ಹೊರಗುತ್ತಿಗೆ ನೌಕರರಿಗೂ ಕಾಯಮಾತಿ ಭಾಗ್ಯ..!

By Kannadaprabha NewsFirst Published Sep 24, 2023, 12:30 AM IST
Highlights

ಸುಪ್ರೀಂ ಕೋರ್ಟಿನವರೆಗೆ ಹೋರಾಟ ಮಾಡಿ 92500 ಜನ ಸರ್ಕಾರಿ ದಿನಗೂಲಿ ನೌಕರರ ಸೇವೆಯನ್ನು ಕಾಯಂ ಮಾಡಿಸಿರುವ ಡಾ.ಕೆ.ಎಸ್.ಶರ್ಮಾ ನೇತೃತ್ವದ "ಕರ್ನಾಟಕ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ" ಇದೀಗ ಹೊರಗುತ್ತಿಗೆ ನೌಕರರ ಬೆನ್ನಿಗೆ ನಿಂತು ಈ ಹೊಸ ದಾಖಲೆ ಬರೆದಿದೆ.

ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ(ಸೆ.24):  ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರ (ಆರ್ ಅಂಡ್ ಆರ್)ಗಳಲ್ಲಿ ಕಳೆದ ಎರಡು ದಶಕಗಳಿಂದ ಹೊರಗುತ್ತಿಗೆ (out source) ನೌಕರರಾಗಿ ಕೆಲಸ ಮಾಡುತ್ತಿದ್ದ 137 ಜನರ ಸೇವೆಯನ್ನು ಕಾಯಂಗೊಳಿಸಿ ವಿಜಯಪುರ ಜಿಲ್ಲಾ ಕಾರ್ಮಿಕ ನ್ಯಾಯಾಲಯ ತೀರ್ಪು ನೀಡಿದೆ.

ಸರ್ಕಾರಿ ದಿನಗೂಲಿ ನೌಕರರಂತೆ, ಹೊರಗುತ್ತಿಗೆ ನೌಕರರ ಸೇವೆಯೂ ಕಾಯಂ ಆಗುತ್ತಿರುವುದು ದೇಶದಲ್ಲಿ ಇದೇ ಮೊದಲು. ಈ ತೀರ್ಪು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಲ್ಲಿ ಹೊಸ ಆಶಾಕಿರಣವಾಗಿದೆ.

ಸಾರಿಗೆ ಇಲಾಖೆ 13 ಸಾವಿರ ಉದ್ಯೋಗ ನೇಮಕಾತಿಗೆ ಶೀಘ್ರ ಚಾಲನೆ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಸುಪ್ರೀಂ ಕೋರ್ಟಿನವರೆಗೆ ಹೋರಾಟ ಮಾಡಿ 92500 ಜನ ಸರ್ಕಾರಿ ದಿನಗೂಲಿ ನೌಕರರ ಸೇವೆಯನ್ನು ಕಾಯಂ ಮಾಡಿಸಿರುವ ಡಾ.ಕೆ.ಎಸ್.ಶರ್ಮಾ ನೇತೃತ್ವದ "ಕರ್ನಾಟಕ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ" ಇದೀಗ ಹೊರಗುತ್ತಿಗೆ ನೌಕರರ ಬೆನ್ನಿಗೆ ನಿಂತು ಈ ಹೊಸ ದಾಖಲೆ ಬರೆದಿದೆ.

ಸಂತ್ರಸ್ತರ ಜತೆ ಅತಂತ್ರರು:

ರಾಷ್ಟ್ರೀಯ ಜಲಸಂಪತ್ತಿಗಾಗಿ (ಆಲಮಟ್ಟಿ ಅಣೆ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ) ತಮ್ಮ ಬದುಕನ್ನೇ ತ್ಯಾಗ ಮಾಡಿದ ಸಂತ್ರಸ್ತರಿಗೆ ಸರ್ಕಾರ ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೋಲಾರ, ಜಮಖಂಡಿ, ಬಾಗಲಕೋಟೆ, ಬೀಳಗಿ, ಮುಧೊಳ ಉಪವಿಭಾಗ ಮತ್ತು ಜಮಖಂಡಿ, ಆಲಮಟ್ಟಿ ವಿಭಾಗಗಳಲ್ಲಿ ಅಗತ್ಯಕ್ಕೆ ಅನುಸಾರವಾಗಿ ಸುಮಾರು 105 ಪುನರ್ವಸತಿ (ಆರ್ ಅಂಡ್ ಆರ್) ಕೇಂದ್ರಗಳನ್ನು ತೆರೆದಿದೆ.

ಈ ಪುನರ್ವಸತಿ ಕೇಂದ್ರ ಮತ್ತು ಕೂಡಲ ಸಂಗಮ ಪ್ರಾಧಿಕಾರದಲ್ಲಿ ಬೀದಿ ದೀಪ ನಿರ್ವಹಣೆ, ಕುಡಿಯುವ ನೀರು ಸರಬರಾಜು, ಬೀದಿ ಗುಡಿಸುವುದು, ಉದ್ಯಾನ ನಿರ್ವಹಣೆ, ಕಾವಲುಗಾರ ಇತ್ಯಾದಿ ಸಣ್ಣ ಸಣ್ಣ ಹುದ್ದೆಗಳಲ್ಲಿ ಸುಮಾರು 241 ಜನ ಕೆಲಸ ಮಾಡುತ್ತಿದ್ದರು.

2002ರಲ್ಲಿ ಇವರನ್ನು ನೇರವಾಗಿ ದಿನಗೂಲಿಗೆ ನೇಮಿಸಿಕೊಂಡಿದ್ದ ಜಲಸಂಪನ್ಮೂಲ ಇಲಾಖೆ ಸುಮಾರು 11 ವರ್ಷಗಳ ಬಳಿಕ, ಅಂದರೆ 2013ರಲ್ಲಿ ಏಜನ್ಸಿಗಳ ಮೂಲಕ ಹೊರಗುತ್ತಿಗೆ ನೌಕರರನ್ನಾಗಿ ಪಡೆಯಿತು. ಧಾರವಾಡದ ಪವನ ಸೆಕ್ರಟರಿ, ಹುಬ್ಬಳ್ಳಿಯ ಎಸ್.ಎಂ.ಸೆಕ್ರಟರಿ, ಗೋಕಾಕದ ಲಕ್ಷ್ಮೀ ಸೆಕ್ರಟರಿ ಮುಂತಾದ ಏಜನ್ಸಿಗಳ ಮೂಲಕ ಒಂದೊಂದು ವರ್ಷ ಒಂದೊಂದು ಏಜನ್ಸಿಗೆ ಬದಲಾಯಿಸುತ್ತಿತ್ತು. ಹಾಗಾಗಿ ಸಂತ್ರಸ್ತರ ಜತೆ ಅತಂತ್ರರು ಎನ್ನುವ ಪರಿಸ್ಥಿತಿ ಇವರದಾಗಿತ್ತು.

132 ಪುಟಗಳ ತೀರ್ಪು:

ಏಜನ್ಸಿಗಳು ಕೊಟ್ಟದ್ದೇ ಸಂಬಳ, ಜೋರು ಮಾಡಿದರೆ ಕೆಲಸವೂ ಇಲ್ಲ. ಎರಡು ದಶಕ ಕಳೆದರೂ ಅತಂತ್ರತೆಯಲ್ಲೇ ಬದುಕು ಸಾಗಿಸುತ್ತಿದ್ದ ಈ ನೌಕರರನ್ನು ಜಲಸಂಪನ್ಮೂಲ ಇಲಾಖೆ 2017ರಲ್ಲಿ ಆಯಾ ಗ್ರಾಮ ಪಂಚಾಯತಿಗಳಿಗೆ (ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ) ಒಪ್ಪಿಸಿತು. ಅಲ್ಲೂ ಏಜನ್ಸಿಗಳ ಮೂಲಕವೇ ಮುಂದುವರಿಕೆ ಆಗಿತ್ತು. ಆಗ ಈ ನೌಕರರೆಲ್ಲ ಸಹಾಯ ಕೋರಿ ಬಂದದ್ದು ಹುಬ್ಬಳ್ಳಿಯ ಕಾರ್ಮಿಕ ಮುಖಂಡ ಡಾ.ಕೆ.ಎಸ್.ಶರ್ಮಾ ಅವರಲ್ಲಿಗೆ. ಇವರ ನೋವು ಆಲಿಸಿದ ಶರ್ಮಾ ಅವರು 2019ರಲ್ಲಿ ವಿಜಯಪುರ ಜಿಲ್ಲಾ ಕಾರ್ಮಿಕ ನ್ಯಾಯಾಲಯದಲ್ಲಿ ಕೇಸು ದಾಖಲಿಸಿದರು.

ಸುದೀರ್ಘ ನಾಲ್ಕು ವರ್ಷಗಳ ಕಾಲ ವಾದ-ಪ್ರತಿವಾದಗಳನ್ನು ಆಲಿಸಿ, ದೇಶದ ವಿವಿಧ ನ್ಯಾಯಾಲಯಗಳು ನೀಡಿರುವ ತೀರ್ಪುಗಳನ್ನು ಪರಾಮರ್ಶಿಸಿದ ನ್ಯಾಯಾಧೀಶೆ ರೇಣುಕಾ ಕುಲಕರ್ಣಿ ಅವರು, 17.11,2022 ರಂದು 132 ಪುಟಗಳ ತೀರ್ಪು (ಸಿಆರ್ ನಂ.96/2022) ಪ್ರಕಟಿಸುವ ಮೂಲಕ 137 ಜನ ಹೊರಗುತ್ತಿಗೆ ನೌಕರರ (ತೀರ್ಪು ಬಂದಾಗ ಉಳಿದದ್ದು 137 ಜನ ಮಾತ್ರ) ಸೇವೆಯನ್ನು ಕಾಯಂ ಮಾಡಿ, ಅವರ ಬದುಕಿಗೆ ಬೆಳಕಾಗಿದ್ದಾರೆ.

ಪಿಎಸ್‌ಐ ಹಗರಣ ಮಾದರಿಯಲ್ಲೇ ಸಶಸ್ತ್ರ ಮೀಸಲು ಪೊಲೀಸ್ ನೇಮಕಾತಿಯಲ್ಲಿ ಅಕ್ರಮ: 400 ಹುದ್ದೆ ಗೋಲ್‌ಮಾಲ್

ಕಾರ್ಮಿಕರ ವಿಚಾರದಲ್ಲಿ, ಅದರಲ್ಲೂ ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರ ಪರವಾಗಿ ಭಾರತೀಯ ಕಾರ್ಮಿಕ ಕಾನೂನು ತುಂಬ ಬಲಿಷ್ಟವಾಗಿದೆ. ಕಾನೂನು ಪಾಲಿಸಬೇಕಾದ ಸರ್ಕಾರವೇ ಶೋಷಣೆಗೆ ಇಳಿದರೆ ಹೇಗೆ? ಎಂದು ಕರ್ನಾಟಕ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾ ತಿಳಿಸಿದ್ದಾರೆ.  

ಡಾ.ಕೆ.ಎಸ್.ಶರ್ಮಾ ಅವರು ಲಿಖಿತ ವಾದ ಮಂಡಿಸಿದ ಬಳಿಕ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಬರುವುದನ್ನೇ ನಿಲ್ಲಿಸಿದರು. ಎರಡು ದಶಕಗಳ ನಮ್ಮ ಸಂಕಷ್ಟ ಕಡಿಮೆಯಾಗಿ ಸೇವಾ ಭದ್ರತೆ ಲಭಿಸಿದೆ. ಇನ್ನು ನಾವೂ ಗೌರವದಿಂದ ಬಾಳಲಿದ್ದೇವೆ ಎಂದು ಬೀಳಗಿ ವಾಟರ್‌ಮನ್ ಸುರೇಶ ಛಲವಾದಿ ಹೇಳಿದ್ದಾರೆ.  

click me!