
ಬೆಂಗಳೂರು (ಫೆ.28): ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ತಂದಿದ್ದು, 'ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ' ನೇಮಕಾತಿ ನಿಯಮಗಳಿಗೆ ಅಧಿಕೃತವಾಗಿ ತಿದ್ದುಪಡಿ ತಂದಿದೆ. ಈ ಹೊಸ ನಿಯಮಗಳು ರಾಜ್ಯಪತ್ರದಲ್ಲಿ ಪ್ರಕಟಗೊಂಡ ದಿನಾಂಕದಿಂದಲೇ ಜಾರಿಗೆ ಬರಲಿವೆ.
ಹೊಸ ತಿದ್ದುಪಡಿಯ ಅನ್ವಯ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು 1 ರಿಂದ 5ನೇ ತರಗತಿಯ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 6 ರಿಂದ 8ನೇ ತರಗತಿಯ ಪದವೀಧರ ಪ್ರಾಥಮಿಕ ಶಿಕ್ಷಕರಿಂದ 2:1 ಅನುಪಾತದಲ್ಲಿ ಮುಂಬಡ್ತಿ ನೀಡಲಾಗುವುದು. ಅಂದರೆ, ಪ್ರತಿ ಮೂರನೇ ಖಾಲಿ ಇರುವ ಸ್ಥಾನವನ್ನು ಪದವೀಧರ ಪ್ರಾಥಮಿಕ ಶಿಕ್ಷಕರಿಂದ ತುಂಬಲು ಸರ್ಕಾರ ನಿರ್ಧರಿಸಿದೆ.
ಮುಂಬಡ್ತಿ ಪಡೆಯಲು ಇಚ್ಛಿಸುವ ಶಿಕ್ಷಕರು ಆಯಾ ವೃಂದದಲ್ಲಿ ಕನಿಷ್ಠ 12 ವರ್ಷಗಳ ಕಾಲ ನಿರಂತರ ಸೇವೆ ಪೂರೈಸಿರುವುದು ಕಡ್ಡಾಯಗೊಳಿಸಲಾಗಿದೆ. ಅರ್ಹ ಶಿಕ್ಷಕರಿಗೆ ಮುಖ್ಯೋಪಾಧ್ಯಾಯರಾಗಿ ಅಥವಾ ಪ್ರೌಢಶಾಲಾ ಸಹಶಿಕ್ಷಕರಾಗಿ (ಗ್ರೇಡ್-2) ಬಡ್ತಿ ಪಡೆಯಲು ಅವಕಾಶವಿರುತ್ತದೆ. ಈ ಪ್ರಕ್ರಿಯೆಗೂ ಮುನ್ನ ಶಿಕ್ಷಕರಿಂದ 'ಬದಲಾಯಿಸಲಾಗದ ಲಿಖಿತ ಅಭಿಮತ'ವನ್ನು ಪಡೆಯುವುದು ಕಡ್ಡಾಯವಾಗಿದೆ.
NCTE ಮಾರ್ಗಸೂಚಿಗಳಂತೆ ಅಗತ್ಯ ವಿಷಯಗಳಲ್ಲಿ ಪದವಿ ಹೊಂದಿರುವ 1 ರಿಂದ 5ನೇ ತರಗತಿಯ ಶಿಕ್ಷಕರು, 6 ಮತ್ತು 7ನೇ ತರಗತಿಗಳಿಗೂ ಬೋಧಿಸಲು ಅರ್ಹರಾಗಿರುತ್ತಾರೆ. ಒಂದು ವೇಳೆ ನಿಗದಿತ ಅನುಪಾತದಂತೆ ಅರ್ಹ ಶಿಕ್ಷಕರು ಲಭ್ಯವಿಲ್ಲದಿದ್ದರೆ ಅಥವಾ ಶಿಕ್ಷಕರು ಮುಂಬಡ್ತಿ ನಿರಾಕರಿಸಿದರೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಲಭ್ಯವಿರುವ ಅರ್ಹ ಶಿಕ್ಷಕರನ್ನು ಹಿರಿತನದ ಆಧಾರದಲ್ಲಿ ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಉಂಟಾಗುವ ಬಡ್ತಿ ಅವಕಾಶಗಳ ವ್ಯತ್ಯಾಸವನ್ನು ಮುಂದಿನ ಹಂತದ ನೇಮಕಾತಿಯಲ್ಲಿ ಸರಿಪಡಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.