ಕರ್ನಾಟಕದಲ್ಲೂ ಕೋವಿಡ್‌ ಕೇಸ್‌ ಹೆಚ್ಚಳ: 3 ತಿಂಗಳ ಬಳಿಕ 301 ಮಂದಿಗೆ ವೈರಸ್‌

By Govindaraj SFirst Published Jun 6, 2022, 3:25 AM IST
Highlights

ಮೂರು ತಿಂಗಳ ಬಳಿಕ ರಾಜ್ಯದಲ್ಲಿ ಕೋವಿಡ್‌-19 ದೈನಂದಿನ ಪ್ರಕರಣಗಳು ಮುನ್ನೂರರ ಗಡಿ ದಾಟಿವೆ. ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲೂ ಸೋಂಕಿತರ ಸಂಖ್ಯೆಯಲ್ಲಿನ ಕ್ಷಿಪ್ರ ಏರಿಕೆ ಆತಂಕಕ್ಕೆ ಕಾರಣವಾಗಿದೆ.

ಬೆಂಗಳೂರು (ಜೂ.06): ಮೂರು ತಿಂಗಳ ಬಳಿಕ ರಾಜ್ಯದಲ್ಲಿ ಕೋವಿಡ್‌-19 ದೈನಂದಿನ ಪ್ರಕರಣಗಳು ಮುನ್ನೂರರ ಗಡಿ ದಾಟಿವೆ. ದೇಶದ ಅನೇಕ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿರುವ ಸಂದರ್ಭದಲ್ಲೇ ರಾಜ್ಯದಲ್ಲೂ ಸೋಂಕಿತರ ಸಂಖ್ಯೆಯಲ್ಲಿನ ಕ್ಷಿಪ್ರ ಏರಿಕೆ ಆತಂಕಕ್ಕೆ ಕಾರಣವಾಗಿದೆ. ಭಾನುವಾರ 301 ಮಂದಿಯಲ್ಲಿ ಸೋಂಕು ಖಚಿತವಾಗಿದೆ. 21,113 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ.1.40 ಪಾಸಿಟಿವಿಟಿ ದರ ದಾಖಲಾಗಿದೆ. 146 ಮಂದಿ ಚೇತರಿಸಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ 72 ವರ್ಷದ ಮಹಿಳೆ ಮರಣವನ್ನಪ್ಪಿದ್ದಾರೆ. 

ಮಾ.3 ರಂದು 382 ಮಂದಿಯಲ್ಲಿ ಸೋಂಕು ದೃಢಪಟ್ಟ95 ದಿನಗಳ ಬಳಿಕ ಸೋಂಕಿತರ ಸಂಖ್ಯೆ ತ್ರಿಶತಕ ದಾಟಿದೆ. ಇದರಲ್ಲಿ ಬೆಂಗಳೂರು ನಗರವೊಂದರಲ್ಲೇ 291 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಉಳಿದಂತೆ ಮೈಸೂರು 3, ದಕ್ಷಿಣ ಕನ್ನಡ 2, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಶಿವಮೊಗ್ಗ ಮತ್ತು ಉಡುಪಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 39.53 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 39.10 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 2,414 ಸಕ್ರಿಯ ಪ್ರಕರಣಗಳಿವೆ. 40,066 ಮಂದಿ ಮರಣವನ್ನಪ್ಪಿದ್ದಾರೆ.

Covid 19 ಬಾಲಿವುಡ್‌ಗೆ ಶುರುವಾಯ್ತು ಕೊರೋನಾ ಕಾಟ, ಶಾರುಖ್ ಖಾನ್‌ಗೆ ಕೋವಿಡ್ ಪಾಸಿಟೀವ್!

ಲಸಿಕೆ ಅಭಿಯಾನ: ಭಾನುವಾರ 6,426 ಮಂದಿ ಕೋವಿಡ್‌-19 ಲಸಿಕೆ ಪಡೆದಿದ್ದಾರೆ. 270 ಮಂದಿ ಮೊದಲ ಡೋಸ್‌, 1,669 ಮಂದಿ ಎರಡನೇ ಡೋಸ್‌ ಮತ್ತು 7,363 ಮಂದಿ ಮೂರನೇ ಡೋಸ್‌ ಲಸಿಕೆ ಸ್ವೀಕರಿಸಿದ್ದಾರೆ. ಈವರೆಗೆ ಒಟ್ಟು 10.93 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಭಾನುವಾರ 3,703 ಮಂದಿ ಮೊದಲ ಡೋಸ್‌, 9,641 ಮಂದಿ ಎರಡನೇ ಡೋಸ್‌ ಮತ್ತು 11,199 ಮಂದಿ ಮುನ್ನೆಚ್ಚರಿಕೆ ಡೋಸ್‌ ಪಡೆದಿದ್ದಾರೆ. ಒಟ್ಟು 1.92 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.

ಬೆಂಗಳೂರಿನಲ್ಲಿ 300 ಗಡಿ ಸಮೀಪ ಹೋದ ಕೊರೋನಾ ಕೇಸ್‌: ನಗರದಲ್ಲಿ 291 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಫೆ.26 ರಂದು 345 ಮಂದಿ ಸೋಂಕಿತರು ಪತ್ತೆಯಾದ ಬಳಿಕ ಮೊದಲ ಬಾರಿಗೆ 300ರ ಅಸುಪಾಸಿನಲ್ಲಿ ಹೊಸ ಪ್ರಕರಣ ವರದಿಯಾಗಿದೆ. ಮೇ 18ರ ಬಳಿಕ ಕೋವಿಡ್‌ ಸೋಂಕಿತರೊಬ್ಬರು ಮೃತಪಟ್ಟಿದ್ದಾರೆ. ನಗರದ 72 ವರ್ಷದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯೊಂದರಲ್ಲಿ ಸಾವನ್ನಪ್ಪಿದ್ದಾರೆ. 142 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 2,294 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 4 ಮಂದಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 17 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ದಾಖಲಾಗಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ. 14,279 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಪಾಸಿಟಿವಿಟಿ ದರ ಶೇ. 1.62 ದಾಖಲಾಗಿದೆ. ನಗರದಲ್ಲಿ 12 ಕ್ಲಸ್ಟರ್‌ಗಳಿದ್ದು ಇವೆಲ್ಲವೂ ಮಹದೇವಪುರ ವಲಯದಲ್ಲಿವೆ. ಉಳಿದ ಏಳು ವಲಯಗಳಲ್ಲಿ ಕ್ಲಸ್ಟರ್‌ಗಳಿಲ್ಲ.

Covid cases ಭಾರತದಲ್ಲಿ ಕೋವಿಡ್ 4ನೇ ಅಲೆ ಭೀತಿ, ಒಂದೊಂದೆ ರಾಜ್ಯದಲ್ಲಿ ಕಠಿಣ ನಿರ್ಬಂಧ ಜಾರಿ!

ಕರ್ನಾಟಕದಲ್ಲಿ ಬೆಂಗಳೂರು ಕ್ಲಸ್ಟರ್‌: ಕೇಂದ್ರ ಸರ್ಕಾರಕ್ಕೆ ರಾಜ್ಯಗಳು ಸೋಂಕು ಹೆಚ್ಚುತ್ತಿರುವ ಜಿಲ್ಲೆಗಳ ಮಾಹಿತಿ ನೀಡಿವೆ. ಇದರಲ್ಲಿ ಕೇರಳದ 11 ಜಿಲ್ಲೆಗಳು, ತಮಿಳುನಾಡಿನ 2 ಜಿಲ್ಲೆಗಳು, ಮಹಾರಾಷ್ಟ್ರದ 6 ಜಿಲ್ಲೆಗಳು, ತೆಲಂಗಾಣದ 1 ಜಿಲ್ಲೆ ಹಾಗೂ ಕರ್ನಾಟಕದ 1 ಜಿಲ್ಲೆ (ಬೆಂಗಳೂರು ನಗರ ಜಿಲ್ಲೆ) ಸೇರಿವೆ. ಈ ಜಿಲ್ಲೆಗಳಲ್ಲಿ ಕೋವಿಡ್‌ ಪ್ರಕರಣ ಹಾಗೂ ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಹೊಸ ಕೋವಿಡ್‌ ಕ್ಲಸ್ಟರ್‌ಗಳಾಗಿ ಮಾರ್ಪಟ್ಟಿವೆ.

click me!