ಲೋಧಾ ಸಮಿತಿ ವಿರುದ್ಧ ಮತ್ತೆ ಠಾಕೂರ್ ಗರಂ

By Suvarna Web DeskFirst Published Dec 21, 2016, 3:56 PM IST
Highlights

ನ್ಯಾ. ಲೋಧಾ ಸಮಿತಿಯ ಸಮಿತಿಯ ಶಿಫಾರಸುಗಳಲ್ಲಿ ಬಹುತೇಕ ಅಂಶಗಳನ್ನು ಬಿಸಿಸಿಐ ಈಗಾಗಲೇ ಅಳವಡಿಸಿಕೊಂಡಿದೆ.

ನವದೆಹಲಿ(ಡಿ.21): ಕ್ರಿಕೆಟ್ ಆಡಳಿತದ ಸುಧಾರಣೆಗಾಗಿ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನ್ಯಾ. ಲೋಧಾ ಸಮಿತಿ ಬಿಸಿಸಿಐಗೆ ಕಳೆದೆರಡು ತಿಂಗಳಿಂದ ಸಮರ್ಪಕ ಕಾಲಾವಕಾಶ ನೀಡದೇ ಸತಾಯಿಸುತ್ತಿದೆ ಎಂದು ಅನುರಾಗ್ ಠಾಕೂರ್ ಕಿಡಿಕಾರಿದ್ದಾರೆ.

ಸಮಿತಿಯ ಶಿಫಾರಸುಗಳಲ್ಲಿ ಬಹುತೇಕ ಅಂಶಗಳನ್ನು ಬಿಸಿಸಿಐ ಈಗಾಗಲೇ ಅಳವಡಿಸಿಕೊಂಡಿದೆ. ಆದರೆ, ಕೆಲವಾರು ಅಂಶಗಳನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳು ಒಪ್ಪುತ್ತಿಲ್ಲ. ಇದನ್ನು ಲೋಧಾ ಸಮಿತಿಗೆ ಮನವರಿಕೆ ಮಾಡಲು ಬಿಸಿಸಿಐಯು ಶಕ್ತಿ ಮೀರಿ ಪ್ರಯತ್ನಿಸಿದ್ದರೂ ಅದು ಪ್ರಯೋಜನವಾಗಿಲ್ಲ ಎಂದು ಠಾಕೂರ್ ಬೇಸರ ವ್ಯಕ್ತಪಡಿಸಿದ್ದಾರೆ.

Latest Videos

ನ್ಯಾಯಾಂಗದ ಮೇಲೆ ವಿಶ್ವಾಸ

ಇನ್ನು ಲೋಧಾ ಸಮಿತಿಯ ಶಿಫಾರಸುಗಳನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಸುಪ್ರೀಂ ಕೋರ್ಟ್‌'ಗೆ ಸುಳ್ಳು ಸಾಕ್ಷ್ಯ ನೀಡಿದ ಆರೋಪಕ್ಕೆ ಗುರಿಯಾಗಿರುವ ಅನುರಾಗ್ ಠಾಕೂರ್, ಪ್ರಕರಣದಿಂದ ದೋಷಮುಕ್ತವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ನ್ಯಾಯಾಂಗದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ನಿಸ್ಸಂಶಯವಾಗಿಯೂ ಈ ವಿಷ ವರ್ತುಲದಿಂದ ಹೊರಬರುವ ಭರವಸೆಯೂ ನನಗಿದೆ’’ ಎಂದರು. ಅಂದಹಾಗೆ ಲೋಧಾ ಸಮಿತಿಯ ಶಿಫಾರಸುಗಳಂತೆ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಮೇಲುಸ್ತುವಾರಿ ಸಮಿತಿಗೆ ಕಂಟ್ರೋಲರ್ ಹಾಗೂ ಆಡಿಟರ್ ಜನರಲ್ (ಸಿಎಜಿ) ಅವರನ್ನು ಸದಸ್ಯರನ್ನಾಗಿ ನೇಮಿಸುವುದರಿಂದ ಬಿಸಿಸಿಐನಲ್ಲಿ ಸರ್ಕಾರದ ನೇರ ಹಸ್ತಕ್ಷೇಪವಾದಂತಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

click me!