂಕಿತ ಉಗ್ರ ಜಾಹೀದ್ ತಬ್ರೇಜ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಮನೆ ಮೇಲೆ ದಾಳಿ ನಡೆಸಿದಾಗ ಅವು ಸಿಸಿಬಿ ಪೊಲೀಸರಿಗೆ ಲಭಿಸಿವೆ.
ಜಾಹೀದ್ ಮನೆಗೆ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ತನ್ನ ಸಂಪರ್ಕ ಜಾಲದ ಮೂಲಕ ಈ ಗ್ರೆನೇಡ್ಗಳನ್ನು ಪೂರೈಸಿದ್ದ ಎಂದು ನಗರ ಜಂಟಿ ಪೊಲೀಸ್ ಆಯುಕ್ತ (ಅಪರಾಧ) ಡಾ.ಎಸ್.ಡಿ.ಶರಣಪ್ಪ ಹೇಳಿದ್ದಾರೆ.
ಶಂಕಿತ ಉಗ್ರರು ಸಿಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದು ಹೇಗೆ ?: ಆಶ್ರಯ ಕೊಟ್ಟವರಿಗೆ ಶುರುವಾಯ್ತಾ ಪಿಕಲಾಟ ?
ಹೆಬ್ಬಾಳ ಸಮೀಪದ ಸುಲ್ತಾನ್ ಪಾಳ್ಯದ ಸೈಯದ್ ಸುಹೇಲ್ ಖಾನ್, ಪುಲಕೇಶಿ ನಗರದ ಮೊಹಮದ್ ಫೈಜಲ್ ರಬ್ಬಾನಿ, ಕೊಡಿಗೇಹಳ್ಳಿಯ ಮಹಮದ್ ಉಮರ್, ಜಾಹೀದ್ ತಬ್ರೇಜ್ ಹಾಗೂ ಆರ್.ಟಿ.ನಗರದ ಸೈಯದ್ ಮುದಾಸೀರ್ ಪಾಷನನ್ನು ಬುಧವಾರ ಬಂಧಿಸಲಾಗಿತ್ತು. ಆರೋಪಿಗಳಿಂದ 7 ನಾಡ ಪಿಸ್ತೂಲ್ಗಳು, 45 ಜೀವಂತ ಗುಂಡುಗಳು, ವಾಕಿಟಾಕಿ ಸೆಟ್ಸ್, ಡ್ರಾಗರ್ ಹಾಗೂ 12 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿತ್ತು. ಈಗ ಮುಂದುವರೆದ ತನಿಖೆಯಲ್ಲಿ ಶಂಕಿತ ಉಗ್ರನ ಮನೆಯಲ್ಲಿ 4 ಗ್ರೆನೇಡ್ಗಳನ್ನು ಜಪ್ತಿ ಮಾಡಲಾಗಿದೆ.
ಮನೆಯ ಅಲ್ಮೇರಾದಲ್ಲಿ ಗ್ರೆನೇಡ್ಗಳು:
ಬೆಂಗಳೂರು ನಗರದಲ್ಲಿ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ್ದಾಗ ಸುಲ್ತಾನ್ ಪಾಳ್ಯದಲ್ಲಿ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಹೆಚ್ಚಿನ ತನಿಖೆ ಸಲುವಾಗಿ 7 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆಗ ಕೊಡಿಗೇಹಳ್ಳಿ ಮುಖ್ಯರಸ್ತೆಯ ಭದ್ರಪ್ಪ ಲೇಔಟ್ನಲ್ಲಿರುವ 5ನೇ ಆರೋಪಿ ಮನೆಯಲ್ಲಿ ಗ್ರೆನೇಡ್ಗಳನ್ನು ಅಡಗಿಸಿಟ್ಟಿದ್ದ ಸಂಗತಿ ಗೊತ್ತಾಯಿತು. ಕೂಡಲೇ ಆ ಮನೆ ಮೇಲೆ ಬಾಂಬ್ ನಿಷ್ಕಿ್ರಯ ದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ತಜ್ಞರ ಜೊತೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಆಲ್ಮೇರಾದ ಲಾಕರ್ನಲ್ಲಿ ನಾಲ್ಕು ಜೀವಂತ ಗ್ರೆನೇಡ್ಗಳು ಪತ್ತೆಯಾಗಿವೆ. ಇವುಗಳನ್ನು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಜುನೈದ್ ಪೂರೈಸಿರುವುದು ಗೊತ್ತಾಗಿದೆ. ತಾನು ಹೇಳಿದಾಗ ಬಳಸುವಂತೆ ಜಾಹೀದ್ಗೆ ಜುನೈದ್ ಸೂಚನೆ ನೀಡಿದ್ದ. ಶಂಕಿತ ಉಗ್ರರಿಗೆ ಪಿಸ್ತೂಲ್, ಗುಂಡುಗಳು ಹಾಗೂ ಗ್ರೆನೇಡ್ಗಳನ್ನು ಯಾವ ಮಾರ್ಗದಲ್ಲಿ ಪೂರೈಸಲಾಗಿದೆ ಎಂಬ ಬಗ್ಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'ಕಾಂಗ್ರೆಸ್ ಬಂದ ಮೇಲೆ ಕೆಟ್ಟಹುಳುಗಳು ಹೊರಕ್ಕೆ'; ಶಂಕಿತ ಉಗ್ರರ ವಿಚಾರಕ್ಕೆ ಮುತಾಲಿಕ್ ಕಿಡಿ
ಶಸ್ತ್ರಾಸ್ತ್ರ ಮತ್ತು ಗ್ರೆನೇಡ್ಗಳು ಯಾವ ಸಮಯದಲ್ಲಿ ಪೂರೈಕೆಯಾಗಿವೆ ಎಂಬ ಬಗ್ಗೆ ಆರೋಪಿಗಳ ವಿಚಾರಣೆ ವೇಳೆ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ತನಿಖೆ ಮುಂದುವರೆದಿದ್ದು, ಪೂರೈಕೆದಾರರ ಜಾಲ ಶೀಘ್ರವೇ ಪತ್ತೆಯಾಗಲಿದೆ.
- ಡಾ.ಎಸ್.ಡಿ.ಶರಣಪ್ಪ, ಜಂಟಿ ಆಯುಕ್ತ (ಅಪರಾಧ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ