
ನವದೆಹಲಿ: ಜನನ ಪ್ರಮಾಣ ಪತ್ರ ತಿರುಚಿದ ಆರೋಪದಲ್ಲಿ ಭಾರತದ ತಾರಾ ಶಟ್ಲರ್ ಲಕ್ಷ್ಯ ಸೇನ್, ಅವರ ಕುಟುಂಬಸ್ಥರು ಮತ್ತು ಕೋಚ್ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
ಲಕ್ಷ್ಯ ಸೇನ್ ಮತ್ತು ಅವರ ಸಹೋದರ ಚಿರಾಗ್ ಸೇನ್ ನೈಜ ವಯಸ್ಸನ್ನು ತಿರುಚಲಾಗಿದ್ದು, ಎರಡೂವರೆ ವರ್ಷ ಕಡಿಮೆ ಮಾಡಿ ಜನನ ಪ್ರಮಾಣ ಪತ್ರದಲ್ಲಿ ನಮೂದಿಸಲಾಗಿದೆ. ಪಂದ್ಯಗಳಲ್ಲಿ ಭಾಗವಹಿಸಲು ಮತ್ತು ಸರ್ಕಾರಿ ಸವಲತ್ತುಗಳನ್ನು ಪಡೆಯಲು ಈ ರೀತಿ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ತಮ್ಮ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದು ಕೋರಿ ಸೇನ್ ಸಹೋದರರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಅದಕ್ಕೆ ನ್ಯಾಯಾಲಯ ಅನುಮತಿ ನೀಡಿರಲಿಲ್ಲ. ಹೀಗಾಗಿ ಅವರು ಸುಪ್ರೀಂ ಮೆಟ್ಟಿಲೇರಿದ್ದರು.ನ್ಯಾ.ಸುಧಾಂಶು ಧುಲಿಯಾ, ಅರವಿಂದ್ ಕುಮಾರ್ ಇದ್ದ ಪೀಠ ಎಫ್ಐಆರ್ ರದ್ದುಗೊಳಿಸಿ ಆದೇಶಿಸಿತು.
ಇಂದು ಮಕಾವ್ ಓಪನ್ ಬ್ಯಾಡ್ಮಿಂಟನ್ ಆರಂಭ
ಮಕಾವ್: ಮಕಾವ್ ಓಪನ್ ಸೂಪರ್ 300 ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರ ಆರಂಭಗೊಳ್ಳಲಿದ್ದು, ಭಾರತದ ತಾರಾ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್, ಪುರುಷ ಸಿಂಗಲ್ಸ್ ಆಟಗಾರರಾದ ಲಕ್ಷ್ಯ ಸೇನ್, ಪ್ರಣಯ್ ಕಣದಲ್ಲಿದ್ದಾರೆ.
ಇತ್ತೀಚೆಗಷ್ಟೇ ಯುಎಸ್ ಓಪನ್ ಗೆದ್ದಿದ್ದ ಕರ್ನಾಟಕದ ಆಯುಶ್ ಶೆಟ್ಟಿ, ಸತೀಶ್ ಕರುಣಾಕರನ್, ತರುಣ್, ಶಂಕರ್ ಮುತ್ತುಸ್ವಾಮಿ, ಕಿರಣ್ ಜಾರ್ಜ್ ಕೂಡಾ ಆಡಲಿದ್ದಾರೆ. ಮಹಿಳಾ ಸಿಂಗಲ್ಸ್ನಲ್ಲಿ ಉನ್ನತಿ ಹೂಡಾ, ರಕ್ಷಿತಾ, ಅನುಪಮಾ ಉಪಾಧ್ಯಾಯ, ಆಕರ್ಷಿ ಕಶ್ಯಪ್, ಡಬಲ್ಸ್ನಲ್ಲಿ ತ್ರೀಸಾ-ಗಾಯತ್ರಿ, ಪ್ರಿಯಾ-ಶ್ರುತಿ, ಮಿಶ್ರ ಡಬಲ್ಸ್ನಲ್ಲಿ ಧ್ರುವ್ ಕಪಿಲಾ-ತನಿಶಾ ಕ್ರಾಸ್ಟೋ ಸ್ಪರ್ಧಿಸಲಿದ್ದಾರೆ.
ಹೈದ್ರಬಾದ್: ಬ್ಯಾಡ್ಮಿಂಟನ್ ಆಡುತ್ತಿದ್ದಾಗ ಕುಸಿದು ಬಿದ್ದು 26 ವರ್ಷದ ಯುವಕ ಸಾವು
ಹೈದ್ರಾಬಾದ್: ಬ್ಯಾಡ್ಮಿಂಟನ್ ಆಡುತ್ತಿದ್ದಾಗಲೇ ಕುಸಿದು ಬಿದ್ದು ಯುವಕನೋರ್ವ ಸಾವನ್ನಪ್ಪಿದ ಘಟನೆ ಹೈದರಾಬಾದ್ನ ಉಪ್ಪಾಕ್ನಲ್ಲಿ ನಡೆದಿದೆ. ಮೃತರನ್ನು 26 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ. ಡಬಲ್ಸ್ ಆಡುತ್ತಿದ್ದಾಗ ರಾಕೇಶ್ ಅಂಕಣದಲ್ಲೇ ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಸ್ಥಳದಲ್ಲೇ ಹೃದಯಾಘಾದಿಂದ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದ್ದಾರೆ.
ಆ.1ಕ್ಕೆ ಭಾರತ ಫುಟ್ಬಾಲ್ ನೂತನ ಕೋಚ್ ಆಯ್ಕೆ
ನವದೆಹಲಿ: ಭಾರತ ಪುರುಷರ ಫುಟ್ಬಾಲ್ ತಂಡದ ಕೋಚ್ ಆಯ್ಕೆ ಆಗಸ್ಟ್ 1ರಂದು ನಡೆಯಲಿದೆ. ಹುದ್ದೆಯ ಆಯ್ಕೆ ರೇಸ್ನಲ್ಲಿ ಮಾಜಿ ಆಟಗಾರ ಖಾಲಿದ್ ಜಮೀಲ್ ಅವರು ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗೆ ಅಖಿಲ ಭಾರತೀಯ ಫುಟ್ಬಾಲ್ ಫೆಡರೇಷನ್ (ಎಐಎಫ್ಎಫ್)ನ ತಾಂತ್ರಿಕ ಸಮಿತಿಯು ಮೂವರು ಸದಸ್ಯರ ಹೆಸರು ಅಂತಿಮಗೊಳಿಸಿತ್ತು.
ಭಾರತದ ಮಾಜಿ ಕೋಚ್ ಸ್ಟೀಫನ್ ಕಾನ್ಸ್ಟಾಂಟಿನ್, ಗ್ಲೋವಾಕಿಯಾ ತಂಡದ ಕೋಚ್ ಆಗಿದ್ದ ಸ್ಟೀಫನ್ ಟರ್ಕೋವಿಕ್ ಹಾಗೂ ಭಾರತದ ಮಾಜಿ ಮಿಡ್ ಫೀಲ್ಡರ್ ಖಾಲಿದ್ ಹೆಸರು ಸದ್ಯ ಅಂತಿಮ ಪಟ್ಟಿಯಲ್ಲಿವೆ. ಈ ಪೈಕಿ 2023-24, 2024-25ರಲ್ಲಿ ಎಐಎಫ್ಎಫ್ ವರ್ಷದ ಕೋಚ್ ಪ್ರಶಸ್ತಿ ಗೆದ್ದಿದ್ದ ಖಾಲಿದ್ ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು ವರದಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.