ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌: ಸಾತ್ವಿಕ್‌-ಚಿರಾಗ್‌ ಕಂಚು ಗೆದ್ದ ಭಾರತದ ಜೋಡಿ!

Published : Aug 31, 2025, 09:50 AM IST
Satwiksairaj Rankireddy Chirag Shetty

ಸಾರಾಂಶ

ಸಾತ್ವಿಕ್‌ ಸಾಯಿರಾಜ್‌ ಮತ್ತು ಚಿರಾಗ್‌ ಶೆಟ್ಟಿ ಜೋಡಿ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಸೆಮಿಫೈನಲ್‌ನಲ್ಲಿ ಚೀನಾದ ಜೋಡಿಯ ವಿರುದ್ಧ ಸೋತರು. ಇದು ಜೋಡಿಯ ಎರಡನೇ ವಿಶ್ವ ಚಾಂಪಿಯನ್‌ಶಿಪ್‌ ಕಂಚಿನ ಪದಕ.

ಪ್ಯಾರಿಸ್: ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಂ.1 ಡಬಲ್ಸ್ ಜೋಡಿಯಾದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಕಂಚಿನ ಪದಕ ಗೆಲ್ಲುವುದರೊಂದಿಗೆ ತಮ್ಮ ಅಭಿಯಾನ ಮುಗಿಸಿದ್ದಾರೆ. ಸೆಮಿಫೈನಲ್‌ನಲ್ಲಿ ವಿಶ್ವ 11ನೇ ಶ್ರೇಯಾಂಕಿತ ಚೈನಿಸ್ ಜೋಡಿ ಚೆನ್‌ ಬೊ ಯಾಂಗ್‌-ಲಿಯು ಯಿ ಎದುರು 19-21, 21-18, 12-21 ಸೆಟ್‌ಗಳಲ್ಲಿ ಸೋಲುವ ಮೂಲಕ ತಮ್ಮ ಅಭಿಯಾನ ಮುಗಿಸಿದ್ದಾರೆ. ಈ ಮೂಲಕ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಈ ಜೋಡಿ ಎರಡನೇ ಬಾರಿಗೆ ಕಂಚಿನ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ.

ಇದಕ್ಕೂ ಮೊದಲು ಇಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಪದಕ ಖಚಿತಪಡಿಸಿಕೊಂಡಿತು. ಪುರುಷರ ಡಬಲ್ಸ್‌ನಲ್ಲಿ ಮಾಜಿ ವಿಶ್ವ ನಂ.1 ಜೋಡಿ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿ ಸೆಮಿಫೈನಲ್‌ಗೇರಿತು. ಶುಕ್ರವಾರ ರಾತ್ರಿ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವ ನಂ.3 ಜೋಡಿ ಸಾತ್ವಿಕ್‌-ಚಿರಾಗ್‌, ಮಲೇಷ್ಯಾದ 2 ಬಾರಿ ಒಲಿಂಪಿಕ್‌ ಪದಕ ವಿಜೇತ ಆ್ಯರೊನ್‌ ಚಿಯಾ-ಸೊಹ್‌ ವೂಯ್‌ ಯಿಕ್‌ ವಿರುದ್ಧ 21-12, 21-9ರಲ್ಲಿ ಗೆಲುವು ಸಾಧಿಸಿತು. ಇದರೊಂದಿಗೆ ನಾಲ್ಕು ವರ್ಷಗಳ ಹಿಂದೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿಯಾ-ಸೊಹ್‌ ವಿರುದ್ಧ ಸೋತು ಪದಕ ತಪ್ಪಿಸಿಕೊಂಡಿದ್ದಕ್ಕೆ ಭಾರತೀಯ ಜೋಡಿ ಸೇಡು ತೀರಿಸಿಕೊಂಡಿತು.

 

 

 

ಸಾತ್ವಿಕ್‌-ಚಿರಾಗ್‌ಗೆ ಇದು 2ನೇ ವಿಶ್ವ ಚಾಂಪಿಯನ್‌ಶಿಪ್‌ ಪದಕ. 2022ರಲ್ಲಿ ಈ ಜೋಡಿ ಕಂಚು ಗೆದ್ದಿತ್ತು.  

ಬ್ಯಾಡ್ಮಿಂಟನ್‌ ವಿಶ್ವ ಕೂಟ: ಕ್ವಾರ್ಟರಲ್ಲಿ ಸೋತ ಸಿಂಧು

6ನೇ ಬಾರಿಗೆ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ ಪದಕ ಗೆಲ್ಲುವ ಭಾರತದ ತಾರಾ ಶಟ್ಲರ್‌ ಪಿ.ವಿ.ಸಿಂಧು ಕನಸು ಭಗ್ನಗೊಂಡಿದೆ. ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಸಿಂಧು, ಇಂಡೋನೇಷ್ಯಾದ ಪುತ್ರಿ ಕುಸುಮ ವರ್ದನಿ ವಿರುದ್ಧ 14-21, 21-13, 16-21 ಗೇಮ್‌ಗಳಲ್ಲಿ ಪರಾಭವಗೊಂಡರು. ಇನ್ನು, ಮಿಶ್ರ ಡಬಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಧೃವ್‌ ಕಪಿಲಾ ಹಾಗೂ ತನಿಶಾ ಕ್ರಾಸ್ಟೋ ಜೋಡಿ ಸಹ ಸೋತು ಹೊರಬಿತ್ತು. ವಿಶ್ವ ನಂ.4 ಜೋಡಿ, ಮಲೇಷ್ಯಾದ ಚೆನ್‌ ಟಾಂಗ್‌ ಹಾಗೂ ತೊ ಇ ವೀ ವಿರುದ್ಧ 15-21, 13-21ರಲ್ಲಿ ಸೋಲುಂಡಿತು.

ಜೋಕೋ, ಆಲ್ಕರಜ್‌, ಸಬಲೆಂಕಾ ಪ್ರಿ ಕ್ವಾರ್ಟರ್‌ಗೆ

ನ್ಯೂಯಾರ್ಕ್‌: ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯಲ್ಲಿ ದಿಗ್ಗಜ ಆಟಗಾರ ನೋವಾಕ್‌ ಜೋಕೋವಿಚ್‌ ಪ್ರಿ ಕ್ವಾರ್ಟರ್‌ ಫೈನಲ್ ಪ್ರವೇಶಿಸಿದ್ದಾರೆ.

ಸರ್ಬಿಯಾದ ಮಾಜಿ ವಿಶ್ವ ನಂ1. ಜೋಕೋವಿಚ್‌, ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ಬ್ರಿಟನ್‌ನ ಕ್ಯಾಮರೂನ್‌ ನೋರಿ ವಿರುದ್ಧ 6-4, 6-7(4/7), 6-2, 6-3 ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. 2ನೇ ಶ್ರೇಯಾಂಕಿತ, ಸ್ಪೇನ್‌ನ ಯುವ ಸೂಪರ್‌ಸ್ಟಾರ್‌ ಕಾರ್ಲೊಸ್‌ ಆಲ್ಕರಜ್‌ ಅವರು 32ನೇ ಶ್ರೇಯಾಂಕಿತ, ಇಟಲಿಯ ಲುಸಿಯಾನೊ ಡಾರ್ಡೆರಿ ವಿರುದ್ಧ 6-2, 6-4, 6-0 ಸೆಟ್‌ಗಳಲ್ಲಿ ಗೆದ್ದು ಅಂತಿಮ 16ರ ಘಟ್ಟ ಪ್ರವೇಶಿಸಿದರು. ಅಮೆರಿಕದ 4ನೇ ಶ್ರೇಯಾಂಕಿತ ಟೇಲರ್‌ ಫ್ರಿಟ್ಜ್‌ ಕೂಡಾ 3ನೇ ಸುತ್ತಿನಲ್ಲಿ ಗೆದ್ದರು.

ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಆಟಗಾರ್ತಿ, ಬೆಲಾರಸ್‌ನ ಅರೈನಾ ಸಬಲೆಂಕಾ ಅವರು ಕೆನಡಾದ 31ನೇ ಶ್ರೇಯಾಂಕಿತೆ, ಲೆಯ್ಲಾ ಫೆರ್ನಾಂಡೆಜ್‌ ವಿರುದ್ಧ 6-3, 7-6(7/2) ಸೆಟ್‌ಗಳಲ್ಲಿ ಜಯಗಳಿಸಿದರು.

ಅನಿರುದ್ಧ್-ವಿಜಯ್‌ ಜೋಡಿ ಶುಭಾರಂಭ

ಪುರುಷರ ಡಬಲ್ಸ್‌ನಲ್ಲಿ ಭಾರತದ ಅನಿರುದ್ಧ್‌ ಚಂದ್ರಶೇಕರ್‌ ಹಾಗೂ ವಿಜಯ್‌ ಪ್ರಶಾಂತ್ ಜೋಡಿ ಶುಭಾರಂಭ ಮಾಡಿತು. ಈ ಜೋಡಿ ಮೊದಲ ಸುತ್ತಿನಲ್ಲಿ ಅಮೆರಿಕದ ಕ್ರಿಸ್ಟಿಯನ್‌ ಹ್ಯಾರಿಸನ್‌-ಎವಾನ್‌ ಕಿಂಗ್‌ ವಿರುದ್ಧ 3-6, 6-3, 6-4 ಸೆಟ್‌ಗಳಲ್ಲಿ ಗೆದ್ದಿತು. ಆದರೆ ಶ್ರೀರಾಮ್‌ ಬಾಲಾಜಿ-ರಿಥ್ವಿಕ್‌ ಬೊಲ್ಲಿಪಲ್ಲಿ ಜೋಡಿ ಮೊದಲ ಸುತ್ತಿನಲ್ಲೇ ಸೋತು ಹೊರಬಿತ್ತು.

ಕಬಡ್ಡಿ: ಯುಪಿ, ಮುಂಬಾಗೆ ಜಯ

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್‌ನಲ್ಲಿ ಯುಪಿ ಯೋಧಾಸ್‌, ಯು ಮುಂಬಾ ಶುಭಾರಂಭ ಮಾಡಿವೆ. ಶನಿವಾರ ನಡೆದ ಮೊದಲ ಪಂದ್ಯದಲ್ಲಿ ತೆಲುಗು ಟೈಟಾನ್ಸ್‌ ವಿರುದ್ಧ 40-35 ಅಂಕಗಳಲ್ಲಿ ಜಯಗಳಿಸಿತು. ಕನ್ನಡಿಗ ಗಗನ್‌ ಗೌಡ 14 ಅಂಕ ಸಂಪಾದಿಸಿ, ಯೋಧಾಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ನಾಯಕ ಸುಮಿತ್‌ ಸಂಗ್ವಾನ್‌ 8, ಗುಮಾನ್‌ ಸಿಂಗ್ 7 ಅಂಕ ಗಳಿಸಿದರು. ಟೈಟಾನ್ಸ್‌ ಪರ ವಿಜಯ್‌ ಮಲಿಕ್‌ ಅಂಕ ಗಳಿಸಿದರೂ, ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ದಿನದ 2ನೇ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ವಿರುದ್ಧ ಯು ಮುಂಬಾ ಟೈ ಬ್ರೇಕರ್‌ನಲ್ಲಿ ಗೆದ್ದಿತು. ನಿಗದಿತ ಅವಧಿ ಮುಕ್ತಾಯಕ್ಕೆ 2 ತಂಡಗಳು ತಲಾ 29 ಅಂಕ ಗಳಿಸಿದ್ದವು. ಟೈ ಬ್ರೇಕರ್‌ನಲ್ಲಿ 6-5 ಅಂಕಗಳಿಂದ ಮುಂಬಾ ಗೆದ್ದಿತು.

ಇಂದಿನ ಪಂದ್ಯಗಳು

ತಲೈವಾಸ್‌-ಯು ಮುಂಬಾ, ರಾತ್ರಿ 8ಕ್ಕೆ

ಹರ್ಯಾಣ-ಬೆಂಗಾಲ್‌, ರಾತ್ರಿ 9ಕ್ಕೆ

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Good News for RCB Fans: ಬೆಂಗಳೂರಿನಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ? KSCA-BCCI ಮಾತುಕತೆ
ಕಬಡ್ಡಿ ಟೂರ್ನಿ ವೇಳೆಯಲ್ಲೇ ಪ್ಲೇಯರ್‌ ರಾಣಾ ಬಲ್ಚೌರಿಯಾ ಕೊ*ಲೆ!