ಕುಸ್ತಿಪಟು ವಿನೇಶ್ ಫೋಗಟ್ಗೆ ಹರಿಯಾಣ ಸರ್ಕಾರ 4 ಕೋಟಿ ರೂಪಾಯಿ ನಗದು ಬಹುಮಾನ ನೀಡಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಸೌಲಭ್ಯಕ್ಕೆ ಸಮನಾದ ಸೌಲಭ್ಯವನ್ನು ಸರ್ಕಾರ ನೀಡಿದೆ.
ಚಂಡೀಗಡ: ಕುಸ್ತಿಪಟು ಕಂ ರಾಜಕಾರಣಿ ವಿನೇಶ್ ಫೋಗಟ್, ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಸೌಲಭ್ಯಕ್ಕೆ ಸಮನಾದ ಸೌಲಭ್ಯವನ್ನು ಹರಿಯಾಣ ಸರ್ಕಾರ ನೀಡಿದ ನಂತರ, ಸರ್ಕಾರದ ಕ್ರೀಡಾ ನೀತಿಯ ಅಡಿಯಲ್ಲಿ 4 ಕೋಟಿ ರೂಪಾಯಿ ನಗದು ಬಹುಮಾನವನ್ನು ಆಯ್ಕೆ ಮಾಡಿಕೊಂಡಿದ್ದಾರೆ. 30 ವರ್ಷದ ಜುಲಾನಾ ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿದ್ದ ಇವರು, 50 ಕೆಜಿ ವಿಭಾಗದಲ್ಲಿ ಚಿನ್ನದ ಪದಕಕ್ಕಾಗಿ ನಡೆಯಬೇಕಿದ್ದ ಪಂದ್ಯಕ್ಕೂ ಮುನ್ನ ತೂಕ ಹೆಚ್ಚಾಗಿದ್ದ ಕಾರಣ 2024ರ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡಿದ್ದರು.
ಕ್ರೀಡಾ ನೀತಿಯಡಿ ಮೂರು ಆಯ್ಕೆಗಳು
ಹರಿಯಾಣ ಸರ್ಕಾರವು ತನ್ನ ಕ್ರೀಡಾ ನೀತಿಯ ಅಡಿಯಲ್ಲಿ ಫೋಗಟ್ಗೆ ಮೂರು ಆಯ್ಕೆಗಳನ್ನು ನೀಡಿತ್ತು - 4 ಕೋಟಿ ರೂಪಾಯಿ ನಗದು ಬಹುಮಾನ, ಅತ್ಯುತ್ತಮ ಕ್ರೀಡಾಪಟು (OSP) ವರ್ಗದ ಅಡಿಯಲ್ಲಿ ಗ್ರೂಪ್ 'ಎ' ಸರ್ಕಾರಿ ಉದ್ಯೋಗ ಅಥವಾ ಹರಿಯಾಣ ಶೆಹರಿ ವಿಕಾಸ್ ಪ್ರಾಧಿಕರಣದಿಂದ (HSVP) ವಸತಿ ನಿವೇಶನ. ಫೋಗಟ್ ಮಂಗಳವಾರ ರಾಜ್ಯ ಕ್ರೀಡಾ ಇಲಾಖೆಗೆ ಪತ್ರ ಸಲ್ಲಿಸಿ, ನಗದು ಬಹುಮಾನವನ್ನು ಆಯ್ಕೆ ಮಾಡಿರುವುದಾಗಿ ತಿಳಿಸಿದ್ದಾರೆ.
ಹಿಂದಿನ ಭರವಸೆಗಳ ನೆನಪು
ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು ಮಾರ್ಚ್ನಲ್ಲಿ ರಾಜ್ಯ ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ನೀಡಿದ್ದ ಭರವಸೆಯಂತೆ ಈ ಕ್ರಮ ಕೈಗೊಳ್ಳಲಾಗಿದೆ.
“ವಿನೇಶ್ ನಮ್ಮ ಮಗಳು, ಅವರಿಗೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಬಹುಮಾನವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಈ ಭರವಸೆ ಇನ್ನೂ ಈಡೇರಿಲ್ಲ” ಎಂದು ಫೋಗಟ್ ವಿಧಾನಸಭೆಯಲ್ಲಿ ಹೇಳಿದ್ದರು. ಇದು ಕೇವಲ ಹಣದ ವಿಷಯವಲ್ಲ, ಗೌರವದ ವಿಷಯ. ರಾಜ್ಯದಾದ್ಯಂತ ಅನೇಕ ಜನರು ನನಗೆ ನಗದು ಬಹುಮಾನ ಬಂದಿರಬೇಕು ಎಂದು ಹೇಳುತ್ತಾರೆ” ಎಂದು ಅವರು ಹೇಳಿದರು.
ಫೋಗಟ್ "ಹರಿಯಾಣದ ಹೆಮ್ಮೆ"
ಕಳೆದ ತಿಂಗಳು, ಹರಿಯಾಣ ಕ್ಯಾಬಿನೆಟ್ ಫೋಗಟ್ ಅವರ ಕೊಡುಗೆ ಮತ್ತು ಕ್ರೀಡೆಯಲ್ಲಿನ ಪ್ರಾಮುಖ್ಯತೆಯನ್ನು ಗುರುತಿಸಿ, ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಗೌರವವನ್ನು ನೀಡಲು ನಿರ್ಧರಿಸಿದೆ ಎಂದು ಸಿಎಂ ಸೈನಿ ಘೋಷಿಸಿದರು.
ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ನಿಂದ ಅನರ್ಹಗೊಂಡಿದ್ದರು, ಆದರೆ ರಾಜ್ಯವು ಅವರ ಗೌರವಕ್ಕೆ ಕುಂದುಂಟಾಗಲು ಬಿಡುವುದಿಲ್ಲ ಎಂದು ಸಿಎಂ ಸೈನಿ ಹೇಳಿದರು. ಅವರನ್ನು “ಹರಿಯಾಣದ ಹೆಮ್ಮೆ” ಎಂದು ಕರೆದ ಮುಖ್ಯಮಂತ್ರಿಗಳು, ರಾಜ್ಯದ ಭರವಸೆಯನ್ನು ಈಡೇರಿಸುವ ಬದ್ಧತೆಯನ್ನು ಒತ್ತಿಹೇಳುವ ಮೂಲಕ ಟ್ವೀಟ್ನಲ್ಲಿ ತಮ್ಮ ಬೆಂಬಲವನ್ನು ಪುನರುಚ್ಚರಿಸಿದರು.
ಕುಸ್ತಿಪಟುವಿನಿಂದ ಶಾಸಕಿಯವರೆಗೆ
ಮೂರು ಬಾರಿ ಒಲಿಂಪಿಯನ್ ಮತ್ತು ಭಾರತದ ಕುಸ್ತಿ ಫೆಡರೇಶನ್ನ (WFI) ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪ್ರತಿಭಟನೆಗಳಲ್ಲಿ ಪ್ರಮುಖ ನಾಯಕಿಯಾಗಿದ್ದ ವಿನೇಶ್ ಫೋಗಟ್, 2024 ರಲ್ಲಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದರು. ಕಾಂಗ್ರೆಸ್ ಟಿಕೆಟ್ನಲ್ಲಿ ಸ್ಪರ್ಧಿಸಿ ಜುಲಾನಾ ಕ್ಷೇತ್ರದಿಂದ ಗೆದ್ದ ಅವರು ಅಂದಿನಿಂದ ಶಾಸಕಾಂಗ ಪ್ರಕ್ರಿಯೆಗಳಲ್ಲಿ ಸಕ್ರಿಯರಾಗಿದ್ದಾರೆ.
50 ಕೆಜಿ ವಿಭಾಗದ ಫೈನಲ್ ಪಂದ್ಯಕ್ಕೂ ಮುನ್ನ ದೇಹದ ತೂಕ 100 ಗ್ರಾಂನಷ್ಟು ಹೆಚ್ಚಿತ್ತು ಎನ್ನುವ ಕಾರಣಕ್ಕಾಗಿ ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಈ ಮೂಲಕ ಫೈನಲ್ನಲ್ಲಿ ಆಡುವ ಅವಕಾಶ ನಿರಾಕರಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ವಿನೇಶ್, ತಮಗೆ ಬೆಳ್ಳಿ ಪದಕವಾದರೂ ನೀಡಬೇಕು ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿನೇಶ್ ಪೋಗಟ್ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ಆದರೆ ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ವಿನೇಶ್ ಫೋಗಟ್ ಮನವಿಯನ್ನು ತಿರಸ್ಕರಿಸಿತ್ತು.