
ಕುಂಬ್ಳೆ ನಿರ್ಗಮನದ ಬಳಿಕ ಬಿಸಿಸಿಐ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದೆ. ‘ನಿಮಗೆ ಬೇಕಿರುವ ಅಧಿಕಾರ ನೀಡಿದ್ದೇವೆ. ಈಗ ತಂಡ ನಿರೀಕ್ಷಿತ ಫಲಿತಾಂಶ ನೀಡದಿದ್ದರೆ, ನಿಮ್ಮ ನಾಯಕತ್ವಕ್ಕೆ ಕುತ್ತು ಬರಬಹುದು. ಅದಕ್ಕೆ ನಾವು ಹೊಣೆಯಲ್ಲ' ಎಂದು ಬಿಸಿಸಿಐ ಹಿರಿಯ ಅಧಿಕಾರಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐನ ಈ ನಿರ್ಧಾರ ವಿರಾಟ್ ಮೇಲೆ ಭಾರೀ ಒತ್ತಡ ಹೇರಿದ್ದು, ವೆಸ್ಟ್ಇಂಡೀಸ್ ಸರಣಿಯಿಂದಲೇ ಕೊಹ್ಲಿಗೆ ಅಗ್ನಿಪರೀಕ್ಷೆ ಶುರುವಾಗಲಿದೆ.
ಕೋಚ್ ಸ್ಥಾನದಿಂದ ಅನಿಲ್ ಕುಂಬ್ಳೆ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತುಟಿ ಬಿಚ್ಚಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ತಾವು ಯಾವುದೇ ಕಾರಣಕ್ಕೂ ಡ್ರೆಸ್ಸಿಂಗ್ ಕೊಠಡಿಯ ವಿಚಾರಗಳನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ.
ಕೊಹ್ಲಿಯೊಂದಿಗಿನ ಸಂಬಂಧ ಸರಿಪಡಿಸಲಾಗದ ಹಂತ ತಲುಪಿದ ಕಾರಣ, ರಾಜೀನಾಮೆ ನೀಡುತ್ತಿದ್ದೇನೆ ಎಂದು ಕುಂಬ್ಳೆ ತಮ್ಮ ಪತ್ರದಲ್ಲಿ ಬರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ‘ಕೋಚ್ ಸ್ಥಾನದಲ್ಲಿ ಮುಂದುವರಿಯದಿರಲು ಕುಂಬ್ಳೆ ತೆಗೆದುಕೊಂಡ ನಿರ್ಧಾರವನ್ನು ತಂಡ ಗೌರವಿಸುತ್ತದೆ. ಅವರಿಗೆ ಅನಿಸಿದ್ದನ್ನು ಹೇಳಿದ್ದಾರೆ' ಎಂದರು. ‘ಒಂದು ಮಾತಂತೂ ಸತ್ಯ. ಚಾಂಪಿಯನ್ಸ್ ಟ್ರೋಫಿ ವೇಳೆ ನಾನು 11 ಪತ್ರಿಕಾ ಗೋಷ್ಠಿಗಳನ್ನು ನಡೆಸಿದ್ದೇನೆ. ಆದರೆ ಯಾವುದರಲ್ಲೂ ತಂಡದೊಳಗೆ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಮಾತನಾಡಿಲ್ಲ. ಕಳೆದ 3-4 ವರ್ಷಗಳಿಂದ ಯಾರೂ ಸಹ ಡ್ರೆಸ್ಸಿಂಗ್ ಕೊಠಡಿಯ ರಹಸ್ಯಗಳನ್ನು ಬಹಿರಂಗಪಡಿಸಬಾರದು ಎನ್ನುವ ನಿಯಮವನ್ನು ಸಂಯಮದಿಂದ ಪಾಲಿಸಿಕೊಂಡು ಬರುತ್ತಿದ್ದೇವೆ' ಎಂದು ಕೊಹ್ಲಿ ಹೇಳಿದ್ದಾರೆ.
‘ಕುಂಬ್ಳೆ ಅವರ ಸಾಧನೆ ಬಗ್ಗೆ ನಮ್ಮೆಲ್ಲರಿಗೂ ಅಪಾರವಾದ ಗೌರವ, ಹೆಮ್ಮೆ ಇದೆ' ಎಂದ ವಿರಾಟ್, ಕುಂಬ್ಳೆ ಅವರು ಮಾಗದರ್ಶನ ನೀಡುತ್ತಿದ್ದ ಮಾದರಿಯ ಕುರಿತು ತಂಡಕ್ಕೆ ಅಸಮಾಧಾನವಿತ್ತೆ ಎಂಬ ಪ್ರಶ್ನೆಗೆ ‘ನಾನು ಮೊದಲೇ ಹೇಳಿದ ಹಾಗೆ, ಡ್ರೆಸ್ಸಿಂಗ್ ಕೊಠಡಿಯಲ್ಲಿ ನಡೆಯುವ ಯಾವ ವಿಚಾರದ ಬಗ್ಗೆಯೂ ಹೇಳುವುದಿಲ್ಲ' ಎಂದರು.
ಮಕ್ಕಳಿಗೆ ಬಯ್ಯುವಂತೆ ಬಯ್ಯುತ್ತಿದ್ದ ಕುಂಬ್ಳೆ!:
ಕೊಹ್ಲಿ ವಿರುದ್ಧ ಮಾತ್ರವಲ್ಲ, ಕುಂಬ್ಳೆ ವಿರುದ್ಧವೂ ಟೀಕೆಗಳು ವ್ಯಕ್ತವಾಗುತ್ತಿವೆ. ಕುಂಬ್ಳೆ ಆಟಗಾರರನ್ನು ಶಾಲಾ ಮಕ್ಕಳಂತೆ ನೋಡುತ್ತಿದ್ದರು. ಮಕ್ಕಳಿಗೆ ಬಯ್ಯುವಂತೆ ಅವರಿಗೆ ಬಯ್ಯುತ್ತಿದ್ದರು. ಇದರಿಂದ ಆಟಗಾರರು ಮನನೊಂದಿದ್ದರು. ಡ್ರೆಸ್ಸಿಂಗ್ ಕೊಠಡಿಯಲ್ಲಿ ಕುಂಬ್ಳೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದರು. ಗಾಯಾಳುಗಳಿಗೂ ಅಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ತಾಕೀತು ಮಾಡುತ್ತಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಫೈನಲ್ ನಲ್ಲಿ ಬ್ಯಾಟಿಂಗ್ ಆಯ್ದುಕೊಳ್ಳಲು ಸೂಚಿಸಿದ್ದ ಕುಂಬ್ಳೆ!:
ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಟಾಸ್ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಲು ಕೊಹ್ಲಿಗೆ ಕುಂಬ್ಳೆ ಸೂಚಿಸಿದ್ದರು, ಆದರೆ ವಿರಾಟ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿ ಪಂದ್ಯವನ್ನು ಕೈಚೆಲ್ಲಿದರು ಎಂದರು ತಂಡದ ಮೂಲವೊಂದು ತಿಳಿಸಿದೆ. ಡ್ರೆಸ್ಸಿಂಗ್ ಕೊಠಡಿಯಲ್ಲಿ ನಿಯಂತ್ರಣ ಸಾಧಿಸುವ ವಿಚಾರವಾಗಿ ಕುಂಬ್ಳೆ ಹಾಗೂ ಕೊಹ್ಲಿ ನಡುವೆ ಸದಾ ಸಂಘರ್ಷ ನಡುಯುತ್ತಲೇ ಇತ್ತು ಎಂದು ಹೇಳಲಾಗಿದೆ.
ಕೊಹ್ಲಿಗೆ ಬಿಸಿಸಿಐನಿಂದ ಖಡಕ್ ಎಚ್ಚರಿಕೆ!
ಕುಂಬ್ಳೆ ನಿರ್ಗಮನದ ಬಳಿಕ ಬಿಸಿಸಿಐ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಗೆ ಎಚ್ಚರಿಕೆ ನೀಡಿದೆ. ‘ನಿಮಗೆ ಬೇಕಿರುವ ಅಧಿಕಾರ ನೀಡಿದ್ದೇವೆ. ಈಗ ತಂಡ ನಿರೀಕ್ಷಿತ ಫಲಿತಾಂಶ ನೀಡದಿದ್ದರೆ, ನಿಮ್ಮ ನಾಯಕತ್ವಕ್ಕೆ ಕುತ್ತು ಬರಬಹುದು. ಅದಕ್ಕೆ ನಾವು ಹೊಣೆಯಲ್ಲ' ಎಂದು ಬಿಸಿಸಿಐ ಹಿರಿಯ ಅಧಿಕಾರಿ ಕೊಹ್ಲಿ ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ. ಬಿಸಿಸಿಐನ ಈ ನಿರ್ಧಾರ ವಿರಾಟ್ ಮೇಲೆ ಭಾರೀ ಒತ್ತಡ ಹೇರಿದ್ದು, ವೆಸ್ಟ್ಇಂಡೀಸ್ ಸರಣಿಯಿಂದಲೇ ಕೊಹ್ಲಿಗೆ ಅಗ್ನಿಪರೀಕ್ಷೆ ಶುರುವಾಗಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.