
ಐಪಿಎಲ್ 10ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಆರಂಭಿಕನಾಗಿ ಆಸ್ಪ್ರೇಲಿಯಾ ಆಲ್'ರೌಂಡರ್ ಶೇನ್ ವಾಟ್ಸನ್ ಕಣಕ್ಕಿಳಿಯುವ ಸಾಧ್ಯತೆ ಇದೆ.
ನಾಯಕ ವಿರಾಟ್ ಕೊಹ್ಲಿ ಭುಜದ ಗಾಯದ ಸಮಸ್ಯೆಯಿಂದಾಗಿ ಮೊದಲೆರಡು ವಾರಗಳು ಪಂದ್ಯಾವಳಿಗೆ ಅಲಭ್ಯವಾಗಿದ್ದರೆ, ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಇದೇ ಭುಜದ ನೋವಿನಿಂದಾಗಿ ಇಡೀ ಟೂರ್ನಿಯಿಂದಲೇ ಹಿಮ್ಮೆಟ್ಟಿದ್ದಾರೆ.
ಹೀಗಾಗಿ ಕ್ರಿಸ್ಗೇಲ್ ಅವರೊಂದಿಗೆ ವಾಟ್ಸನ್ ಆರಂಭಿಕನಾಗಿ ಕಣಕ್ಕಿಳಿಯುವುದು ಅನಿವಾರ್ಯವಾಗಿದೆ.
‘‘ಕೊಹ್ಲಿ ಹಾಗೂ ರಾಹುಲ್ ಅವರ ಅಲಭ್ಯತೆಯಿಂದಾಗಿ ಆರಂಭಿಕನ ಪಾತ್ರ ನಿರ್ವಹಿಸಬೇಕಾಗಿ ಬರಬಹುದು. ಹೀಗಾಗಿ ಗೇಲ್ ಜತೆಗೆ ಕಣಕ್ಕಿಳಿಯುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇಷ್ಟಕ್ಕೂ ಯಾವುದೇ ಕ್ರಮಾಂಕದಲ್ಲಿ ಬೇಕಾದರೂ ನಾನು ಆಡಲು ಸಿದ್ಧನಿದ್ದೇನೆ'' ಎಂದು ವ್ಯಾಟ್ಸನ್ ಅಭ್ಯಾಸದ ವೇಳೆ ಸುದ್ದಿಗಾರರಿಗೆ ತಿಳಿಸಿದರು.
ಸವಾಲು ಮುಂದಿದೆ: ‘‘ಕೊಹ್ಲಿ ಹಾಗೂ ರಾಹುಲ್ ಗಾಯಾಳುಗಳಾಗಿರುವುದು ನಿಜವಾಗಿಯೂ ತಂಡದ ಮುಂದೆ ಬಹುದೊಡ್ಡ ಸವಾಲನ್ನೇ ಮುಂದೊಡ್ಡಿದೆ. ಆದಾಗ್ಯೂ ತಂಡದಲ್ಲಿರುವ ಸರ್ಫರಾಜ್ ಖಾನ್, ಸಚಿನ್ ಬೇಬಿ ಮತ್ತು ಮಂದೀಪ್ ಸಿಂಗ್ ಅವರಂತಹ ಯುವ ಆಟಗಾರರು ಗಾಯಾಳುಗಳ ಕೊರತೆಯನ್ನು ಸಮರ್ಥವಾಗಿ ತುಂಬುವ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ಈ ಯುವ ಆಟಗಾರರಿಗೆ ಅಪೂರ್ವ ಅವಕಾಶ ಒದಗಿಬಂದಿದ್ದು, ಇದನ್ನವರು ಸದುಪಯೋಗಪಡಿಸಿಕೊಳ್ಳಬೇಕು'' ಎಂದು ಹೇಳಿದ ವಾಟ್ಸನ್ ಹೇಳಿದರು.
ಮಿಲ್ಸ್ ನೆರವು: ಗೇಲ್: ಮೂರು ಬಾರಿ ಪ್ರಶಸ್ತಿ ಸಮೀಪ ಸಾಗಿ ನಿರಾಸೆ ಅನುಭವಿಸಿದ ಆರ್ಸಿಬಿ ಈ ಬಾರಿ ಟ್ರೋಫಿ ಗೆಲ್ಲುವುದು ನಿಶ್ಚಿತವಾಗಿದ್ದು, ಅದಕ್ಕೆ ವೇಗಿ ಟೈಮಲ್ ಮಿಲ್ಸ್ ನೆರವಾಗಲಿದ್ದಾರೆ ಎಂದು ತಂಡದ ಬ್ಯಾಟಿಂಗ್ ದಿಗ್ಗಜ ಕ್ರಿಸ್ ಗೇಲ್ ಭರವಸೆ ವ್ಯಕ್ತಪಡಿಸಿದ್ದಾರೆ. ‘‘ಮಿಲ್ಸ್ ಮಾತ್ರವಲ್ಲದೆ, ಕಿವೀಸ್ನ ಆ್ಯಡಂ ಮಿಲ್ನೆ ಹಾಗೂ ಭಾರತದ ಎಸ್. ಅರವಿಂದ್, ಸ್ಟುವರ್ಟ್ ಬಿನ್ನಿ ಮತ್ತು ವಾಟ್ಸನ್ ಇರುವ ಆರ್ಸಿಬಿ ವೇಗದ ಬೌಲಿಂಗ್ ಪಡೆ ಪ್ರತಿಭಾನ್ವಿತರ ಸಂಮಿಶ್ರಣದಂತಿದ್ದು, ತಂಡದ ಬೌಲಿಂಗ್ ಸಮಸ್ಯೆ ಮೊದಲಿನಷ್ಟುಕಾಡದು ಎಂಬ ವಿಶ್ವಾಸವಿದೆ'' ಎಂದು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗೇಲ್ ಅಭಿಪ್ರಾಯಿಸಿದ್ದಾರೆ. ಅಂದಹಾಗೆ ಫೆಬ್ರವರಿಯಲ್ಲಿ ನಡೆದ ಆಟಗಾರರ ಹರಾಜಿನಲ್ಲಿ ಮಿಲ್ಸ್ಗೆ ಆರ್ಸಿಬಿ ಫ್ರಾಂಚೈಸಿ ಬರೋಬ್ಬರಿ 12 ಕೋಟಿ ರು. ತೆತ್ತಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.