ಬಿಸಿಲಿನ ತಾಪ, ಕುಡಿಯುವ ನೀರು ಸಿಗದೆ ಕನಕಪುರದಲ್ಲಿ 2 ಕಾಡಾನೆಗಳ ಸಾವು

By Kannadaprabha NewsFirst Published Apr 8, 2024, 7:23 AM IST
Highlights

ಪ್ರತ್ಯೇಕ ಘಟನೆಯಲ್ಲಿ ಎರಡು ಕಾಡಾನೆಗಳ ಶವ ಪತ್ತೆಯಾಗಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ, ಕಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುವನಾಥ ಗ್ರಾಮದ ಸಮೀಪ ಅಭಯಾರಣ್ಯದ ಬಳಿ ಸುಮಾರು 30 ವರ್ಷದ ಆನೆ ಸಾವನ್ನಪ್ಪಿದೆ. 

ಕನಕಪುರ (ಏ.08): ಪ್ರತ್ಯೇಕ ಘಟನೆಯಲ್ಲಿ ಎರಡು ಕಾಡಾನೆಗಳ ಶವ ಪತ್ತೆಯಾಗಿವೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ, ಕಳಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಲುವನಾಥ ಗ್ರಾಮದ ಸಮೀಪ ಅಭಯಾರಣ್ಯದ ಬಳಿ ಸುಮಾರು 30 ವರ್ಷದ ಆನೆ ಸಾವನ್ನಪ್ಪಿದೆ. ಇನ್ನು ಬೆಟ್ಟಹಳ್ಳಿ ಬೀಟ್‌ನಲ್ಲಿ 14 ವರ್ಷದ ಕಾಡಾನೆ ಬಿಸಿಲಿನ ತಾಪಕ್ಕೆ ಬಲಿಯಾಗಿದೆ. ಗಂಡಾನೆ ಆಹಾರ ದೊರೆಯದೆ ಅತಿಯಾದ ಮಾವಿನ ಕಾಯಿ ತಿಂದು ಕುಡಿಯಲು ನೀರು ಸಿಗದ ಕಾರಣ ದಾಹಕ್ಕೆ ಒಳಗಾಗಿ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. 

ಎರಡು ಕಾಡಾನೆಗಳು ಆಹಾರದ ಕೊರತೆ ಮತ್ತು ಬಿಸಿಲಿನ ತಾಪಕ್ಕೆ ಬಲಿಯಾಗಿವೆ. ಬೆಟ್ಟಹಳ್ಳಿ ಬೀಟಲ್ಲಿ ಮೃತಪಟ್ಟ ಆನೆಗೆ ನಿತ್ರಾಣವಾಗಿದ್ದರಿಂದ ಅದಕ್ಕೆ ವೈದ್ಯಕೀಯ ಚಿಕಿತ್ಸೆ ನೀಡಿ ಕಾಡಿಗೆ ಅಟ್ಟಲಾಗಿತ್ತು. ಆದರೆ ಕಾಡಂಚಿನಲ್ಲಿ ಈ ಆನೆ ಮೃತಪಟ್ಟಿದೆ. ಯಲುವನಾಥ ಬಳಿ ದೊರೆತ ಕಾಡಾನೆಗೆ ಆಹಾರ ಸಿಗದೆ ನಿತ್ರಾಣಗೊಂಡಿತ್ತು, ಕಾಡಿನಲ್ಲಿ ಎರಡು ಕಾಡಾನೆಗಳ ನಡುವೆ ಕಾಳಗ ನಡೆದು ಮೃತಪಟ್ಟ ಆನೆಗೆ ರಕ್ತ ಹೆಪ್ಪುಗಟ್ಟಿತ್ತು ಎನ್ನಲಾಗಿದೆ, ಇದೂ ಸಹ ಸಾವಿಗೆ ಕಾರಣ ಎಂದು ತಿಳಿದುಬಂದಿದೆ.

ಭ್ರಷ್ಟರ ರಕ್ಷಣೆಗೆ ತನಿಖಾ ಸಂಸ್ಥೆಗಳ ಮೇಲೆ ದಾಳಿ: ಪ್ರಧಾನಿ ಮೋದಿ ಕಿಡಿ

ರೈತನ ತುಳಿದು ಕೊಂದ ಕಾಡಾನೆ: ತೋಟಕ್ಕೆ ಮೋಟಾರ್ ಚಲಾಯಿಸಲು ಸ್ಕೂಟಿಯಲ್ಲಿ ಹೋಗುತ್ತಿದ್ದ ರೈತನನ್ನು ಎದುರಿನಿಂದ ಬಂದ ಕಾಡಾನೆ ತುಳಿದು ಸಾಯಿಸಿದ ಘಟನೆ ಭಾನುವಾರ ಬೆಳಗ್ಗೆ ಹೊಸಗುತ್ತಿ ಗ್ರಾಮದಲ್ಲಿ ನಡೆದಿದೆ. ಹೊಸಗುತ್ತಿ ಗ್ರಾಮದ ಎಚ್.ಆರ್.ಜಗದೀಶ್ ಅಲಿಯಾಸ್ ಕಾಂತ (49) ಕಾಡಾನೆ ದಾಳಿಗೆ ಬಲಿಯಾದ ದುರ್ದೈವಿ. ಭಾನುವಾರ ಬೆಳಗ್ಗೆ 6.15ರ ಸುಮಾರಿಗೆ ಜಗದೀಶ್, ತಮ್ಮ ಮನೆಯಿಂದ ಸ್ಕೂಟಿಯಲ್ಲಿ ಹೊಸಗುತ್ತಿ-ಹೊನ್ನೆಕೊಪ್ಪಲು-ಮುಳ್ಳೂರು ಕಡೆಗೆ ಹೋಗುವ ರಸ್ತೆ ಬದಿಯಲ್ಲಿರುವ ತನ್ನ ಕಾಫಿತೋಟಕ್ಕೆ ನೀರು ಹಾಯಿಸುವ ಸಲುವಾಗಿ ಮೋಟರ್ ಆನ್ ಮಾಡಲು ಹೋಗುತ್ತಿದ್ದರು. 

ತೋಟದ ಬಳಿ ಸ್ಕೂಟರ್ ನಿಲ್ಲಿಸುತ್ತಿದ್ದ ವೇಳೆ ಎದುರಿನಿಂದ ರಸ್ತೆಯಲ್ಲಿ ಬರುತ್ತಿದ್ದ ಕಾಡಾನೆಯನ್ನು ಕಂಡು ಗಾಬರಿಗೊಂಡ ಜಗದೀಶ್, ಸ್ಕೂಟರ್ ಅಲ್ಲೇ ಬಿಟ್ಟು ರಸ್ತೆಯಲ್ಲಿ ಓಡತೊಡಗಿದರು. ರಸ್ತೆಯ ಎರಡೂ ಬದಿಗಳಲ್ಲಿ ತೋಟಗಳಿದ್ದ ಕಾರಣದಿಂದ ಜಗದೀಶ್ ಹೆಚ್ಚು ದೂರ ಓಡಲು ಸಾಧ್ಯವಾಗಲಿಲ್ಲ. ಸುಮಾರು 40 ಅಡಿಯಷ್ಟು ಅಂತರದಲ್ಲಿ ಜಗದೀಶ್ ಅವರನ್ನು ಅಟ್ಟಾಡಿಸಿಕೊಂಡು ಬರುತ್ತಿದ್ದ ಕಾಡಾನೆ, ಸೊಂಡಿಲಿನಿಂದ ಹಿಡಿದು ನೆಲಕ್ಕೆ ಅಪ್ಪಳಿಸಿ ಜಗದೀಶ್ ಅವರ ತೊಡೆಯನ್ನು ತುಳಿದು ಹಾಕಿದೆ. ಕಾಡಾನೆ ದಾಳಿಯಿಂದ ಜಗದೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಗದೀಶ್ ಅವರನ್ನು ತುಳಿದು ಸಾಯಿಸಿದ ಕಾಡಾನೆ ಪಕ್ಕದ ತೋಟದೊಳಗೆ ಓಡಿ ಹೋಗಿದೆ ಎಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ಹೇಳಿದರು. 

ಉಚಿತ ವಿದ್ಯುತ್‌ನಿಂದ ಸಾಲದಲ್ಲಿ ಸಿಲುಕುತ್ತೀರಿ: ರಾಜ್ಯಗಳಿಗೆ ಕೇಂದ್ರ ಸರ್ಕಾರದ ಎಚ್ಚರಿಕೆ

ಈ ಕಾಡಾನೆ ಬೆಳಗ್ಗೆ 6 ಗಂಟೆ ಸುಮಾರಿಗೆ ಹೊನ್ನೆಕೊಪ್ಪಲು ಬಳಿ ಕಾಣಿಸಿಕೊಂಡಿದನ್ನು ಗಮನಿಸಿದ ಗ್ರಾಮಸ್ಥರು, ಕಾಡಾನೆಯನ್ನು ಓಡಿಸಿದ್ದಾರೆ. ಇದೇ ಕಾಡಾನೆ ರಸ್ತೆಯಲ್ಲಿ ಸಂಚರಿಸುತಿತ್ತು ಎಂದು ಸ್ಥಳೀಯರು ಹೇಳಿದರು.  ಕಾಡಾನೆ ದಾಳಿಯ ಬಗ್ಗೆ ಸುದ್ದಿ ತಿಳಿದ ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರು, ರೈತರು ತಂಡೋಪ ತಂಡವಾಗಿ ಸ್ಥಳಕ್ಕೆ ಬಂದು ಜಮಾಯಿಸಿದರು. ಮಾಹಿತಿ ತಿಳಿದ ಶನಿವಾರಸಂತೆ ಆರ್‌ಎಫ್‍ಒ ಗಾನಶ್ರೀ, ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥರು ಅರಣ್ಯ ಇಲಾಖೆ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.

click me!