
ಬೆಂಗಳೂರು(ಡಿ.24): ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರುವಾಸಿಯಾಗಿರುವ ಬೆಂಗಳೂರು ಶೀಘ್ರದಲ್ಲೇ ದೇಶದ ಸ್ಪೋರ್ಟ್ಸ್ ಹಬ್ ಎನಿಸಲಿದೆ ಎಂದು ಕೇಂದ್ರ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು.
ಬೆಂಗಳೂರಿನಲ್ಲಿರುವ ಸಾಯ್ ಕೇಂದ್ರದಲ್ಲಿ ನೂತನವಾಗಿ ನಿರ್ಮಿಸಲಾದ ₹26.77 ಕೋಟಿ ವೆಚ್ಚದ ಪುರುಷರ ವಸತಿ ನಿಲಯ ಕಟ್ಟಡ, ₹28.72 ಕೋಟಿ ವೆಚ್ಚದ ಮಹಿಳಾ ವಸತಿ ನಿಲಯ ಕಟ್ಟಡ ಹಾಗೂ ₹3.82 ಕೋಟಿ ವೆಚ್ಚದ ಸಿಂಥೆಟಿಕ್ ಟ್ರ್ಯಾಕ್ ಉದ್ಘಾಟಿಸಿ ನಂತರ ನಡೆದ ಮೈ ಭಾರತ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಕ್ರೀಡಾ ಯಶಸ್ಸಿನಲ್ಲಿ ಬೆಂಗಳೂರಿನ ಕೊಡುಗೆ ಅಪಾರ. ಕ್ರೀಡಾಳುಗಳಿಗೆ ಉತ್ತಮ ವಾತಾವರಣದ ಜತೆ ಮೂಲಭೂತ ಸೌಕರ್ಯಗಳು ಅತ್ಯತ್ತಮವಾಗಿವೆ. ಕ್ರೀಡೆಗೆ ನೀಡುವ ಅನುದಾನವನ್ನು ಪ್ರಧಾನಿ ಮೋದಿ ಮೂರು ಪಟ್ಟು ಹೆಚ್ಚಳ ಮಾಡಿದ ಪರಿಣಾಮ ಹಿಂದೆಂದಿಗಿಂತಲೂ ಭಾರತದ ಶ್ರೇಷ್ಠವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟುಗಳು, ಕೋಚ್ಗಳು, ಒಲಿಂಪಿಕ್ಸ್, ಕಾಮನ್ವೆಲ್ತ್, ಏಷ್ಯನ್ ಗೇಮ್ಸ್ ಪದಕ ವಿಜೇತರನ್ನು ಸಚಿವರು ಸನ್ಮಾನಿಸಿದರು. ಹಾಕಿ ಪಟು ಮನ್ಪ್ರೀತ್ ಸಿಂಗ್ ಮತ್ತು ಕರ್ನಾಟಕದ ಎಚ್.ಎನ್.ಗಿರೀಶ್, ಅಶ್ವಿನಿ ನಾಚಪ್ಪ, ಪ್ರಮಿಳಾ ಅಯ್ಯಪ್ಪ, ಅಶ್ವಿನಿ ಅಕ್ಕುಂಜೆ ಸೇರಿದಂತೆ ಇತರರನ್ನು ಸನ್ಮಾನಿಸಲಾಯಿತು. ಸಾಯ್ ಕಾರ್ಯಕಾರಿ ನಿರ್ದೇಶಕಿ ರೀತು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೆಂಗ್ಳೂರಿನ ಲಕ್ಷ್ಯನ್ ಕ್ರೀಡಾ ಅಕಾಡೆಮಿ ಲೋಕಾರ್ಪಣೆ
ಬೆಂಗಳೂರು: ನಗರದಲ್ಲಿ ತಲೆ ಎತ್ತಿರುವ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಲಕ್ಷ್ಯನ್ ಕ್ರೀಡಾ ಅಕಾಡೆಮಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶನಿವಾರ ಲೋಕಾರ್ಪಣೆಗೊಳಿಸಿದರು.
ಸರ್ಜಾಪುರ ಸಮೀಪ 2 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಕಾಡೆಮಿಯಲ್ಲಿ ಟೇಬಲ್ ಟೆನಿಸ್, ಚೆಸ್, ಬಾಸ್ಕೆಟ್ಬಾಲ್, ಈಜು, ಬ್ಯಾಡ್ಮಿಂಟನ್, ಶೂಟಿಂಗ್, ಸ್ಕ್ಯಾಶ್ ಸೇರಿದಂತೆ ವಿಶ್ವದರ್ಜೆಯ 10ರಷ್ಟು ಕ್ರೀಡಾ ತರಬೇತಿ ಕೇಂದ್ರಗಳಿವೆ. ಜೊತೆಗೆ ಜಿಮ್, ಪುನಶ್ಚೇತನ, ಯೋಗ, ಫಿಸಿಯೋಥೆರಪಿ ಸೆಂಟರ್ಗಳಿವೆ. ಅಕಾಡೆಮಿಯ ಪ್ರತಿ ಕೇಂದ್ರಕ್ಕೂ ಭೇಟಿ ನೀಡಿದ ಅನುರಾಗ್, ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ಸೂಚಿಸಿದರು. ಅಲ್ಲದೆ ಕೆಲ ಕಾಲ ಕೋಚ್ಗಳ ಜೊತೆ ಶೂಟಿಂಗ್, ಫುಟ್ಬಾಲ್, ಬ್ಯಾಡ್ಮಿಂಟನ್, ಬಾಸ್ಕೆಟ್ಬಾಲ್ ಆಡಿದರು. ‘ಲಕ್ಷ್ಯನ್ ಅಕಾಡೆಮಿ ಭಾರತದ ಕ್ರೀಡೆಯ ದಿಕ್ಕನ್ನು ಬದಲಿಸಲಿದೆ. ಇಂತಹ ಅಕಾಡೆಮಿಗಳು ಪ್ರತಿ ರಾಜ್ಯದಲ್ಲೂ ಅಗತ್ಯವಿದೆ‘ ಎಂದು ಹೇಳಿದರು.
ಬಾಲಿವುಡ್ ನಟಿಯರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತೀಯ ಕ್ರಿಕೆಟಿಗರು ಯಾರೆಲ್ಲಾ?
ಈ ವೇಳೆ ಭಾರತದ ದಿಗ್ಗಜ ಹಾಕಿ ಪಟುಗಳಾದ ಧನರಾಜ್ ಪಿಳ್ಳೈ, ಅರ್ಜುನ್ ಹಾಲಪ್ಪ, ಅಕಾಡೆಮಿ ಸಂಸ್ಥಾಪಕರಾದ ಲಕನ್ನಾ ಯಶಿಕಾ, ಜೀವನ್ ಮಹದೇವನ್ ಸೇರಿದಂತೆ ಪ್ರಮುಖರು ಹಾಜರಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.