
ನಾಗ್ಪುರ(ಡಿ.07): ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿರುವ ರಾಜ್ಯ ರಣಜಿ ತಂಡ ಪ್ರಶಸ್ತಿ ಸುತ್ತಿನತ್ತ ದಿಟ್ಟ ಹೆಜ್ಜೆಯಿಟ್ಟಿದೆ. ಬಲಿಷ್ಠ ಮುಂಬೈ ತಂಡಕ್ಕೆ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಮೊದಲ ದಿನವೇ ಆಘಾತ ನೀಡಿದೆ
ನಾಯಕ ಆರ್. ವಿನಯ್ ಕುಮಾರ್ ಹ್ಯಾಟ್ರಿಕ್ ದಾಳಿಗೆ ತತ್ತರಿಸಿದ ಮುಂಬೈ ತಂಡ ಕಳಪೆ ಮೊತ್ತಕ್ಕೆ ಕುಸಿದಿದೆ. ಇಂದಿನಿಂದ ಆರಂಭವಾದ ಕ್ವಾರ್ಟರ್'ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಕರ್ನಾಟಕ ಭರ್ಜರಿ ಆರಂಭವನ್ನೇ ಪಡೆಯಿತು. ನಾಯಕ ವಿನಯ್ ಕುಮಾರ್ ಮೊದಲ ಓವರ್'ನ ಕೊನೆಯ ಎಸೆತದಲ್ಲಿ ಯುವ ಪ್ರತಿಭೆ ಪೃಥ್ವಿ ಶಾ ವಿಕೆಟ್ ಪಡೆದು ಮುಂಬೈಗೆ ಮೊದಲ ಆಘಾತ ನೀಡಿದರು. ಬಳಿಕ ತಾವೆಸೆದ ಎರಡನೇ ಓವರ್'ನ ಮೊದಲೆರಡು ಎಸೆತದಲ್ಲಿ ಮತ್ತೆರಡು ವಿಕೆಟ್ ಪಡೆಯುವ ಮೂಲಕ ವಿನಯ್ ಕುಮಾರ್ ಓವರ್ ಹ್ಯಾಟ್ರಿಕ್ ಸಾಧನೆ ಮಾಡಿದರು.
ಆ ಬಳಿಕವೂ ಶಿಸ್ತುಬದ್ಧ ದಾಳಿ ನಡೆಸಿದ ಕರ್ನಾಟಕ, 41 ಬಾರಿ ಚಾಂಪಿಯನ್ ತಂಡ ಮುಂಬೈ 49 ರನ್ ಗಳಿಸುವಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ 100 ರನ್'ಗಳೊಳಗೆ ಕುಸಿಯುವ ಭೀತಿಯಲ್ಲಿದ್ದ ಮುಂಬೈಗೆ ಕೆಳಕ್ರಮಾಂಕದಲ್ಲಿ ಧವಳ್ ಕುಲಕರ್ಣಿ ಆಸರೆಯಾದರು. ಸತತ 3 ಅರ್ಧಶತಕ ಬಾರಿಸುವ ಮೂಲಕ ಧವಳ್ ತಂಡಕ್ಕೆ ಸಂಕಷ್ಟದ ಸಂದರ್ಭದಲ್ಲಿ ನೆರವಾದರು. ಧವಳ್ ಕುಲಕರ್ಣಿ(52*) ಅರ್ಧಶತಕ ಬಾರಿಸಿದ್ದು ಬ್ಯಾಟಿಂಗ್ ಮುಂದುವರೆಸಿದ್ದಾರೆ.
ಕರ್ನಾಟಕ ಪರ ನಾಯಕ ವಿನಯ್ 6 ವಿಕೆಟ್ ಪಡೆದರೆ, ಮಿಥುನ್, ಅರವಿಂದ್ ಹಾಗೂ ಗೌತಮ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.