ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ (ಎನ್ಸಿಎ)ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಆದ ಎಡವಟ್ಟಿನಿಂದ ಸಾಹ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸ್ಥಿತಿ ಎದುರಾಗಿದೆ ಎನ್ನುವ ವಿಚಾರವನ್ನು ತಳ್ಳಿಹಾಕಿರುವ ಬಿಸಿಸಿಐ, ಎನ್ಸಿಎ ಫಿಸಿಯೋ ಹಾಗೂ ಟ್ರೈನರ್ಗಳು ಸಾಹ ಫಿಟ್ನೆಸ್ ಬಗ್ಗೆ ಬಿಸಿಸಿಐ ಆಡಳಿತಕ್ಕೆ ಕಾಲ ಕಾಲಕ್ಕೆ ವರದಿ ನೀಡುತ್ತಿದ್ದರು ಎಂದು ತಿಳಿಸಿದೆ.
ನವದೆಹಲಿ(ಜು.22]: ಭಾರತ ಟೆಸ್ಟ್ ತಂಡದ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ, ಈ ತಿಂಗಳಂತ್ಯದಲ್ಲಿ ಇಲ್ಲವೇ ಮುಂದಿನ ತಿಂಗಳ ಮೊದಲ ವಾರದಲ್ಲಿ ಇಂಗ್ಲೆಂಡ್ಗೆ ತೆರಳಲಿದ್ದಾರೆ. ಮ್ಯಾಂಚೆಸ್ಟರ್ನಲ್ಲಿ ಅವರು ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ಶನಿವಾರ ಬಿಸಿಸಿಐ ಪ್ರಕಟಣೆ ತಿಳಿಸಿದೆ.
ರಾಷ್ಟ್ರೀಯ ಕ್ರಿಕೆಟ್ ಅಕಾಡಮಿ (ಎನ್ಸಿಎ)ನಲ್ಲಿ ಪುನಶ್ಚೇತನ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಆದ ಎಡವಟ್ಟಿನಿಂದ ಸಾಹ ಶಸ್ತ್ರಚಿಕಿತ್ಸೆಗೆ ಒಳಗಾಗುವ ಸ್ಥಿತಿ ಎದುರಾಗಿದೆ ಎನ್ನುವ ವಿಚಾರವನ್ನು ತಳ್ಳಿಹಾಕಿರುವ ಬಿಸಿಸಿಐ, ಎನ್ಸಿಎ ಫಿಸಿಯೋ ಹಾಗೂ ಟ್ರೈನರ್ಗಳು ಸಾಹ ಫಿಟ್ನೆಸ್ ಬಗ್ಗೆ ಬಿಸಿಸಿಐ ಆಡಳಿತಕ್ಕೆ ಕಾಲ ಕಾಲಕ್ಕೆ ವರದಿ ನೀಡುತ್ತಿದ್ದರು ಎಂದು ತಿಳಿಸಿದೆ. ಆದರೆ, ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿರುವ ವಿಚಾರಗಳು ಮತ್ತಷ್ಟು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿವೆ. ‘ಸಾಹ ಜ.29ರಂದು ಸ್ನಾಯು ಸೆಳೆತದ ಕಾರಣ ಎನ್ಸಿಎಗೆ ಹಾಜರಾದರು. ಅದೇ ಸಮಯದಲ್ಲಿ ಅವರಿಗೆ ಭುಜದ ನೋವು ಸಹ ಕಾಣಿಸಿಕೊಂಡಿತು’ ಎಂದು ಪ್ರಕಟಣೆಯಲ್ಲಿ ಬಿಸಿಸಿಐ ತಿಳಿಸಿದೆ. ಹಾಗಾದರೆ, ಜನವರಿಯಲ್ಲಿ ಆದ ಭುಜದ ನೋವಿನ ಬಗ್ಗೆ ಬಿಸಿಸಿಐ ಜುಲೈನಲ್ಲಿ ಮೌನ ಮುರಿಯುತ್ತಿದೆ.
ಸಾಹ ಫಿಟ್ ಆಗಿದ್ದಾರೆ ಎಂದು ಮಾ.19ರಂದು ಎಂದರೆ ಐಪಿಎಲ್ ಆರಂಭಗೊಳ್ಳುವ ಎರಡೂವರೆ ವಾರಗಳ ಮೊದಲು ಘೋಷಿಸಲಾಗಿತ್ತು. ಆದರೆ ಮೇ 7ರಂದು ಅವರು ಮತ್ತೊಮ್ಮೆ ಭುಜದ ಗಾಯಕ್ಕೆ ತುತ್ತಾದರು. 5 ಐಪಿಎಲ್ ಪಂದ್ಯಗಳಿಂದ ಅವರು ಹೊರಗುಳಿದರು. ಮೇ 15ರಂದು ಸಾಹ ಮತ್ತೆ ಎನ್ಸಿಎಗೆ ಭೇಟಿ ನೀಡಲು ಮನವಿ ಸಲ್ಲಿಸಿದರು. ಇಲ್ಲಿನ ಫಿಸಿಯೋ ಪರಿಶೀಲಿಸಿ, ಸಾಹ ಸ್ಥಿತಿ ಜನವರಿಯಲ್ಲಿ ಇದ್ದ ಹಾಗೆಯೇ ಇದೆ ಎಂದು ಹೇಳಿದ್ದರು. ಈ ಬಗ್ಗೆ ಸನ್ರೈಸರ್ಸ್ ಫಿಸಿಯೋಗೂ ಮಾಹಿತಿ ನೀಡಲಾಗಿತ್ತು. ಆದರೂ, ಸಾಹ ಮೇ 25ರಂದು ಐಪಿಎಲ್ ಪಂದ್ಯದಲ್ಲಿ ಆಡಿದರು. ಕೇವಲ 10 ದಿನಗಳಲ್ಲೇ ಸಾಹ ಚೇತರಿಸಿಕೊಂಡರಾ? ಇಲ್ಲವೇ ಗಾಯದ ನಡುವೆಯೂ ಅವರನ್ನು ಆಡಿಸಲಾಯಿತಾ? ಎನ್ನುವ ಪ್ರಶ್ನೆಗಳಿಗೆ ಉತ್ತರವಿಲ್ಲ.
ಆಯ್ಕೆ ಸಮಿತಿಗೇ ಮಾಹಿತಿಯಿಲ್ಲ!
ಹೆಬ್ಬೆರಳಿನ ಗಾಯದಿಂದ ಸಾಹ ಚೇತರಿಸಿಕೊಂಡಿದ್ದರು ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಆದರೆ ಜು.18ರಂದು ಇಂಗ್ಲೆಂಡ್ ವಿರುದ್ಧದ 3 ಟೆಸ್ಟ್ಗಳಿಗೆ ತಂಡ ಪ್ರಕಟಿಸುವ ವೇಳೆ, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ.ಪ್ರಸಾದ್, ‘ಸಾಹ ಹೆಬ್ಬೆರಳಿನ ಗಾಯದಿಂದ ಬಳಲುತ್ತಿದ್ದಾರೆ’ ಎಂದಿದ್ದರು. ಹಾಗಾದರೆ, ಬಿಸಿಸಿಐ ಆಯ್ಕೆ ಸಮಿತಿಗೇ ಸಾಹ ಯಾವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಇರಲಿಲ್ಲವೇ? ಎನ್ನುವ ಪ್ರಶ್ನೆ ಸಹ ಉತ್ತರ ಸಿಗದೆ ಉಳಿದುಕೊಂಡಿದೆ.