ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಪ್ರಶಸ್ತಿ ಮೇಲೆ ಕಣ್ಣಿಟ್ಟ ಸಿಂಧು

By Web DeskFirst Published Jul 23, 2019, 12:58 PM IST
Highlights

ಜಪಾನ್ ಓಪನ್ ಟೂರ್ನಿಯಿಂದ ಕಡೇ ಕ್ಷಣದಲ್ಲಿ ಭಾರತದ ಸ್ಟಾರ್ ಶಟ್ಲರ್ ಸೈನಾ ನೆಹ್ವಾಲ್ ಹಿಂದೆ ಸರಿದಿದ್ದಾರೆ. ಇನ್ನು ಪಿ.ವಿ ಸಿಂಧು ಈ ಋತುವಿನ ಚೊಚ್ಚಲ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ಟೋಕಿಯೋ[ಜು.23]: ಈ ಋುತುವಿನಲ್ಲಿ ಭಾರತದ ತಾರಾ ಶಟ್ಲರ್‌ ಸಿಂಧು ಮೊದಲ ಪ್ರಶಸ್ತಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಮಂಗಳವಾರದಿಂದ ಇಲ್ಲಿ ಆರಂಭವಾಗಲಿರುವ ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ 7 ತಿಂಗಳ ಪ್ರಶಸ್ತಿ ಕೊರತೆಯನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ಸಿಂಧು ಕಣಕ್ಕಿಳಿಯುತ್ತಿದ್ದಾರೆ.

ಇಂಡೋನೇಷ್ಯಾ ಓಪನ್ 2019: ಸಿಂಧು ಪ್ರಶಸ್ತಿ ಕನಸು ಭಗ್ನ!

ಇನ್ನೂ ಫಿಟ್ನೆಸ್‌ ಸಮಸ್ಯೆಯಿಂದಾಗಿ ಇಂಡೋನೇಷ್ಯಾ ಓಪನ್‌ನಿಂದ ಹಿಂದೆ ಸರಿದಿದ್ದ ಭಾರತದ ಮತ್ತೊಬ್ಬ ಶಟ್ಲರ್‌ ಸೈನಾ ನೆಹ್ವಾಲ್‌ ಕಡೇ ಕ್ಷಣದಲ್ಲಿ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. 

ಕಳೆದ ಭಾನುವಾರವಷ್ಟೇ ಒಲಿಂಪಿಕ್‌ ಬೆಳ್ಳಿ ವಿಜೇತೆ ಸಿಂಧು, ಜಕಾರ್ತದಲ್ಲಿ ನಡೆದಿದ್ದ ಇಂಡೋನೇಷ್ಯಾ ಓಪನ್‌ನ ಫೈನಲ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ವಿರುದ್ಧ ಸೋತು, ಈ ಋುತುವಿನ ಮೊದಲ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ತಪ್ಪಿಸಿಕೊಂಡಿದ್ದರು. ಜಪಾನ್‌ನ ಓಪನ್‌ನಲ್ಲಿ ಸಿಂಧು, ಮೊದಲ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ಕ್ರಿಸ್ಟಿಗಿಲ್ಮೋರ್‌ ಅಥವಾ ಜಪಾನ್‌ನ ಅಯಾ ಒಹ್ರಿ ರನ್ನು ಎದುರಿಸಲಿದ್ದಾರೆ.

ಪುರುಷರ ಸಿಂಗಲ್ಸ್‌ನಲ್ಲಿ ಭಾರತದ ಕೆ. ಶ್ರೀಕಾಂತ್‌ ಹಾಗೂ ಎಚ್‌.ಎಸ್‌. ಪ್ರಣಯ್‌ ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ. ಅಂ.ರಾ. ಟೂರ್ನಿಗಳಲ್ಲಿ ಈ ಇಬ್ಬರೂ ಶಟ್ಲರ್‌ಗಳು 5 ಬಾರಿ ಮುಖಾಮುಖಿಯಾಗಿದ್ದಾರೆ. ಉಳಿದಂತೆ ಬಿ. ಸಾಯಿ ಪ್ರಣೀತ್‌, ಸಮೀರ್‌ ವರ್ಮಾ, ಪ್ರಣವ್‌ ಜೆರ್ರಿ ಚೋಪ್ರಾ, ಡಬಲ್ಸ್‌ನಲ್ಲಿ ಸಾತ್ವಿಕ್‌ಸಾಯಿರಾಜ್‌, ಚಿರಾಗ್‌ ಶೆಟ್ಟಿ, ಮನು ಅತ್ರಿ, ಬಿ. ಸುಮಿತ್‌ ರೆಡ್ಡಿ, ಮಹಿಳಾ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ, ಎನ್‌. ಸಿಕ್ಕಿ ರೆಡ್ಡಿ ಕಣದಲ್ಲಿದ್ದಾರೆ.
 

click me!