
ಭುವನೇಶ್ವರ್: ಒಲಿಂಪಿಕ್ಸ್, ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ ಫೆಡರೇಶನ್ ಕಪ್ ಅಥ್ಲೆಟಿಕ್ಸ್ ಕೂಟದ ಜಾವೆಲಿನ್ ಎಸೆತದಲ್ಲಿ ನಿರೀಕ್ಷೆಯಂತೆಯೇ ಚಿನ್ನದ ಪದಕ ಗೆದ್ದಿದ್ದಾರೆ. ಆದರೆ ಅವರಿಗೆ ಕರ್ನಾಟಕದ ಡಿ.ಪಿ.ಮನು ತೀವ್ರ ಪೈಪೋಟಿ ನೀಡಿದ್ದು, ಅಲ್ಪದರಲ್ಲೇ ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.
ಮೊದಲ ಪ್ರಯತ್ನದಲ್ಲೇ 82.06 ಮೀಟರ್ ದೂರಕ್ಕೆ ಜಾವೆಲಿನ್ ಎಸೆದ ಮನು, ಮೊದಲ 3 ಪ್ರಯತ್ನಗಳ ಬಳಿಕ ಅಗ್ರಸ್ಥಾನದಲ್ಲಿದ್ದರು. ಆದರೆ ಹರ್ಯಾಣದ ನೀರಜ್ 4ನೇ ಎಸೆತದಲ್ಲಿ 82.27 ಮೀ. ದಾಖಲಿಸಿ ಚಿನ್ನ ತಮ್ಮದಾಗಿಸಿಕೊಂಡರು.
Sunil Chhetri Retires: ಭಾರತದ ಫುಟ್ಬಾಲ್ ನಾಯಕ ಚೆಟ್ರಿ ದಿಢೀರ್ ವಿದಾಯ..!
ಇದರೊಂದಿಗೆ ಮನು ಅವರ ಒಲಿಂಪಿಕ್ಸ್ ಪ್ರವೇಶ ಕನಸು ಕೂಡಾ ಭಗ್ನಗೊಂಡಿತು. ಒಲಿಂಪಿಕ್ಸ್ ಅರ್ಹತೆಗಾಗಿ 85.50 ಮೀ. ದೂರ ದಾಖಲಿಸಬೇಕಿತ್ತು. ಭಾರಿ ನಿರೀಕ್ಷೆ ಮೂಡಿಸಿದ್ದ ಕಿಶೋರ್ ಜೆನಾ(75.49 ಮೀ.) 5ನೇ ಸ್ಥಾನಿಯಾದರು.
ಪೂವಮ್ಮ, ಅಭಿನಯ, ಸ್ನೇಹಾಗೆ ಸ್ವರ್ಣ
ಕೂಟದ ಕೊನೆ ದಿನವಾರ ಕರ್ನಾಟಕ 3 ಚಿನ್ನ ಗೆದ್ದಿತು. ಮಹಿಳೆಯರ 400 ಮೀ. ಸ್ಪರ್ಧೆಯಲ್ಲಿ ಪೂವಮ್ಮ ರಾಜು 53.32 ಸೆಕೆಂಡ್ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರೆ, ಮಹಿಳೆಯರ ಹೈಜಂಪ್ನಲ್ಲಿ ಅಭಿನಯ ಶೆಟ್ಟಿ(1.77 ಮೀ.) ಕೂಡಾ ಬಂಗಾರ ಪಡೆದರು. ಮತ್ತೊಂದು ಚಿನ್ನ 100 ಮೀ. ಓಟದಲ್ಲಿ 11.63 ಸೆಕೆಂಡ್ಗಳಲ್ಲಿ ಗುರಿ ತಲುಪಿದ ಸ್ನೇಹಾಗೆ ಲಭಿಸಿತು. 4 ದಿನಗಳ ಕೂಟದಲ್ಲಿ ಕರ್ನಾಟಕ ಒಟ್ಟು 5 ಚಿನ್ನ, 3 ಬೆಳ್ಳಿಯೊಂದಿಗೆ ಅಭಿಯಾನ ಕೊನೆಗೊಳಿಸಿತು.
ಥಾಯ್ಲೆಂಡ್ ಓಪನ್: 2ನೇ ಸುತ್ತಿಗೆ ಸಾತ್ವಿಕ್-ಚಿರಾಗ್
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಪುರುಷ ಡಬಲ್ಸ್ ಜೋಡಿ ಸಾತ್ವಿಕ್-ಚಿರಾಗ್ ಶೆಟ್ಟಿ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಆದರೆ ಎಚ್.ಎಸ್.ಪ್ರಣಯ್ ಸೋತು ಹೊರಬಿದ್ದಿದ್ದಾರೆ.
ಮೊದಲ ಸುತ್ತಿನಲ್ಲಿ ಸಾತ್ವಿಕ್-ಚಿರಾಗ್ಗೆ ಮಲೇಷ್ಯಾದ ನೂರ್ ಅಯೂಬ್ಪ-ತಾನ್ ವೀ ವಿರುದ್ಧ 21-13, 21-13ರಲ್ಲಿ ಗೆಲುವು ಲಭಿಸಿತು. ಪುರುಷರ ಸಿಂಗಲ್ಸ್ನಲ್ಲಿ ಪ್ರಣಯ್, ಭಾರತದವರೇ ಆದ ಮೀರಬಾ ಲುವಾಂಗ್ ವಿರುದ್ಧ 19-21, 18-21ರಲ್ಲಿ ಸೋಲನುಭವಿಸಿದರು. ಕಿರಣ್ ಜಾರ್ಜ್ ಕೂಡಾ ಪರಾಭವಗೊಂಡರು. ಮಹಿಳಾ ಸಿಂಗಲ್ಸ್ನಲ್ಲಿ ಅಶ್ಮಿತಾ ಗೆಲುವು ಸಾಧಿಸಿದರೂ, ಉನ್ನತಿ ಹೂಡಾ, ಮಾಳವಿಕಾ, ಇಮಾದ್ ಫಾರೂಕಿ, ಆಕರ್ಷಿ ಕಶ್ಯಪ್ ಅಭಿಯಾನ ಕೊನೆಗೊಳಿಸಿದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.