ರಣಜಿ ಟ್ರೋಫಿ: ಕರ್ನಾಟಕದ ಫೈನಲ್ ಕನಸು ಭಗ್ನಗೊಳಿಸಿದ ಪೂಜಾರ

By Web DeskFirst Published Jan 28, 2019, 11:20 AM IST
Highlights

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್’ನಲ್ಲಿ 275 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಸೌರಾಷ್ಟ್ರ ಕೇವಲ 236 ರನ್’ಗಳಿಗೆ ಸರ್ವಪತನ ಕಂಡು 39 ರನ್’ಗಳ ಹಿನ್ನಡೆ ಅನುಭವಿಸಿತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 239 ಬಾರಿಸಿ ಸೌರಾಷ್ಟ್ರಕ್ಕೆ 279 ರನ್’ಗಳ ಗುರಿ ನೀಡಿತ್ತು.

ಬೆಂಗಳೂರು[ಜ.28]: ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ ಹಾಗೂ ಸೌರಾಷ್ಟ್ರದ ಮಧ್ಯಮ ಕ್ರಮಾಂಕದ ಅನುಭವಿ ಬ್ಯಾಟ್ಸ್’ಮನ್ ಶೆಲ್ಡಾನ್ ಜಾಕ್ಸನ್[101] ಆಕರ್ಷಕ ಶತಕದ ನೆರವಿನಿಂದ ಸೌರಾಷ್ಟ್ರ ತಂಡವು 5 ವಿಕೆಟ್’ಗಳಿಂದ ಕರ್ನಾಟಕವನ್ನು ಮಣಿಸಿ 2018-19ನೇ ಸಾಲಿನ ರಣಜಿ ಟೂರ್ನಿ ಫೈನಲ್ ಪ್ರವೇಶಿಸಿದೆ.

Saurashtra Won by 5 Wicket(s) (Qualified) Scorecard:https://t.co/DS9VGwYHMP

— BCCI Domestic (@BCCIdomestic)

ಅಂತಿಮ ದಿನ ಸೌರಾಷ್ಟ್ರ ಗೆಲ್ಲಲು ಕೇವಲ 55 ರನ್’ಗಳ ಅವಶ್ಯಕತೆಯಿತ್ತು. ನಾಲ್ಕನೇ ದಿನ ಶತಕ ಬಾರಿಸಿದ್ದ ಚೇತೇಶ್ವರ್ ಪೂಜಾರ ಅಜೇಯರಾಗುಳಿದರೆ, ಶೆಲ್ಡನ್ ಜಾಕ್ಸನ್ ಶತಕ ಸಿಡಿಸಿ ವಿನಯ್ ಕುಮಾರ್ ಬೌಲಿಂಗ್’ನಲ್ಲಿ ವಿಕೆಟ್ ಒಪ್ಪಿಸಿದರು. ನಾಲ್ಕನೇ ದಿನ 279 ರನ್’ಗಳ ಸವಾಲಿನ ಗುರಿ ಬೆನ್ನತ್ತಿದ್ದ ಸೌರಾಷ್ಟ್ರ ಒಂದು ಹಂತದಲ್ಲಿ 23 ರನ್’ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ನಾಲ್ಕನೇ ವಿಕೆಟ್’ಗೆ ಈ ಪೂಜಾರ-ಜಾಕ್ಸನ್ ಜೋಡಿ 214 ರನ್’ಗಳ ಜತೆಯಾಟವಾಡುವ ಮೂಲಕ ಸೌರಾಷ್ಟ್ರ ಗೆಲುವಿನಲ್ಲಿ ಪ್ರಮುಖ ಮಹತ್ವದ ಪಾತ್ರವಹಿಸಿತು. ಇದಾದ ಕೆಲ ಹೊತ್ತಿನಲ್ಲೇ ರೋನಿತ್ ಮೋರೆ ಸೌರಾಷ್ಟ್ರದ ಅರ್ಪಿತ್ ವಸುವಾಡ ಅವರ ವಿಕೆಟ್ ಪಡೆದರಾದರೂ, ಅಷ್ಟರಲ್ಲಾಗಲೇ ಸೌರಾಷ್ಟ್ರ ಗೆಲುವಿನ ಹೊಸ್ತಿಲಲ್ಲಿ ಬಂದು ನಿಂತಿತ್ತು. ಚೇತೇಶ್ವರ್ ಪೂಜಾರ ಬರೋಬ್ಬರಿ 266 ಎಸೆತಗಳನ್ನು ಎದುರಿಸಿ 17 ಬೌಂಡರಿ ಸಹಿತ ಅಜೇಯ 131 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೆಲವು ಕೆಟ್ಟ ತೀರ್ಪುಗಳು ಕರ್ನಾಟಕಕ್ಕೆ ಮುಳುವಾಗಿ ಪರಿಣಮಿಸಿತು. 

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕರ್ನಾಟಕ ಮೊದಲ ಇನ್ನಿಂಗ್ಸ್’ನಲ್ಲಿ 275 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಸೌರಾಷ್ಟ್ರ ಕೇವಲ 236 ರನ್’ಗಳಿಗೆ ಸರ್ವಪತನ ಕಂಡು 39 ರನ್’ಗಳ ಹಿನ್ನಡೆ ಅನುಭವಿಸಿತು. ಆ ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ 239 ಬಾರಿಸಿ ಸೌರಾಷ್ಟ್ರಕ್ಕೆ 279 ರನ್’ಗಳ ಗುರಿ ನೀಡಿತ್ತು. 

ಇನ್ನು ಫೈನಲ್ ಪಂದ್ಯವು ಫೆಬ್ರವರಿ 03ರಿಂದ ವಿದರ್ಭ ಹಾಗೂ ಸೌರಾಷ್ಟ್ರ ನಡುವೆ ನಡೆಯಲಿದ್ದು, ನಾಗ್ಪುರ ಪ್ರಶಸ್ತಿ ಸುತ್ತಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
 

click me!