ವಿಶ್ವದ ನಂಬರ್ 01 ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಹಾಗೂ ವಿಶ್ವದ ನಂ.1 ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ನಡುವಿನ ಕಾದಾಟಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಮೈದಾನ ಸಜ್ಜಾಗಿದೆ.
ಬೆಂಗಳೂರು[ಮಾ.28]: ವಿಶ್ವದ ನಂ.1 ಏಕದಿನ ವೇಗಿ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಹೊರಬಂದು ಮತ್ತೆ ಆರ್ಭಟಿಸಲು ಕಾತರರಾಗಿದ್ದಾರೆ. ಬುಮ್ರಾ ದಾಳಿಗೆ ತಕ್ಕ ಉತ್ತರ ನೀಡಲು ವಿಶ್ವದ ನಂ.1 ಏಕದಿನ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ. ಭಾರತದ ಇಬ್ಬರು ಶ್ರೇಷ್ಠ ಕ್ರಿಕೆಟಿಗರ ನಡುವಿನ ಪೈಪೋಟಿಗೆ ಸಾಕ್ಷಿಯಾಗಲು ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳು ಕಾಯುತ್ತಿದ್ದು, ರೋಚಕ ಹಣಾಹಣಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದೆ.
IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!
12ನೇ ಆವೃತ್ತಿಯ ಐಪಿಎಲ್ನಲ್ಲಿ ಸೋಲಿನ ಆರಂಭ ಕಂಡಿರುವ ಎರಡೂ ತಂಡಗಳು ಮೊದಲ ಗೆಲುವಿಗಾಗಿ ಹುಡುಕಾಟ ನಡೆಸಲಿವೆ. ಚೆನ್ನೈ ಸೂಪರ್ ಕಿಂಗ್ಸ್ನ ಸ್ಪಿನ್ ಖೆಡ್ಡಾಕ್ಕೆ ಬಿದ್ದು ಆರ್ಸಿಬಿ ಮುಖಭಂಗಕ್ಕೊಳಗಾದರೆ, ಡೆಲ್ಲಿಯ ಸಿಡಿಲಬ್ಬರದ ಬ್ಯಾಟಿಂಗ್ಗೆ ಮುಂಬೈ ಕಕ್ಕಾಬಿಕ್ಕಿಯಾಗಿತ್ತು. ಜತೆಗೆ ಬುಮ್ರಾ ಗಾಯಗೊಂಡಿದ್ದು ಸಹ ಮುಂಬೈಗೆ ಮಾನಸಿಕ ಒತ್ತಡ ಹೇರಿತ್ತು. ಆದರೆ ಬುಮ್ರಾ ಬುಧವಾರ ನೆಟ್ಸ್ ಅಭ್ಯಾಸ ನಡೆಸಿ, ಪಂದ್ಯಕ್ಕೆ ಲಭ್ಯರಿರುವುದಾಗಿ ಸೂಚನೆ ನೀಡಿದ್ದರಿಂದ ಮುಂಬೈ ಪಾಳಯ ನಿಟ್ಟುಸಿರು ಬಿಟ್ಟಿದೆ. ಜತೆಗೆ ಈ ಪಂದ್ಯಕ್ಕೆ ಲಂಕಾ ವೇಗಿ ಲಸಿತ್ ಮಾಲಿಂಗ ಸಹ ಲಭ್ಯರಿರಲಿದ್ದಾರೆ. ಇದು ಮುಂಬೈ ಬೌಲಿಂಗ್ಗೆ ಬಲ ನೀಡಲಿದೆ.
RCB ತಂಡಕ್ಕೆ ಬೌಲಿಂಗ್ ಮಾಡಿದ ಕರ್ನಾಟಕದ ಬುಮ್ರಾ..!
ಕೊಹ್ಲಿ, ಎಬಿಡಿ ಮೇಲೆ ಒತ್ತಡ: ಬೆಂಗಳೂರು ತಂಡ ಪ್ರತಿ ಬಾರಿಯಂತೆ ವಿರಾಟ್ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆಯೇ ಅವಲಂಬಿತಗೊಂಡಿದೆ. ತಂಡ ಗೆಲ್ಲಬೇಕು ಎಂದರೆ ಈ ಇಬ್ಬರಲ್ಲಿ ಒಬ್ಬರು ದೊಡ್ಡ ಇನ್ನಿಂಗ್ಸ್ ಆಡಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಹ್ಲಿ ಹಾಗೂ ಎಬಿಡಿ ಅತ್ಯುತ್ತಮ ದಾಖಲೆ ಹೊಂದಿದ್ದು, ಆರ್ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಸ್ಫೋಟಕ ಆಟ ನೋಡಲು ಕಾಯುತ್ತಿದ್ದಾರೆ.
ಪಾರ್ಥೀವ್ ಪಟೇಲ್, ಶಿಮ್ರೊನ್ ಹೆಟ್ಮೇಯರ್, ಮೋಯಿನ್ ಅಲಿ, ಕಾಲಿನ್ ಡಿ ಗ್ರಾಂಡ್ಹೋಮ್, ಶಿವಂ ದುಬೆ ಜವಾಬ್ದಾರಿ ಅರಿತು ಬ್ಯಾಟ್ ಮಾಡಬೇಕಿದೆ. ಆರ್ಸಿಬಿ ಬೌಲಿಂಗ್ ಪಡೆ ಈ ಬಾರಿ ಸುಧಾರಣೆಗೊಂಡಂತಿದೆ. ಯಜುವೇಂದ್ರ ಚಹಲ್ ಪ್ರಮುಖ ಅಸ್ತ್ರವಾಗಿ ಕಣಕ್ಕಿಳಿಯಲಿದ್ದಾರೆ. ದೆಹಲಿ ವೇಗಿ ನವ್ದೀಪ್ ಸೈನಿ ನಿರೀಕ್ಷೆ ಹೆಚ್ಚಿಸಿದ್ದಾರೆ.
RCB ಪಂದ್ಯ: ಯೋಧರಿಗೆ ಟಿಕೆಟ್ ಉಚಿತ
ಮುಂಬೈ ಬ್ಯಾಟಿಂಗ್ ಬಲಿಷ್ಠ: 3 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅತ್ಯಂತ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್, ಯುವರಾಜ್ ಸಿಂಗ್, ಹಾರ್ದಿಕ್, ಕೃನಾಲ್ ಪಾಂಡ್ಯ, ಕಿರೋನ್ ಪೊಲ್ಲಾರ್ಡ್, ಬೆನ್ ಕಟ್ಟಿಂಗ್ ಯಾರೊಬ್ಬರು ಸಿಡಿದರೂ, ಆರ್ಸಿಬಿ ಬೌಲರ್ಗಳಿಗೆ ಉಳಿಗಾಲವಿರುವುದಿಲ್ಲ. ಜಮ್ಮು-ಕಾಶ್ಮೀರದ 17 ವರ್ಷದ ವೇಗಿ ರಸಿಖ್ ಸಲಾಂ ಮೊದಲ ಪಂದ್ಯದಲ್ಲೇ ಎಲ್ಲರ ಗಮನ ಸೆಳೆದಿದ್ದರು. ಆರ್ಸಿಬಿ ವಿರುದ್ಧ ಅವರನ್ನು ಅಚ್ಚರಿಯ ಅಸ್ತ್ರವಾಗಿ ಬಳಸುವ ನಿರೀಕ್ಷೆ ಇದೆ.
ಆರ್ಸಿಬಿ ಕಳಪೆ ದಾಖಲೆ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬೈ ವಿರುದ್ಧ ಆರ್ಸಿಬಿ ಕಳಪೆ ದಾಖಲೆ ಹೊಂದಿದೆ. ಇಲ್ಲಿ ಆರ್ಸಿಬಿ ಕೇವಲ 2 ಪಂದ್ಯಗಳಲ್ಲಿ ಗೆದ್ದರೆ, ಮುಂಬೈ 7 ಪಂದ್ಯಗಳಲ್ಲಿ ಜಯಿಸಿದೆ. ಇತಿಹಾಸದ ವಿರುದ್ಧ ಈಜಬೇಕಾದ ಒತ್ತಡದಲ್ಲಿ ಬೆಂಗಳೂರು ತಂಡ ಇದೆ.
ಒಟ್ಟು ಮುಖಾಮುಖಿ: 23
ಆರ್ಸಿಬಿ: 09
ಮುಂಬೈ: 14
ಸಂಭವನೀಯ ಆಟಗಾರರ ಪಟ್ಟಿ
ಆರ್ಸಿಬಿ: ಪಾರ್ಥೀವ್ ಪಟೇಲ್, ವಿರಾಟ್ ಕೊಹ್ಲಿ (ನಾಯಕ), ಎಬಿ ಡಿವಿಲಿಯರ್ಸ್, ಶಿಮ್ರೊನ್ ಹೆಟ್ಮೇಯರ್, ಮೋಯಿನ್ ಅಲಿ, ಕಾಲಿನ್ ಡಿ ಗ್ರಾಂಡ್ಹೋಮ್, ಶಿವಂ ದುಬೆ, ನವ್ದೀಪ್ ಸೈನಿ, ಉಮೇಶ್ ಯಾದವ್, ಯಜುವೇಂದ್ರ ಚಹಲ್, ಸಿರಾಜ್/ನೇಗಿ.
ಮುಂಬೈ: ರೋಹಿತ್ ಶರ್ಮಾ (ನಾಯಕ), ಕ್ವಿಂಟನ್ ಡಿ ಕಾಕ್, ಸೂರ್ಯಕುಮಾರ್, ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ಕಿರೊನ್ ಪೊಲ್ಲಾರ್ಡ್, ಬೆನ್ ಕಟ್ಟಿಂಗ್, ರಸಿಖ್ ಸಲಾಂ, ಜಸ್ಪ್ರೀತ್ ಬುಮ್ರಾ, ಮಾಲಿಂಗ/ಮೆಕ್ಲನಾಘನ್.
ಸ್ಥಳ: ಬೆಂಗಳೂರು, ಪಂದ್ಯ ಆರಂಭ: ರಾತ್ರಿ 8ಕ್ಕೆ, ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ 1
ಪಿಚ್ ರಿಪೋರ್ಟ್
ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್ ಸ್ಪರ್ಧಾತ್ಮಕ ಪಿಚ್ ಆಗಿದ್ದು, ಬ್ಯಾಟ್ಸ್ಮನ್ಗಳಿಗೆ ಅನುಕೂಲವಾಗಲಿದೆ. ಇತ್ತೀಚೆಗೆ ನಡೆದ ಭಾರತ-ಆಸ್ಪ್ರೇಲಿಯಾ ನಡುವಿನ ಪಂದ್ಯದಲ್ಲಿ ರನ್ ಹೊಳೆ ಹರಿದಿತ್ತು. ಸ್ಪಿನ್ನರ್ಗಳ ಪಾತ್ರ ಪ್ರಮುಖವೆನಿಸಲಿದೆ. 180ರಿಂದ 190 ರನ್ ಗುರಿಯನ್ನು ಸುಲಭವಾಗಿ ಬೆನ್ನತ್ತಿದ ಉದಾಹರಣೆ ಇದೆ.
ಚಿನ್ನಸ್ವಾಮಿಯಲ್ಲಿ ‘ಡಾಗ್ಔಟ್’!
ಇದೇ ಮೊದಲ ಬಾರಿಗೆ ಬೆಂಗಳೂರು ಅಭಿಮಾನಿಗಳು ತಮ್ಮ ಸಾಕುಶ್ವಾನಗಳೊಂದಿಗೆ ಐಪಿಎಲ್ ವೀಕ್ಷಿಸಬಹುದಾಗಿದೆ. ಇದಕ್ಕಾಗೇ ಕ್ರೀಡಾಂಗಣದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದ್ದು, ಇದನ್ನು ‘ಡಾಗ್ಔಟ್’ ಎಂದು ಕರೆಯಲಾಗುತ್ತಿದೆ.